ಮಂಡ್ಯ ರವಿ ಬಹಳ ಶೃದ್ಧೆಯಿಂದ ನಟಿಸುತ್ತಿದ್ದರು: 'ವರಲಕ್ಷ್ಮೀ ಸ್ಟೋರ್ಸ್' ನಿರ್ದೇಶಕ ಭಾವುಕ
ಕಿರುತೆರಯ ಖ್ಯಾತ ನಟ ಮಂಡ್ಯ ರವಿ ನಿನ್ನೆ(ಸಪ್ಟೆಂಬರ್14) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ನಟನೆಯ ಬಗ್ಗೆ ಅತೀವ ಒಲವು ಹೊಂದಿದ್ದ ಅವರು ಪದವೀಧರರಾಗಿದ್ದರೂ, ರಂಗಭೂಮಿ ಕಲಾವಿದರ ತಂಡ ಸೇರಿಕೊಂಡರು. ಹವ್ಯಾಸಿ ನಟನಾಗಿದ್ದ ಮಂಡ್ಯ ರವಿ, ಟಿ.ಎಸ್ ನಾಗಾಭರಣ ಅವರ ಮಹಾಮಾಯಿ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು. ಬಳಿಕ ಟಿ.ಎನ್ ಸೀತಾರಾಮ್ ಅವರ ತಂಡ ಸೇರಿದ ರವಿ ಮುಕ್ತ-ಮುಕ್ತ, ಚಂದ್ರಲೇಖ, ಮಿಂಚು, ಯಶೋಧೆ, ನಮ್ಮನೆ ಯುವರಾಣಿ, ಅರ್ಧಾಂಗಿ ಹಾಗೂ ವರಲಕ್ಷ್ಮೀ ಸ್ಟೋರ್ಸ್ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಮಂಡ್ಯ ರವಿ ಅವರು ಇತ್ತೀಚಿಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವರಲಕ್ಷ್ಮೀ ಸ್ಟೋರ್ಸ್ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. ಮಂಡ್ಯ ರವಿ ಅವರ ನಟನೆಯ ಬಗ್ಗೆ ವರಲಕ್ಷ್ಮೀ ಸ್ಟೋರ್ಸ್ ಧಾರಾವಾಹಿ ನಿರ್ದೇಶಕ ರಾಜೇಶ್ ಗೌಡ ಫಿಲ್ಮೀಬೀಟ್ ಕನ್ನಡದ ಜೊತೆ ಮಾತನಾಡಿದ್ದಾರೆ.

''ಮಂಡ್ಯ ರವಿ ನನಗೆ ಪರಿಚಯವಾಗಿದ್ದಾಗ ಅವರು ಆರೋಗ್ಯವಾಗಿಯೇ ಇದ್ದರು. ಇತ್ತೀಚಿಗೆ ಅವರ ಆರೋಗ್ಯ ಹದಗೆಟ್ಟಿತ್ತು. ಮೂರು ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಇಂದು ಮಧ್ಯಾಹ್ನದವರೆಗೂ ಚೆನ್ನಾಗಿಯೇ ಇದ್ದರು. ಸಂಜೆ ವೇಳೆಗೆ ಈ ಸುದ್ದಿ ಕೇಳಿ ಆಘಾತವಾಗಿದೆ. ಅವರು ನಮ್ಮೊಂದಿಗೆ ಆತ್ಮೀಯವಾಗಿದ್ದರು. ತುಂಬಾ ಒಳ್ಳೆಯ ನಟ. ಕೆಲಸದ ವಿಚಾರ ಬಂದಾಗ ಶೃದ್ಧೆಯಿಂದ ನಟಿಸುತ್ತಿದ್ದರು. ಅವರು ಕಿರುತೆರೆಗೆ ಕಾಲಿಟ್ಟು 15ರಿಂದ 16 ವರ್ಷವಾಯ್ತು. ನಮಗೂ ಒಂದು ಧಾರಾವಾಹಿಯಿಂದ ಹಳೆಯ ಪರಿಚಯವಿತ್ತು. ವರಲಕ್ಷ್ಮೀ ಸ್ಟೋರ್ಸ್ ಧಾರಾವಾಹಿಯಲ್ಲಿ ತುಂಬಾ ಉತ್ತಮವಾಗಿ ನಟಿಸಿದ್ದರು. ಯಾವತ್ತೂ ಕೆಲಸದ ವಿಚಾರದಲ್ಲಿ ಸಮಸ್ಯೆ ಮಾಡಿದವರಲ್ಲ'' ಎಂದು ತಮ್ಮ ಹಾಗೂ ಅವರ ಒಡನಾಟದ ಬಗ್ಗೆ ಹಂಚಿಕೊಂಡಿದ್ದಾರೆ.
ಕಿರುತೆರೆ ಕಲಾವಿದ ರವಿ ಅವರ ನಿಧನ ಕಿರುತೆರೆ ಲೋಕಕ್ಕೆ ದೊಡ್ಡ ಆಘಾತ ತಂದಿದ್ದು, ಅನೇಕ ಕಿರುತೆರೆ ಕಲಾವಿದರು ಮಂಡ್ಯ ರವಿ ಅವರ ಅಕಾಲಿಕ ಅಗಲಿಕೆ ಕಂಬನಿ ಮಿಡಿದಿದ್ದಾರೆ.


Click it and Unblock the Notifications











