ಕನ್ನಡ ಚಿತ್ರರಂಗದ ಹಿರಿಯ ಜೀವ ಇನ್ನಿಲ್ಲ: 'ಕನ್ನಡ ಕುವರ' ಸಿ. ವಿ ಶಿವಶಂಕರ್ ಕಣ್ಮರೆ
ಚಂದನವನಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಚಿತ್ರರಂಗದ ಖ್ಯಾತ ನಿರ್ದೇಶಕ, ನಟ, ಗೀತಸಾಹಿತಿ ಸಿ. ವಿ ಶಿವಶಂಕರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. 'ಬೆಳೆದಿದೆ ನೋಡಾ ಬೆಂಗಳೂರು ನಗರ' ಹಾಗೂ 'ಸಿರಿವಂತನಾದರೂ ಕನ್ನಡ ನಾಡಲ್ಲಿ ಬೆಳೆವೆ' ರೀತಿಯ ಜನಪ್ರಿಯ ಗೀತೆಗಳಿಗೆ ಶಿವಶಂಕರ್ ಸಾಹಿತ್ಯ ಬರೆದಿದ್ದರು. ವರನಟ ಡಾ. ರಾಜ್ಕುಮಾರ್ಗೆ ಬಹಳ ಆಪ್ತರಾಗಿದ್ದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
'ಸ್ಕೂಲ್ ಮಾಸ್ಟರ್', 'ಆಶಾಸುಂದರಿ','ರತ್ನಗಿರಿ ರಹಸ್ಯ', 'ಕೃಷ್ಣಗಾರುಡಿ', 'ಧರ್ಮವಿಜಯ', 'ಭಕ್ತವಿಜಯ', 'ವೀರಸಂಕಲ್ಪ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಚಿತ್ರಗಳಲ್ಲಿ ಸಿ. ವಿ ಶಿವಶಂಕರ್ ನಟಿಸಿದ್ದಾರೆ. ರಂಗಭೂಮಿ ಹಿನ್ನಲೆಯಿಂದ ಚಿತ್ರರಂಗಕ್ಕೆ ಬಂದ ಶಿವಶಂಕರ್ ಸಾಕಷ್ಟು ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದರು. 'ಮನೆಕಟ್ಟಿನೋಡು' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರು. 'ನಮ್ಮ ಊರು', 'ಪದವೀಧರ', 'ಮಹಡಿಯ ಮನೆ', 'ಹೊಯ್ಸಳ', 'ಮಹಾ ತಪಸ್ವಿ', 'ವೀರಮಹಾದೇವ' ಸೇರಿದಂತೆ ಒಂದಷ್ಟು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.

ಸಿ. ವಿ ಶಿವಶಂಕರ್ ನಿರ್ದೇಶನದ 'ಕನ್ನಡ ಕುವರ' ಸಿನಿಮಾ ನಿರ್ಮಾಣವಾಗಿ ಬಿಡುಗಡೆಯಾಗದೇ ಉಳಿದಿಬಿಟ್ಟಿದೆ. ಸಿನಿಕರ್ಮಿಗೆ 1994ರಲ್ಲಿ ರಾಜ್ಯ ಪ್ರಶಸ್ತಿ ಕೂಡ ಸಿಕ್ಕಿತ್ತು. ಇವರ ಹಿರಿಯ ಪುತ್ರ ವೆಂಕಟ್ ಭಾರದ್ವಾಜ್ ಸಿನಿಮಾ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ಇನ್ನು ಕಿರಿಯ ಪುತ್ರ ಲಕ್ಷ್ಮಣ್ ಕೂಡಾ ನಟರಾಗಿ ಗುರುತಿಸಿಕೊಂಡಿದ್ದಾರೆ. 90 ವರ್ಷ ವಯಸ್ಸಿನ ಶಿವಶಂಕರ್ ಕನ್ನಡ ಚಿತ್ರರಂಗದ ಸಂಪೂರ್ಣ ಇತಿಹಾಸ ಬಲ್ಲವರಾಗಿದ್ದರು. 90 ವರ್ಷ ವಯಸ್ಸಾದರೂ ಬಹಳ ಲವಲವಿಕೆಯಿಂದ ಇದ್ದರು. ಇವರ ಅಗಲಿಕೆಯಿಂದ ಚಿತ್ರರಂಗದ ಕೊನೆಯ ಕೊಂಡಿ ಕಳಚಿಬಿದ್ದಂತಾಗಿದೆ.


Click it and Unblock the Notifications











