"ನನ್ನ ಹಾಗೂ ಯಶ್ ಸ್ನೇಹ ಜೀವನ ಪರ್ಯಂತ ಮುಂದುವರೆಯಲಿದೆ": ಪ್ರಶಾಂತ್ ನೀಲ್
ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಬಿಡುಗಡೆಗೆ ಇನ್ನೆರಡು ದಿನ ಬಾಕಿಯಿದೆ. ಅಭಿಮಾನಿಗಳು ಟಿಕೆಟ್ ಬುಕ್ ಮಾಡಿಕೊಂಡು ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಅಡ್ವಾನ್ ಟಿಕೆಟ್ ಬುಕ್ಕಿಂಗ್ಗೆ ಸಖತ್ ರೆಸ್ಪಾನ್ ಸಿಗಲಿದೆ. ಚಿತ್ರದ ಪ್ರಮೋಷನ್ ಸಹ ಜೋರಾಗಿದೆ.
ನಿರ್ದೇಶಕ ಪ್ರಶಾಂತ್ ನೀಲ್ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ನೀಲ್ ಕೆಲ ಹೇಳಿಕೆಗಳನ್ನು ಟ್ರೋಲ್ ಮಾಡಲಾಗುತ್ತಿದೆ. ಇದೆಲ್ಲದರ ನಡುವೆ ಯಶ್ ಹಾಗೂ ಪ್ರಶಾಂತ್ ನೀಲ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಊಹಾಪೋಹ ಇತ್ತೀಚೆಗೆ ಶುರುವಾಗಿತ್ತು. 'KGF'- 3 ಚಿತ್ರದ ನಿರ್ದೇಶದ ಮಾಡುವ ಬಗ್ಗೆ ನೀಲ್ ಅನುಮಾನ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಕೆಲವರು ಸುಖಾಸುಮ್ಮಗೆ ವದಂತಿ ಹಬ್ಬಿಸಿದ್ದರು. ಟೈಮ್ಸ್ ಆಫ್ ಇಂಡಿಯಾ ಸಂದರ್ಶನವೊಂದರಲ್ಲಿ ತಮ್ಮಿಬ್ಬರ ಒಟನಾಟದ ಬಗ್ಗೆ ನೀಲ್ ಮಾತನಾಡಿದ್ದಾರೆ.

ಯಶ್ ಜೊತೆ ಎರಡು ಸಿನಿಮಾ ಮಾಡಿದ್ದೀರ. ಪ್ರಭಾಸ್ ಜೊತೆ ಈ 'ಸಲಾರ್' ಚಿತ್ರದಲ್ಲಿ ಕೆಲಸ ಮಾಡಿದ್ದೀರ. ಇಬ್ಬರ ನಡುವಿನ ವ್ಯತ್ಯಾಸ ಏನು ಎನ್ನುವ ಪ್ರಶ್ನೆಗೆ ನೀಲ್ ಉತ್ತರಿಸಿದ್ದಾರೆ. "ಇಬ್ಬರ ನಡುವೆ ಸಾಕಷ್ಟು ಸಾಮ್ಯತೆಯಿದೆ. ಇಬ್ಬರಿಗೂ ತಮ್ಮ ಅಭಿಮಾನಿಗಳ ವಿಚಾರದಲ್ಲಿ ಬಹಳ ಜವಾಬ್ದಾರಿಯಿದೆ. ಒಳ್ಳೆ ಸಿನಿಮಾ ಮಾಡಬೇಕು ಎನ್ನುವ ಹಸಿವಿದೆ. ನಿರ್ದೇಶಕರು ಯಾರು ಎನ್ನುವುದನ್ನು ನೋಡದೇ ಒಳ್ಳೆ ಸಿನಿಮಾವನ್ನು ಪ್ರೇಕ್ಷಕರಿಗೆ ನೀಡಲು ಬಯಸುತ್ತಾರೆ. ಅವರ ವೃತ್ತಿಪರತೆ ಹಾಗೂ ಬದ್ಧತೆ ಸಿನಿಮಾ ನಿರ್ಮಾಣದ ಪ್ರತಿ ಹಂತದಲ್ಲೂ ಗೊತ್ತಾಗುತ್ತದೆ"
"ಅವರಿಬ್ಬರ ಸಿನಿಮಾಗಳು ಅವರ ಸ್ಟಾರ್ಡಮ್ನಿಂದಲೇ ಮಾರಾಟವಾಗುತ್ತವೆ. ಪ್ರೇಕ್ಷಕರು ನಮ್ಮ ಕೆಲಸವನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಬಗ್ಗೆ ಹೆಚ್ಚಿನ ಜವಾಬ್ದಾರಿ, ಕಾಳಜಿ ವಹಿಸುತ್ತಾರೆ. ಕೆಲಸಕ್ಕೆ ಇಬ್ಬರೂ ನೀಡುವ ಮೌಲ್ಯ, ಅರ್ಪಣೆ ಭಾವದಲ್ಲಿ ಯಾವುದೇ ವ್ಯತ್ಯಾಸವಿಲ್ಲ" ಎಂದು ನೀಲ್ ಹೇಳಿದ್ದಾರೆ.
ನಾಯಕ ನಟರ ಜೊತೆ ಸಿನಿಮಾ ಮಾಡುವುದು ಅಂದ್ರೆ ಮೊದಲು ಡೇಟಿಂಗ್ ಮಾಡಬೇಕು ಬಳಿಕ ಮದುವೆ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ. ಅಂದ್ರೆ ಮೊದಲಿಗೆ ಇಬ್ಬರು ಒಂದಷ್ಟು ಸಮಯ ಕಳೆದು ಒಬ್ಬರ ಬಗ್ಗೆ ಒಬ್ಬರು ಅರಿತುಕೊಂಡು ಬಳಿಕ ಸಿನಿಮಾ ಮಾಡಬೇಕು. ನಾನು, ಪ್ರಭಾಸ್ ತಿಂಗಳ ಕಾಲ ಒಟ್ಟಿಗೆ ಒಂದಷ್ಟು ಪ್ರಯಾಣ ನಡೆಸಿದ ಬಳಿಕವೇ 'ಸಲಾರ್' ಶುರುವಾಯಿತು. ಕೆಲವೊಮ್ಮೆ ಇಬ್ಬರೂ ಕೂತು ಎಣ್ಣೆ ಹಾಕಿದ್ದೀವಿ ಎಂದು ನಿರ್ದೇಶಕರು ವಿವರಿಸಿದ್ದಾರೆ.

"ಎಲ್ಲರೂ ರಿಸರ್ವ್ಡ್ ಆಗಿರುತ್ತಾರೆ. ಎರಡೂ ವರ್ಷಗಳ ಪ್ರತಿ ದಿನ ಒಟ್ಟಿಗೆ ಸಿನಿಮಾ ಕೆಲಸಗಳನ್ನು ಮಾಡಬೇಕಾಗುತ್ತದೆ. ಇಬ್ಬರ ನಡುವೆ ಒಳ್ಳೆ ಬಾಂಧವ್ಯ ಇಲ್ಲದಿದ್ದರೆ ತೆರೆಮೇಲೆ ಒಳ್ಳೆ ಸಿನಿಮಾ ನೋಡಲು ಸಾಧ್ಯವಿಲ್ಲ. ಇಬ್ಬರ ಕೆಮೆಸ್ಟ್ರಿ ತೆರೆಮೇಲೆ ಮಿಸ್ ಆಗುತ್ತದೆ. ನನ್ನ ಹಾಗೂ ಯಶ್ ಸ್ನೇಹ ಜೀವನ ಪರ್ಯಂತ ಮುಂದುವರೆಯಲಿದೆ" ಎಂದು ಪ್ರಶಾಂತ್ ನೀಲ್ ಇದೇ ವೇಳೆ ತಿಳಿಸಿದ್ದಾರೆ.
'ಸಲಾರ್' ಬಳಿಕ ಪ್ರಶಾಂತ್ ನೀಲ್ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರಕ್ಕೆ ಕೈ ಹಾಕುತ್ತಿದ್ದಾರೆ. ಜ್ಯೂ. ಎನ್ಟಿಆರ್ ನಟನೆಯ 31ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಮುಂದಿನ ವರ್ಷವೇ ಸಿನಿಮಾ ಶುರುವಾಗಲಿದೆ. ಬಳಿಕ 'ಸಲಾರ್' ಸೀಕ್ವೆಲ್ ಕಟ್ಟಿಕೊಡುವ ಸಾಧ್ಯತೆಯಿದೆ. ರಾಮ್ಚರಣ್ ಜೊತೆಗೂ ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೀತಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ 25ನೇ ಚಿತ್ರಕ್ಕೂ ಆಕ್ಷನ್ ಕಟ್ ಹೇಳಬೇಕಿದೆ. ಇದೇ ಕಾರಣಕ್ಕೆ ನೀಲ್ 'KGF- 3' ಸಿನಿಮಾ ನಿರ್ದೇಶನದ ಬಗ್ಗೆ ಗೊಂದಲದಲ್ಲಿದ್ದಾರೆ. ಆದರೆ 'KGF- 3' ಕಥೆ ಸಿದ್ಧವಾಗಿದೆ ಎಂದು ನೀಲ್ ಮಾಹಿತಿ ನೀಡಿದ್ದಾರೆ.


Click it and Unblock the Notifications











