ನಮ್ಮವ್ರು ಬೇರೆ ಭಾಷೆಯಲ್ಲಿ ಸಣ್ಣ ಪಾತ್ರ ಮಾಡ್ತಾರೆ, ರಜನಿಕಾಂತ್ ಬಂದು ಕನ್ನಡದಲ್ಲಿ ಮಾಡ್ತಾನಾ?: ರಾಜೇಂದ್ರಸಿಂಗ್ ಬಾಬು
ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಸ್ಟಾರ್ ನಟರು ಭಾಷೆಯ ಗಡಿಮೀರಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಸ್ಟಾರ್ ನಟರು ತೆಲುಗು, ತಮಿಳು ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಶಿವಣ್ಣ ಈಗ ಹೀರೊ ಆಗಿ ತೆಲುಗು ಚಿತ್ರದಲ್ಲಿ ನಟಿಸ್ತಿದ್ದಾರೆ. ಆದರೆ ಬೇರೆ ಭಾಷೆಯ ಸ್ಟಾರ್ ನಟರು ಮಾತ್ರ ಸ್ಯಾಂಡಲ್ವುಡ್ ಕಡೆ ತಿರುಗಿ ನೋಡ್ತಿಲ್ಲ.
ಇತ್ತೀಚೆಗೆ ಸ್ವತಃ ಕಿಚ್ಚ ಸುದೀಪ್ ಕೂಡ ಈ ಬಗ್ಗೆ ಮಾತನಾಡಿದ್ದರು. ಅವ್ರು ಕರೆದಾಗ ನಾನು, ಶಿವಣ್ಣ ಎಲ್ಲಾ ಹೋಗಿ ಗೆಸ್ಟ್ ಅಪಿಯರೆನ್ಸ್ ಮಾಡಿ ಬರ್ತೀವಿ. ಪ್ರೀತಿಯಿಂದ ಹೋಗಿ ನಟಿಸ್ತೀವಿ. ನಾವು ಕರೆದ್ರೆ ಮಾತ್ರ ಅವ್ರು ಬರಲ್ಲ. ಸ್ವತಃ ನಾನೇ ಕರೆದಾಗ ಕೂಡ ಏನೋ ಹೇಳಿ ನುಣುಚಿಕೊಳ್ತಾರೆ ಎಂದಿದ್ದರು. ಇದೇ ವಿಚಾರದ ಬಗ್ಗೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಾತನಾಡಿದ್ದಾರೆ.

ಕನ್ನಡದ ಕಲಾವಿದರು ಪರಭಾಷೆಯಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುವುದು ಯಾಕೆ? ಅವ್ರು ಬಂದು ಕನ್ನಡದಲ್ಲಿ ನಟಿಸ್ತಾರಾ? ರಜನಿಕಾಂತ್ ಕನ್ನಡ ಸಿನಿಮಾ ಮಾಡ್ತಾನಾ? ಎಂದು ಪ್ರಶ್ನಿಸಿದ್ದಾರೆ. ನಮ್ಮ ಮಾರ್ಕೆಟ್ ಅನ್ನು ಬಳಸಿಕೊಳ್ಳಲು ಯಾವುದೇ ಒಂದು ಪಾತ್ರ ಕೊಡ್ತಾರೆ ಅಷ್ಟೆ ಎಂದು ಹೇಳಿದ್ದಾರೆ. ಜೀ ಕನ್ನಡ ನ್ಯೂಸ್ ವಾಹಿನಿ ಸಂದರ್ಶನದಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಾತನಾಡಿದ್ದಾರೆ.
ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದವರು ರಾಜೇಂದ್ರ ಸಿಂಗ್ ಬಾಬು. ದಶಕಗಳ ಹಿಂದೆಯೇ ಬಾಲಿವುಡ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಬಾಲಿವುಡ್ ಸ್ಟಾರ್ ನಟರನ್ನು ನಿರ್ದೇಶಿಸಿದವರು. ಹಲವು ಪ್ರಯೋಗಗಳನ್ನು ಮಾಡಿದ್ದರು. ಅಂಬರೀಶ್ ಹಾಗೂ ವಿಷ್ಣುವರ್ಧನ್ ಜೊತೆ ಹಿಟ್ ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದರು. ಕನ್ನಡ ಕಲಾವಿದರು ಬೇರೆ ಭಾಷೆಯ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುವ ಬಗ್ಗೆ ರಾಜೇಂದ್ರಸಿಂಗ್ ಬಾಬು ಬೇಸರ ವ್ಯಕ್ತಪಡಿಸಿದ್ದಾರೆ.

ನಮ್ಮವ್ರು ಹೋಗಿ ಯಾವ್ದೋ ಜ್ಯೂನಿಯರ್ ಆರ್ಟಿಸ್ಟ್ ಕೆಲ್ಸ ಮಾಡಿದ್ರೆ, ಅದು ನಮ್ಮ ಕನ್ನಡಕ್ಕೆ ಅವಮಾನ. ರಜನಿಕಾಂತ್ ಕನ್ನಡಕ್ಕೆ ಬಂದು ಒಂದು ಸಿನ್ಮಾ ಮಾಡ್ಲಿ ನೋಡೋಣ. ಒಂದು ಪಾತ್ರ ಮಾಡಲಿ ಇಲ್ಲಿ. ಅವ್ನು ಕನ್ನಡ ಸಿನ್ಮಾನೇ ಮಾಡಲ್ಲ ಅಂತಾನೆ.. ಬೆಂಗಳೂರಿನಿಂದ ಹೋಗಿದ್ದು. ನಮ್ಮವ್ರು ಅಲ್ಲಿ ಹೋಗಿ ಸಣ್ಣ ಪಾತ್ರ ಮಾಡುವುದು ಇಷ್ಟವಾಗ್ಲಿಲ್ಲ. ಉಪೇಂದ್ರನಿಗೆ ಯಾವ ಪಾತ್ರ ಕೊಟ್ರು ಆ ಚಿತ್ರದಲ್ಲಿ. ಅದನ್ನು ನೋಡಿದ್ರೆ ಅವಮಾನ ಅನ್ಸತ್ತೆ. ನಮ್ಮ ಮಾರ್ಕೆಟ್ ಗಳಿಸಿಕೊಳ್ಳಲು ಪ್ಲ್ಯಾನ್ ಮಾಡ್ತಾರೆ ಅಷ್ಟೆ ವಿನಃ ನಾವು ಹೋಗಿ ಕೇಳಿದ್ರೆ ನಟಿಸಲ್ಲ. ನಾವು ಅವ್ರಿಗೆ ಬೇಕು, ನಮಗೆ ಅವ್ರು ಬೇಕು ಅಂದಾಗ ಬರಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ತಮಿಳಿನಲ್ಲಿ ಯಶಸ್ಸು ಸಿಕ್ಕ ಬಳಿಕ ರಜನಿಕಾಂತ್ ಕನ್ನಡದಲ್ಲಿ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ತಾರಾಸು ಅವರ 'ದಳವಾಯಿ ಮುದ್ದಣ್ಣ' ಕೃತಿಯನ್ನು ರಜನಿಕಾಂತ್ ಬಹಳ ಮೆಚ್ಚಿದ್ದರು. ಮುದ್ದಣ್ಣನ ಪಾತ್ರದಲ್ಲಿ ನಟಿಸುವವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಅದು ಸಾಧ್ಯವಾಗಲೇ ಇಲ್ಲ. ಇತ್ತೀಚೆಗೆ ಶಿವರಾಜ್ಕುಮಾರ್ ಸಂದರ್ಶನವೊಂದರಲ್ಲಿ ಮಾತನಾಡಿ ಪರಭಾಷೆಯ ಸ್ಟಾರ್ ನಟರೊಬ್ಬರು ಕನ್ನಡದಲ್ಲಿ ನಟಿಸುತ್ತಾರೆ. ನೋಡ್ತಾಯಿರಿ, ಈಗ್ಲೇ ಯಾರು ಎನ್ನುವುದು ಹೇಳುವುದಿಲ್ಲ ಎಂದಿದ್ದರು. ಅದು ರಜನಿಕಾಂತ್ ಇರಬಹುದಾ? ಎಂದು ಕೆಲವರು ಭಾವಿಸಿದ್ದರು.
'ಜೈಲರ್' ಚಿತ್ರದ ಸಣ್ಣ ಪಾತ್ರದಲ್ಲಿ ಶಿವಣ್ಣ ನಟಿಸಿ ಗೆದ್ದಿದ್ದರು. ಇದೀಗ ತೆಲುಗು, ತಮಿಳಿನ ಕಥೆಗಳನ್ನು ಕೇಳುತ್ತಿದ್ದಾರೆ. ಒಂದೆರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ರಾಮ್ಚರಣ್ ಜೊತೆ ನಟಿಸಿದ್ದ 'ಪೆದ್ದಿ' ಸಿನಿಮಾ ತೆರೆಗೆ ಬಂದು ಸಕ್ಸಸ್ ಕಂಡಿತ್ತು. 'ಗುಮ್ಮಡಿ ನರಸಯ್ಯ' ಬಯೋಪಿಕ್ ಚಿತ್ರದ ಲೀಡ್ ರೋಲ್ನಲ್ಲಿ ಸೆಂಚುರಿ ಸ್ಟಾರ್ ಬಣ್ಣ ಹಚ್ಚಿರುವುದು ವಿಶೇಷ. ಮತ್ತೊಂದು ಕಡೆ 'ಕೂಲಿ' ಬಳಿಕ ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ತಮಿಳು ಚಿತ್ರದಲ್ಲಿ ಉಪೇಂದ್ರ ನಟಿಸೋಕೆ ಒಪ್ಪಿದ್ದಾರೆ.


Click it and Unblock the Notifications