ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ, ಎಲ್ಲರೂ ಸ್ವಾರ್ಥಿಗಳು: ಪ್ರೇಮ್
ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ, ನಾಯಕತ್ವದ ಕೊರತೆ ಇದೆ ಎಂಬ ಮಾತುಗಳು ಅಂಬರೀಶ್ ಕಾಲವಾದಾಗಿನಿಂದಲೂ ಕೇಳಿ ಬರುತ್ತಿದೆ. ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಬಂದಾಗಲೂ ಈ ಮಾತುಗಳು ಸದ್ದು ಮಾಡುತ್ತವೆ, ಬಳಿಕ ಬದಿಗೆ ಸರಿಯುತ್ತವೆ.
ಇದೀಗ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾ ಪೈರಸಿ ಆಗಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೆ ಚಿತ್ರರಂಗದ ವಿಷಯ ಚರ್ಚೆಗೆ ಬಂದಿದೆ.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಪ್ರೇಮ್, ತಮ್ಮ ಸಿನಿಮಾ ಪೈರಸಿ ಆಗಿರುವ ಬಗ್ಗೆ ತೀವ್ರ ಬೇಸರ, ಕಳವಳ ವ್ಯಕ್ತಪಡಿಸಿದರು. ಈ ಬಗ್ಗೆ ಸ್ವತಃ ಸಿಎಂಗೆ ದೂರು ನೀಡುವುದಾಗಿ ಹೇಳಿದರು. ಇದೇ ಸಮಯದಲ್ಲಿ ಪೈರಸಿ ವಿರುದ್ಧ ಚಿತ್ರರಂಗ ಒಟ್ಟಾಗಿ ಹೋರಾಟವನ್ನೇಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಪ್ರೇಮ್ಗೆ ಎದುರಾಯಿತು.

ಒಗ್ಗಟ್ಟಿಲ್ಲ ಎಂಬುದು ನಿಜ: ಪ್ರೇಮ್
ಈ ಬಗ್ಗೆ ಉತ್ತರಿಸಿದ ನಿರ್ದೇಶಕ ಪ್ರೇಮ್, ''ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಎಂಬುದು ನಿಜವೇ. ಎಲ್ಲವೂ ವ್ಯವಹಾರ ಎಂಬಂತಾಗಿಬಿಟ್ಟಿದೆ. ಎಲ್ಲರಿಗೂ ಅವರವರ ಸಿನಿಮಾಗಳ ವ್ಯವಹಾರಗಳಷ್ಟೆ ಮುಖ್ಯ, ಬೇರೆ ಸಿನಿಮಾಗಳ ಉಸಾಬರಿ ನಮಗ್ಯಾಕೆ ಎನ್ನುವ ಮನಸ್ಥಿತಿ. ನಮ್ಮ ಕಾಲನ್ನು ನಾವೇ ಎಳೆದುಕೊಂಡು, ನಮ್ಮ ಕಾಲನ್ನು ನಾವೇ ಎಳೆದುಕೊಂಡು ಬದುಕುತ್ತಿರುವ ಪರಿಸ್ಥಿತಿ ಚಿತ್ರರಂಗದಲ್ಲಿ ಇದೆ'' ಎಂದಿದ್ದಾರೆ.

ಅವರವರ ಸಿನಿಮಾ ಅವರಿಗೆ ಮುಖ್ಯವಾಗಿದೆ ಅಷ್ಟೆ: ಪ್ರೇಮ್
''ನಮ್ಮ ಸಿನಿಮಾ ನಮಗೆ ಮುಖ್ಯ ಎನ್ನುವ ಮನಸ್ಥಿತಿ ಇದ್ದಾಗ ನಮಗೆ ಕಷ್ಟ ಆಗಿದೆ ನೀವು ಬನ್ನಿ, ನೀವು ಬನ್ನಿ ಎಂದು ಕರೆಯುವುದು ಸಹ ಆಗುವುದಿಲ್ಲ. ಆಂಧ್ರದಲ್ಲಿ ಚಿತ್ರಮಂದಿರಗಳ ಟಿಕೆಟ್ ದರ ಇಳಿಸಿದ ಕೂಡಲೇ ಸಿನಿಮಾ ನಾಯಕ ನಟರೆಲ್ಲ ಒಟ್ಟಾಗಿ ಹೋಗಿ ಸಿಎಂ ಅನ್ನು ಭೇಟಿ ಮಾಡಿ ಚರ್ಚೆ ಮಾಡಿದರು. ಒಟ್ಟಾಗಿ ಹೋರಾಟ ಮಾಡಿದರು. ಆದರೆ ಇಲ್ಲಿ ಆ ಪರಿಸ್ಥಿತಿ ಇಲ್ಲ. ಒಟ್ಟಾಗಿ ಹೋಗುವ ಸಂಸ್ಕೃತಿಯೇ ಇಲ್ಲಿ ಬಂದಿಲ್ಲ'' ಎಂದರು ಪ್ರೇಮ್.

ಅಪ್ಪಾಜಿ ಇಂಡಸ್ಟ್ರಿಯವರನ್ನು ಮಕ್ಕಳಂತೆ ಸಾಕುತ್ತಿದ್ದರು: ಪ್ರೇಮ್
''ಮುಂಚೆ ಅಪ್ಪಾಜಿಯವರು (ಡಾ ರಾಜ್) ಇದ್ದರು. ಅವರು ನೇರವಾಗಿ ಬಾರದೇ ಹೋದರೂ ಅವರ ಹೆಸರಿಗೆ ಒಂದು ಗೌರವ, ಭಯ ಇತ್ತು. ಅವರು ಎಲ್ಲರನ್ನೂ ಚೆನ್ನಾಗಿ ನೋಡಿಕೊಂಡು ಮಕ್ಕಳ ರೀತಿ ಸಾಕಿ ಕರೆದುಕೊಂಡು ಹೋಗುತ್ತಿದ್ದರು. ಈಗ ಆ ರೀತಿಯಾಗಿ ಯಾರೂ ಕಾಣುತ್ತಿಲ್ಲ. ಈಗ ನಮಗೆ ಏನೇ ಸಮಸ್ಯೆ ಆದರು ಫಿಲಂ ಚೇಂಬರ್ ಬಳಿ ಹೇಳಿಕೊಳ್ಳಬೇಕು. ಅಲ್ಲಿ ಹೋದರೆ ದೂರು ಕೊಡಿ ಅಂತಾರೆ, ನಾವು ದೂರು ಕೊಟ್ಟು, ಪೊಲೀಸ್ ಠಾಣೆಗೆ ಹೋಗಿ ಎಲ್ಲ ಮಾಡುವಷ್ಟರಲ್ಲಿ ನಮ್ಮ ಸಿನಿಮಾದ ಪೈರಸಿ ಕಾಪಿ ಕೋಟ್ಯಂತರ ಜನಕ್ಕೆ ಹಂಚಿಕೆ ಆಗಿಬಿಟ್ಟಿರುತ್ತದೆ'' ಎಂದಿದ್ದಾರೆ ಪ್ರೇಮ್.

ಇಲ್ಲಿ ಯಾರಿಗೂ ಯಾರೂ ಬೆಂಬಲಕ್ಕೆ ಬರೊಲ್ಲ: ಪ್ರೇಮ್
''ಇಲ್ಲಿ (ಚಿತ್ರರಂಗ) ಯಾರಿಗೂ ಯಾರೂ ಬೆಂಬಲಕ್ಕೆ ಬರೋದಿಲ್ಲ. ಯಾರಿಗೂ ಯಾರೂ ಆಗೊಲ್ಲ. ಒಗ್ಗಟ್ಟು ಅನ್ನೋದನ್ನು ಯಾರೂ ತಂದು ಕೊಡಲು ಸಾಧ್ಯವಿಲ್ಲ. ಅದು ಅವರಿಗೇ ಬರಬೇಕು. ನಾವು ಪರಸ್ಪರರಿಗೆ ಬೆಂಬಲ ಮಾಡಬೇಕು, ಸಹಾಯ ಮಾಡಬೇಕು ಅನ್ನೋದು ಅವರಿಗೆ ಬರಬೇಕು. ನಮ್ಮ ಕನ್ನಡ ಸಿನಿಮಾ, ನಮ್ಮ ಇಂಡಸ್ಟ್ರಿ ಅನ್ನೋದು ಎಲ್ಲರಲ್ಲೂ ಬರಬೇಕು. ನಾವು ಎಲ್ಲರಿಗೂ ಹೇಳಿಕೊಂಡು, ಮಾಧ್ಯಮಗಳ ಮುಂದೆ ಭಾಷಣ ಮಾಡಿಕೊಂಡು, ಎಲ್ಲರಿಗೂ ಲೆಟರ್ ಕೊಟ್ಟುಕೊಂಡು ಇರುವುದರಿಂದ ಒಗ್ಗಟ್ಟು ಬರುವುದಿಲ್ಲ. ಅಪ್ಪಾಜಿ ಇದ್ದಾಗ ಎಲ್ಲರೂ ಅವರ ಮಾತಿಗೆ ಬೆಂಬಲ ನೀಡಿ ತಲೆ ಬಾಗಿ ಒಗ್ಗಟ್ಟಾಗಿ ಹೋಗುತ್ತಿದ್ದರು. ಈಗ ಅದು ಇಲ್ಲ'' ಎಂದರು ಪ್ರೇಮ್.


Click it and Unblock the Notifications











