ಎರಡು ಎಮ್ಮೆಯ ಕಥೆ ; ಲಕ್ಷ ಲಕ್ಷ ಹಣ ಪಡೆದು ಜೋಗಿ ಪ್ರೇಮ್ಗೆ ವಂಚಿಸಿ ಕಾಲ್ಕಿತ್ತ ಕಿರಾತಕ
ಹೇಗಾದರೂ ಸರಿ ಏಕಾಏಕಿ ದುಡ್ಡು ಮಾಡಿ ಬಿಡಬೇಕು... ಇಂಥಾ ಧಾವಂತದಿಂದ ಥರ ಥರದ ವೇಷ ತೊಟ್ಟ, ಹೆಜ್ಜೆ ಹೆಜ್ಜೆಗೂ ಮಹಾಮೋಸ ಮಾಡುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮೋಸ ಮಾಡಲು ವಂಚಕರು ಸದಾ ಹೊಸ ದಾರಿಯನ್ನು ಹುಡುಕುತ್ತಲೇ ಇರುತ್ತಾರೆ. ಇವರ ಕಣ್ಣು ಕೇವಲ ಜನಸಾಮಾನ್ಯರ ಮೇಲೆ ಮಾತ್ರ ಅಲ್ಲ ಬದಲಿಗೆ ಚಿತ್ರರಂಗದವರ ಮೇಲೆ ಕೂಡ ಇರುತ್ತೆ.
ಚೂರು ಯಾಮಾರಿದರೂ ಸಾಕು ಈ ಕಿರಾತಕರು ತಮ್ಮ ಖೆಡ್ಡಾಗೆ ಸೆಲೆಬ್ರೆಟಿಗಳನ್ನು ಕೆಡವಿಕೊಂಡು ಬಿಡುತ್ತಾರೆ. ಇದಕ್ಕೆ ಜೋಗಿ ಪ್ರೇಮ್ ಸದ್ಯದ ಉದಾಹರಣೆ. ಹೌದು, ಅನೇಕರಿಗೆ ಗೊತ್ತಿರುವಂತೆ ನಿರ್ದೇಶನದಾಚೆ ಕೃಷಿಯತ್ತ ಅಪಾರ ಒಲವು ಬೆಳೆಸಿಕೊಂಡಿರುವವರು ಪ್ರೇಮ್.

ಮದ್ದೂರು ಬಳಿಯ ಬೆಸಗರಹಳ್ಳಿಯಲ್ಲಿ ತಮ್ಮ ತಾಯಿಯ ನೆನಪಿನಲ್ಲಿ ಹತ್ತು ಎಕರೆಗೂ ಹೆಚ್ಚಿನ ಕೃಷಿ ಭೂಮಿಯನ್ನು ಖರೀದಿಸಿರುವ ಪ್ರೇಮ್ ಅದಕ್ಕೆ ಅಮ್ಮನ ತೋಟ ಎಂದು ಹೆಸರಿಟ್ಟಿದ್ದಾರೆ. ಬಿಡುವು ಸಿಕ್ಕಾಗೆಲ್ಲಾ ತಮ್ಮ ಅಮ್ಮನ ತೋಟಕ್ಕೆ ಹೋಗಿ ಕಾಲ ಕಳೆಯುತ್ತಾರೆ. ಹಬ್ಬ ಹರಿದಿನಗಳನ್ನೂ ಕೂಡ ಆಚರಿಸುತ್ತಾರೆ.
ಇದೇ ತೋಟದಲ್ಲಿ ಹಸು ಸಾಕಾಣಿಕೆ ಕೂಡ ಮಾಡುವ ಪ್ರೇಮ್, ತಮ್ಮ ಹೈನುಗಾರಿಕೆಗಾಗಿ ಎರಡು ಎಮ್ಮೆಗಳನ್ನು ಖರೀದಿಸಲು ಮುಂದಾಗಿದ್ದರು. ಈ ಸಮಯದಲ್ಲಿ ಸಿಕ್ಕವನೇ ಗುಜರಾತ್ ಮೂಲದ ಗುಜರಾತ್ ಮೂಲದ ವನರಾಜ್ ಭಾಯ್. ಎಮ್ಮೆಗಳನ್ನು ಕೊಡಿಸುವುದಾಗಿ ಪುಸಲಾಯಿಸಿ, ಹೋಗಿ ಪ್ರೇಮ್ ಎದುರೇ ಬಿಲ್ಡಪ್ ಕೊಟ್ಟಿರುವ ಈ ವನರಾಜ್ ಭಾಯ್ಗೆ ಪ್ರೇಮ್ ಆರಂಭದಲ್ಲಿ 25 ಸಾವಿರ ಹಣ ನೀಡಿದ್ದಾರೆ.
25 ಸಾವಿರ ಹಣ ಪಡೆದ ವನರಾಜ್ ಆ ನಂತರ ವಾಟ್ಸಾಫ್ ಮೂಲಕ ಎರಡು ಎಮ್ಮೆಯ ವಿಡಿಯೋಗಳನ್ನು ಪ್ರೇಮ್ಗೆ ಕಳುಹಿಸಿದ್ದು, ಆ ನಂತರ ಹಂತ ಹಂತವಾಗಿ 4.5 ಲಕ್ಷ ರೂಪಾಯಿಯನ್ನು ಪ್ರೇಮ್ ಅವರಿಂದ ಪಡೆದಿದ್ದಾನೆ. ಪ್ರೇಮ್ ಕೂಡ ಹೇಗೂ ಎಮ್ಮೆಗಳು ಬರುತ್ತಾವೆ ಅಲ್ಲಾ ಎಂದು ನಂಬಿಕೊಂಡು ಹಣ ನೀಡಿದ್ದಾರೆ.
ಆದರೆ ಹೀಗೆ ಹಣ ಪಡೆದ ವ್ಯಕ್ತಿ ಆ ನಂತರ ಎಮ್ಮೆಗಳನ್ನು ನೀಡದೇ, ಅತ್ತ ಹಣವನ್ನು ಕೂಡ ವಾಪಸ್ ಕೊಡದೇ ಪೇರಿ ಕಿತ್ತಿದ್ದಾನೆ. ಈ ಕಡೆ ಎಮ್ಮೆಗಳಿಗಾಗಿ ಕಾಯುತ್ತಾ ಕುಳಿತಿದ್ದ ಪ್ರೇಮ್ಗೆ ಅದ್ಯಾವಾಗ ಒಂದು ವಾರವಾದರೂ ಎಮ್ಮೆಗಳು ಬರಲಿಲ್ಲವೋ ಆಗ ಅನುಮಾನ ಬಂದಿದೆ. ಈ ಹಿನ್ನೆಲೆ ತಮ್ಮ ಆಪ್ತರಲ್ಲಿ ಒಬ್ಬರನ್ನು ಆ ವ್ಯಕ್ತಿ ನೀಡಿದ್ದ ವಿಳಾಸ ಪರಿಶೀಲನೆಗೆ ಪ್ರೇಮ್ ಕಳುಹಿಸಿದ್ದರು. ಆಗ ಆ ವ್ಯಕ್ತಿ ತಪ್ಪು ವಿಳಾಸ ನೀಡಿರುವ ವಿಚಾರ ಪ್ರೇಮ್ಗೆ ಗೊತ್ತಾಗಿದ್ದು ಫೋನ್ ಮೂಲಕ ಸಂಪರ್ಕ ಮಾಡುವ ಪ್ರಯತ್ನ ಮಾಡಿದಾರೆ. ಆದರೆ ಅಷ್ಟರಲ್ಲಾಗಲೇ ವಂಚಕ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ.

ಈ ಹಿನ್ನೆಲೆ ಎರಡು ಎಮ್ಮೆಯ ಹೆಸರಿನಲ್ಲಿ ತಮಗೆ ಪಂಗನಾಮ ಹಾಕಿದ ವ್ಯಕ್ತಿಯ ವಿರುದ್ದ ಸದ್ಯ ಪ್ರೇಮ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ತಮ್ಮ ಆಪ್ತ ಮ್ಯಾನೇಜರ್ ದಶಾವರ್ ಚಂದ್ರು ಅವರ ಮೂಲಕ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನುಳಿದಂತೆ ಸದ್ಯ ಪ್ರೇಮ್ ತಮ್ಮ ''ಕೆಡಿ'' ಚಿತ್ರದ ಬಿಡುಗಡೆಯ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಧ್ರುವ ಸರ್ಜಾ ಮತ್ತು ರೀಷ್ಮಾ ನಾಣಯ್ಯ ಅಭಿನಯದ ಈ ಚಿತ್ರದಲ್ಲಿ ಸಂಜಯ್ ದತ್, ಶಿಲ್ಪಾ ಶೆಟ್ಟಿ, ವಿ.ರವಿಚಂದ್ರನ್, ರಮೇಶ್ ಅರವಿಂದ್, ಹೀಗೆ ಬಹುದೊಡ್ಡ ತಾರಾಬಳಗವೇ ಇದೆ. ಈಗಾಗಲೇ ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಎರಡು ಹಾಡುಗಳು ಬಿಡುಗಡೆಯಾಗಿ ಸದ್ದು ಮಾಡುವಲ್ಲಿ ಯಶಸ್ವಿಯಾಗಿವೆ. ಚಿತ್ರ ಈ ವರ್ಷಾಂತ್ಯದೊಳಗೆ ತೆರೆಗೆ ಬರುವ ನಿರೀಕ್ಷೆ ಇದೆ.


Click it and Unblock the Notifications











