ಮೂರು ರಾಜ್ಯಗಳ ಗಡಿಯಲ್ಲಿ ಹರಿದ ನೆತ್ತರ ಕತೆ 'ಬಟ್ಟಲುಕೆರೆ'
ಹೊಸ ಹೊಸ ಪ್ರಯತ್ನಗಳು ನಿಧಾನಕ್ಕಾಗಿಯಾದರೂ ಕನ್ನಡದಲ್ಲಿ ಆಗುತ್ತಿವೆ. ಹೊಸಬರು ಹೊಸ ಯೋಜನೆಗಳೊಂದಿಗೆ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಸೀಮಿತ ಸಂಪನ್ಮೂಲದಲ್ಲಿ ತಮ್ಮ ಯೋಚನೆಗಳಿಗೆ ದೃಶ್ಯ ರೂಪ ನೀಡುತ್ತಿದ್ದಾರೆ.
ನಿಜ ಘಟನೆಗಳಿಂದ ಪ್ರೇರಿತವಾದ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಬಹುವಾಗಿ ಮೆಚ್ಚುಗೆ ಗಳಿಸುತ್ತಿವೆ. ತಮಿಳಿನಲ್ಲಿ ಅಂತೂ ಹಲವು ಸ್ಟಾರ್ ನಟರು ಇಂಥಹಾ ಕತೆಗಳಲ್ಲಿ ಪಾತ್ರವಹಿಸಿದ್ದಾರೆ ಗೆದ್ದಿದ್ದಾರೆ ಸಹ. ಇದೀಗ ಕನ್ನಡದಲ್ಲಿಯೇ ಹೊಸ ತಂಡವೊಂದು ಇಂಥಹುದೇ ಒಂದು ಕತೆ ಇಟ್ಟುಕೊಂಡು ಸಿನಿಮಾ ಮಾಡಲು ಮುಂದಾಗಿದ್ದಾರೆ.
ಈ ಹಿಂದೆ 'ರಕ್ತ ಗುಲಾಬಿ' ಹೆಸರಿನ ಒಂದೇ ಶಾಟ್ನ ಸಿನಿಮಾ ಮಾಡಿದ್ದ ನಿರ್ದೇಶಕ ರಾಬಿ ಇದೀಗ 'ಬಟ್ಟಲು ಕೆರೆ' ಹೆಸರಿನ ವಿಭಿನ್ನ ಸಿನಿಮಾಕ್ಕೆ ಕೈ ಹಾಕಿದ್ದಾರೆ.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶದ ಗಡಿಯಲ್ಲಿ ಕೆಲವು ದಶಕಗಳ ಹಿಂದೆ ನಡೆವ ಕತೆಯನ್ನು ಸಿನಿಮಾ ಒಳಗೊಂಡಿರಲಿದೆ. 'ಫಿಲ್ಮಿಬೀಟ್ ಕನ್ನಡ'ದೊಂದಿಗೆ ಮಾತನಾಡಿದ ರಾಬಿ, ನಿಜ ಘಟನೆಯ ಪ್ರೇರಣೆಯಿಂದ ಹೊಸೆದಿರುವ ಕಾಲ್ಪನಿಕ ಕತೆ 'ಬಟ್ಟಲು ಕೆರೆ' ಎಂದಿದ್ದಾರೆ.
''ಈ ಸಿನಿಮಾ ಯಾವುದೇ ವ್ಯಕ್ತಿಗೆ, ಪಕ್ಷಕ್ಕೆ, ಸಮುದಾಯಕ್ಕೆ ಸಂಬಂಧಿಸಿದ್ದಲ್ಲ. ಆದರೆ ಒಂದು ಕಾಲಘಟ್ಟದಲ್ಲಿ ನಡೆದಿರಬಹುದಾದ ದಬ್ಬಾಳಿಕೆ ಅದಕ್ಕೆ ಪ್ರತಿಯಾದ ಪ್ರತೀಕಾರದ ಕತೆಯನ್ನು ಒಳಗೊಂಡಿದೆ. 1956 ರಿಂದ 1999 ರವರೆಗಿನ ಕಾಲಘಟ್ಟದಲ್ಲಿ ಕತೆ ಸ್ಥಿತವಾಗಿದೆ. ಬಟ್ಟಲು ಕೆರೆಯಲ್ಲಿ ನಡೆವ ಘಟನೆ ಮುಂದೆ ಹೇಗೆ ನೆತ್ತರ ಕೋಡಿಗೆ ಕಾರಣವಾಯಿತು. ಕೊನೆಗೆ ಅದರ ಅಂತ್ಯ ಹೇಗಾಯಿತು ಎಂಬುದನ್ನು ಕತೆ ಒಳಗೊಂಡಿದೆ'' ಎಂದರು ರಾಬಿ.

''ಸಿನಿಮಾದ ಚಿತ್ರಕತೆ ಮುಗಿಸಿದ್ದೇವೆ. ಆಡಿಷನ್ ಮೂಲಕ ನಟರನ್ನು ಆಯ್ಕೆ ಮಾಡಿಕೊಳ್ಳಲಿದ್ದೇವೆ. ಕೆಲವು ಪಾತ್ರಗಳಿಗೆ ಈಗಾಗಲೇ ನಟರನ್ನು ಗುರುತಿಸಿಟ್ಟುಕೊಂಡಿದ್ದೇವೆ ಆದರೆ ಇನ್ನೂ ಸಂಪರ್ಕ ಮಾಡಿಲ್ಲ. ಸಿನಿಮಾದ ಚಿತ್ರೀಕರಣ ಬಹುಭಾಗ ಉತ್ತರ ಕರ್ನಾಟಕದಲ್ಲಿ ನಡೆಯಲಿದೆ. ಕೆಲವು ಭಾಗಗಳು ಮಾತ್ರವೇ ದಕ್ಷಿಣ ಕರ್ನಾಟಕದಲ್ಲಿ ನಡೆಯಲಿದೆ. ಸಿನಿಮಾದಲ್ಲಿ ಉತ್ತರ ಕರ್ನಾಟಕ ಭಾಷೆಯ ಸೊಗಡು ಇರಲಿದೆ, ಜೊತೆಗೆ ಒಂದು ನವಿರು ಪ್ರೇಮಕತೆಯೂ ಇರಲಿದೆ'' ಎಂದು ಮಾಹಿತಿ ನೀಡಿದರು ನಿರ್ದೇಶಕ ರಾಬಿ.
ಸಿನಿಮಾವನ್ನು ಬೀಟಲ್ ಪಿಕ್ಚರ್ಸ್ ವತಿಯಿಂದ ನಿರ್ಮಾಣ ಮಾಡಲಾಗುತ್ತಿದೆ. ನಿರ್ಮಾಪಕರು ಬಿಎಚ್ ಸೋಮಶೇಖರ್ ಸೋಮಶೇಖರ್. ಇದು ಅವರ ಮೊದಲ ಸಿನಿಮಾ. ಸಿನಿಮಾಕ್ಕೆ ಸಂಗೀತ ನೀಡುತ್ತಿರುವುದು ಪ್ರಜೋತ್ ದೇಸಾ. ಇವರು ಈ ಹಿಂದೆ ರಾಬಿ ಅವರೇ ನಿರ್ದೇಶಿಸಿದ್ದ 'ರಕ್ತ ಗುಲಾಬಿ' ಸಿನಿಮಾಕ್ಕೆ ಸಂಗೀತ ನೀಡಿದ್ದರು. ಜೊತೆಗೆ 'ಮಂಗಳವಾರ ರಜಾ ದಿನ' ಸಿನಿಮಾಕ್ಕೂ ಸಂಗೀತ ನೀಡಿದ್ದಾರೆ. 'ಬಟ್ಟಲು ಕೆರೆ' ಸಿನಿಮಾಕ್ಕೆ ಕ್ಯಾಮೆರಾ ಕೆಲಸ ಮಾಡುತ್ತಿರುವುದು ದಕ್ಷಿಣ ಆಫ್ರಿಕಾದ ತಂತ್ರಜ್ಞ ಮುಸಾಫಿಜಿ ಪೌಲ್. ''ಈ ಸಿನಿಮಾದ ಪ್ರೆಸೆಂಟೇಶನ್ ಸಾಮಾನ್ಯ ಸಿನಿಮಾಗಳ ಮಾದರಿಯಲ್ಲಿ ಇರುವುದಿಲ್ಲ. ಇದರ ದೃಶ್ಯ ಸಂಯೋಜನೆ, ದೃಶ್ಯಗಳಿಗೆ ನೀಡುವ 'ಟ್ರೀಟ್ಮೆಂಟ್' ಬೇರೆಯದ್ದೇ ರೀತಿಯಾಗಿರಲಿದೆ ಹಾಗಾಗಿ ನುರಿತ ತಂತ್ರಜ್ಞರನ್ನು ಕ್ಯಾಮೆರಾ ಕೆಲಸಕ್ಕಾಗಿ ಆಯ್ಕೆ ಮಾಡಬೇಕಿತ್ತು. ಹಾಗಾಗಿ ನನ್ನ ಗೆಳೆಯರೂ ಆಗಿರುವ ದಕ್ಷಿಣ ಆಫ್ರಿಕಾದ ಮುಸಾಫಿಜಿ ಪೌಲ್ ಅವರನ್ನು ಆಯ್ಕೆ ಮಾಡಿದೆವು'' ಎಂದು ಮಾಹಿತಿ ನೀಡಿದರು ರಾಬಿ.
ರಾಬಿ ಅವರಿಗೆ ಸಿನಿಮಾ ಹೊಸದೇನೂ ಅಲ್ಲ. 2012 ರಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಮೊದಲಿಗೆ 'ಚಾಂಡಾಲ' ಸಿನಿಮಾಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಆ ನಂತರ ಗೆಳೆಯರೊಟ್ಟಿಗೆ ಸೇರಿ ಕಿರುಚಿತ್ರಗಳನ್ನು ಮಾಡಿದರು. ಬಳಿಕ ಸ್ವತಂತ್ರ್ಯವಾಗಿ ಕಿರುಚಿತ್ರ ನಿರ್ದೇಶನ ಮಾಡಿದರು. ಬಳಿಕ 'ಟಿಪಿಕಲ್ ಕೈಲಾಸ', 'ಬುದ್ಧಿವಂತ 2' ಸಿನಿಮಾಗಳಿಗೆ ಚಿತ್ರಕತೆ ರಚನೆಯಲ್ಲಿ ಸಹಾಯ ಮಾಡಿದ್ದಾರೆ. ಬಳಿಕ ಎರಡು ವರ್ಷ ಸಿನಿಮಾ ಚಿತ್ರಕತೆ ಅಧ್ಯಯನದಲ್ಲಿ ತೊಡಗಿದ್ದು, ಬಳಿಕ 'ರಕ್ತ ಗುಲಾಬಿ' ಸಿನಿಮಾ ಮಾಡಿದ್ದಾರೆ. ತಮ್ಮ ಮೊದಲ ಸಿನಿಮಾ 'ರಕ್ತ ಗುಲಾಬಿ'ಯನ್ನು ಬಹಳ ಭಿನ್ನವಾಗಿ ನಿರ್ಮಿಸಿದ್ದಾರೆ ರಾಬಿ. ಎರಡು ಗಂಟೆಗೂ ಹೆಚ್ಚಿನ ಅವಧಿಯ ಈ ಸಿನಿಮಾವನ್ನು ಕೇವಲ ಒಂದೇ ಶಾಟ್ನಲ್ಲಿ ಸೆರೆ ಹಿಡಿದಿದ್ದಾರೆ. ಸಿನಿಮಾದಲ್ಲಿ ಕಟ್ ಎನ್ನುವುದೇ ಇಲ್ಲ ಇಡೀಯ ಸಿನಿಮಾವನ್ನು ಕೇವಲ ಒಂದು ಶಾಟ್ನಲ್ಲಿ ಪೂರ್ತಿ ಮಾಡಲಾಗಿದೆ.


Click it and Unblock the Notifications











