'ಕಲಿ' ಹೋಯ್ತು 'ಕಲ್ಕಿ' ಬಂತು: ಶಿವಣ್ಣ.. ಸುದೀಪ್ ಅಲ್ಲ ಪ್ರೇಮ್ ಹೀರೋ
ನಿರ್ದೇಶಕ ಜೋಗಿ ಪ್ರೇಮ್ 'ಕಲಿ' ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ಆ ಸಿನಿಮಾ ಶುರು ಆಗಲಿಲ್ಲ. ಆ ಬದಲಿಗೆ, ಶಿವರಾಜ್ ಕುಮಾರ್ ಹಾಗೂ ಸುದೀಪ್ ಕಾಂಬಿನೇಶನ್ ನಲ್ಲಿ 'ದಿ ವಿಲನ್' ಸಿನಿಮಾ ಮಾಡಿ ಮುಗಿಸಿದರು.
'ಕಲಿ' ಸಿನಿಮಾವನ್ನು ಕೈಬಿಟ್ಟಿದ್ದ ಪ್ರೇಮ್ ಈಗ ಕಲ್ಕಿಯಾಗುತ್ತಿದ್ದಾರೆ. 'ಐ ಯಾಮ್ ಕಲ್ಕಿ' ಎಂಬ ಹೊಸ ಸಿನಿಮಾದಲ್ಲಿ ಪ್ರೇಮ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ 'ಏಕ್ ಲವ್ ಯಾ' ಸಿನಿಮಾದಲ್ಲಿ ಪ್ರೇಮ್ ಬ್ಯುಸಿ ಇದ್ದು, ಮುಂದಿನ ತಿಂಗಳಿನಿಂದ ಈ ಹೊಸ ಸಿನಿಮಾ ಪ್ರಾರಂಭ ಆಗುತ್ತದೆ.
ಈ ಸಿನಿಮಾವನ್ನು ಚಕ್ರವರ್ತಿ ಚಂದ್ರಚೂಡ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ಕ್ಕೆ ಅವರು ವಿವರ ನೀಡಿದ್ದಾರೆ.

'ಐ ಯಾಮ್ ಕಲ್ಕಿ'
'ಐ ಯಾಮ್ ಕಲ್ಕಿ' ಹೆಸರಿನಲ್ಲಿ ಚಕ್ರವರ್ತಿ ಚಂದ್ರಚೂಡ್ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಜೋಗಿ ಪ್ರೇಮ್ ನಾಯಕನಾಗಿದ್ದಾರೆ. ಸಿನಿಮಾದ ಬಗ್ಗೆ ಇಂದು (ಜನವರಿ 23) ಪ್ರೇಮ್ ರನ್ನು ಚಕ್ರವರ್ತಿ ಚಂದ್ರಚೂಡ್ ಭೇಟಿ ಮಾಡಿದ್ದಾರೆ. 'ಗಾಂಧಿಗಿರಿ' ಸಿನಿಮಾದ ನಂತರ ಮತ್ತೆ ಪ್ರೇಮ್ ಹೀರೋ ಆಗುತ್ತಿದ್ದಾರೆ.

ಚಿತ್ರದಲ್ಲಿ ಇದೆ ಮಂಗಳೂರು ಬಾಂಬ್ ಪ್ರಕರಣ
ಇತ್ತೀಚಿಗೆ ಮಂಗಳೂರಿನಲ್ಲಿ ನಡೆದ ಬಾಂಬ್ ಪ್ರಕರಣ ಸಿನಿಮಾದಲ್ಲಿ ಇದೆಯಂತೆ. ಚಿತ್ರದಲ್ಲಿ ಬಾಂಬ್ ಪ್ರಕರಣವೊಂದು ಇತ್ತು. ಆದರೆ, ಅದು ಯಾಕೋ ಸರಿ ಅನಿಸಲಿಲ್ಲ. ಆ ವೇಳೆಗೆ ಬಾಂಬರ್ ಆದಿತ್ಯ ರಾವ್ ಪ್ರಕರಣ ಆಗಿದ್ದು, ಅದೇ ಎಪಿಸೋಡ್ ಸಿನಿಮಾದಲ್ಲಿ ಇರಲಿದೆ ಎಂದು ಚಕ್ರವರ್ತಿ ಚಂದ್ರಚೂಡ್ ತಿಳಿಸಿದ್ದಾರೆ.

ಆದಿತ್ಯರಾವ್ ಪಾತ್ರದಲ್ಲಿ ಯಾರು?
ಮಂಗಳೂರು ಬಾಂಬ್ ಪ್ರಕರಣ ಸಿನಿಮಾದಲ್ಲಿ ಇದೆ ಎಂದ ಕೂಡಲೇ ಬಾಂಬರ್ ಆದಿತ್ಯರಾವ್ ಪಾತ್ರ ಯಾರು ಮಾಡಬಹುದು ಎನ್ನುವ ಕುತೂಹಲ ಮೂಡುತ್ತದೆ. ಆದರೆ, ಈ ಪಾತ್ರಕ್ಕೆ ಕಲಾವಿದರ ಆಯ್ಕೆ ಇನ್ನು ಅಂತಿಮವಾಗಿಲ್ಲವಂತೆ. ಬಹುತೇಕ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಅವ್ರೆ ಈ ಪಾತ್ರ ಮಾಡುವ ಸಾಧ್ಯ ಇದೆಯಂತೆ.

ಎರಡು ಭಾಷೆಗಳಲ್ಲಿ ನಿರ್ಮಾಣ
ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ 'ಐ ಯಾಮ್ ಕಲ್ಕಿ' ಸಿನಿಮಾ ತೆರೆಗೆ ಬರುತ್ತಿದೆ. 'ಆನೆ ಪಟಾಕಿ' ಚಿತ್ರ ಮಾಡಿದ್ದ ಸುರೇಶ್ ಈ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ.
ಫೆಬ್ರವರಿ 14 ರಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಮುಂದಿನ ತಿಂಗಳು ಮೋಷನ್ ಪೋಸ್ಟರ್ ಬಿಡುಗಡೆ ಆಗಲಿದೆ. ಹೀರೋಯಿನ್ ಆಯ್ಕೆ ಇನ್ನು ಬಾಕಿ ಉಳಿದಿದೆ.


Click it and Unblock the Notifications











