ಕಥೆ ಕದ್ದ ಆರೋಪದಲ್ಲಿ 'ಪ್ರೀಮಿಯರ್ ಪದ್ಮಿನಿ': ಬರಹಗಾರ ವಸುಧೇಂದ್ರ ಆರೋಪ
'ಪ್ರೀಮಿಯರ್ ಪದ್ಮಿನಿ' ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಸಿನಿಮಾ. ಚಿತ್ರಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ನವರಸ ನಾಯಕ ಜಗ್ಗೇಶ್, ಮಧುಬಾಲ ಮತ್ತು ಸುಧಾರಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಹೊಸತನದ ಸಿನಿಮಾವಾಗಿ ಹೊರಹೊಮ್ಮಿದ ಪ್ರೀಮಿಯರ್ ಪದ್ಮಿನಿ ಸಿನಿಮಾ ಸಿನಿಪ್ರಿಯರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆದ್ರೀಗ ಚಿತ್ರಕ್ಕೆ ಹೊಸ ವಿವಾದವೊಂದು ಅಂಟಿಕೊಂಡಿದೆ. ನಿರ್ದೇಶಕ ರಮೇಶ್ ಇಂದಿರ ಪ್ರೀಮಿಯರ್ ಪದ್ಮಿನಿ ಚಿತ್ರದ ಕತೆಯನ್ನು ಕದ್ದು ಸಿನಿಮಾ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಚಿತ್ರದ ಒಂದು ಪಾತ್ರವನ್ನು ವಸುಧೇಂದ್ರ ಅವರ ಕತೆಯಿಂದ ಯಥಾವತ್ತಾಗಿ ಬಳಸಿಕೊಂಡಿದ್ದಾರಂತೆ. ಹಾಗಾಗಿ ರಮೇಶ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ವಸುಧೇಂದ್ರ. ರಮೇಶ್ ಇಂದಿರಾ ಕೃತಿಚೌರ್ಯ ಮಾಡಿರುವ ಬಗ್ಗೆ ವಸುಧೇಂದ್ರ ಹೇಳಿದ್ದೇನು?ಮುಂದೆ ಓದಿ..

ಪ್ರೀಮಿಯರ್ ಪದ್ಮಿಯಲ್ಲಿ ವಸುಧೇಂದ್ರ ಅವರ 'ನಂಜುಂಡಿ'
ಪ್ರೀಮಿಯರ್ ಪದ್ಮಿನಿ ಸಿನಿಮಾದ ನಂಜುಂಡ ಪಾತ್ರ, ಬರಹಗಾರ ವಸುಧೇಂದ್ರ ಅವರು ಬರೆದ ವರ್ಣಮಯ ಪುಸ್ತಕದಲ್ಲಿರುವ 'ನಂಜುಂಡಿ' ಎನ್ನುವ ಹೆಸರಿನಲ್ಲಿರುವ ಪ್ರಬಂಧದ ಪಾತ್ರವಾಗಿದೆಯಂತೆ. ಅದೆ ಪಾತ್ರವನ್ನು ನಿರ್ದೇಶಕರ ಯತಾವತ್ತಾಗಿ ಬಳಸಿಕೊಂಡಿದ್ದಾರೆ ಎಂದು ವಸುಧೇಂದ್ರ ಆರೋಪಿಸಿದ್ದಾರೆ. ಸಿನಿಮಾ ರಿಲೀಸ್ ಆದ ಮೇಲೆ ನೋಡಿದ್ರೆ ಚಿತ್ರದ ಹಲವು ದೃಶ್ಯಗಳು ನನ್ನ ಪ್ರಬಂಧದಿಂದ ನೇರವಾಗಿ ನಕಲು ಮಾಡಿಕೊಂಡಿದ್ದು ನೋಡಿ ಬೇಸರವಾಗಿದೆ ಎಂದು ಹೇಳಿದ್ದಾರೆ.

ಅಸಮದಾನ ಹೊರಹಾಕಿದ ವಸುಧೇಂದ್ರ
"ಪ್ರೀಮಿಯರ್ ಪದ್ಮಿನಿ" ಸಿನಿಮಾದಲ್ಲಿರುವ ನಂಜುಂಡಿ ಪಾತ್ರವು ನನ್ನ "ವರ್ಣಮಯ" ಪುಸ್ತಕದಲ್ಲಿರುವ ಸುದೀರ್ಘ ಪ್ರಬಂಧ "ನಂಜುಂಡಿ" ಯಿಂದ ತೆಗೆದುಕೊಂಡದ್ದು. ಅದರ ಬಹುತೇಕ ವಿವರಗಳನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ. ನಿರ್ದೇಶಕರು ಮೊದಲಿಗೆ ನನ್ನನ್ನು ಭೇಟಿಯಾಗಿ, ನನ್ನ ಎರಡು ಪ್ರಬಂಧಗಳನ್ನು ಬಳಸಿಕೊಂಡು ಸಿನಿಮಾ ಮಾಡುವುದಾಗಿ ಹೇಳಿದ್ದರು. ಅದಕ್ಕೆ ಸಂಭಾವನೆಯನ್ನೂ ನಿಗದಿ ಪಡಿಸಲಾಗಿತ್ತು. ಅನಂತರ ಕರಾರು ಪತ್ರವನ್ನು ಶುಭದಿನದಂದು ಮಾಡಿಕೊಳ್ಳೋಣ ಎಂದು ಹೇಳಿ ಹೋದವರು ಮತ್ತೆ ವಾಪಾಸಾಗಲಿಲ್ಲ.

ನನ್ನ ಒಪ್ಪಿಗೆ ಇಲ್ಲದೆ ಸಿನಿಮಾ ಆಗಿರುವುದು ಇಷ್ಟವಾಗಲಿಲ್ಲ
ಸಿನಿಮಾ ಬಿಡುಗಡೆಗೆ ಮುಂಚೆ ಕರೆ ಮಾಡಿ, "ಸಿನಿಮಾ ಮಾಡಿಬಿಟ್ಟೆ ಸಾರ್. ಆ ಪ್ರಬಂಧದ ಪ್ರೇರಣೆ ನನಗೆ ಸಾಕಷ್ಟಿದೆ. ಅದನ್ನು ಟೈಟಲ್ ಕಾರ್ಡ್ನಲ್ಲಿ ಹಾಕಬಹುದೆ?" ಎಂದು ವಿಚಾರಿಸಿದರು. ನನ್ನ ಒಪ್ಪಿಗೆ ಇಲ್ಲದೆ ಸಿನಿಮಾ ಆಗಿರುವುದು ನನಗೆ ಇಷ್ಟವಾಗಲಿಲ್ಲ. "ಪ್ರೇರಣೆಯನ್ನು ಪಡೆದುಕೊಂಡಿದ್ದರೆ ನನಗೆ ಸಮಸ್ಯೆಯಿಲ್ಲ. ಆದರೆ ಪ್ರಬಂಧದ ದೃಶ್ಯಗಳನ್ನು ತೆಗೆದಕೊಳ್ಳುವಂತಿಲ್ಲ. ಯಾವುದೋ ಮತ್ತೊಂದು ಕತೆಯ ಭಾಗವಾಗಿ ನನ್ನ ಪಾತ್ರಗಳು ಬರುವುದು ನನಗೆ ಇಷ್ಟವಿಲ್ಲ" ಎಂದು ಹೇಳಿದ್ದೆ. ಅನಂತರ ಅವರು ಸುಮ್ಮನಾಗಿಬಿಟ್ಟರು.

ಇದು ಲೇಖಕರು ಮತ್ತು ಕತೆಗಾರರ ಬಗ್ಗೆ ಇರುವ ಅಲಕ್ಷ್ಯ
ಈಗ ಸಿನಿಮಾದಲ್ಲಿ ಬಹುತೇಕ 'ನಂಜುಂಡ' ಪಾತ್ರದ ದೃಶ್ಯಗಳು ನನ್ನ ಪ್ರಬಂಧದಿಂದ ನೇರವಾಗಿ ತೆಗೆದುಕೊಳ್ಳಲಾಗಿದೆ. ಸಿನಿಮಾದ ಬಹುತೇಕ ಮಂದಿಗೆ ಲೇಖಕರು ಮತ್ತು ಕತೆಗಾರರ ಬಗ್ಗೆ ಇರುವ ಅಲಕ್ಷ್ಯ ಈ ಘಟನೆಯಿಂದ ಗೊತ್ತಾಗುತ್ತದೆ. ಇಲ್ಲಿ ಸಮಸ್ಯೆ ಇರುವುದು ಹಣದ್ದಲ್ಲ. ಅಂತಹ ದೊಡ್ಡ ಹಣದ ವ್ಯವಹಾರವೇನೂ ಸಾಹಿತಿಗಳ ಮಧ್ಯೆ ನಡೆಯುವುದಿಲ್ಲ. ಆದರೆ ಯಾವುದೋ ನನಗೆ ಒಪ್ಪಿಗೆಯಾಗದ ಅಸೂಕ್ಷ್ಮ ಕತೆಯ ಸಿನಿಮಾವೊಂದರ ಭಾಗವಾಗಿ ನನ್ನ ಪಾತ್ರಗಳನ್ನು ಬಳಸಿಕೊಳ್ಳುವುದನ್ನು ನಾನು ವಿರೋಧಿಸುತ್ತೇನೆ.

ಇಂತ ಘಟನೆಗಳು ಕನ್ನಡದಲ್ಲಿ ಮತ್ತೆ ನಡೆಯದಿರಲಿ
ಇದು ಮತ್ತೊಬ್ಬ ಕತೆಗಾರನಿಗೆ ಆಗಬಾರದು ಎನ್ನುವ ಕಾಳಜಿಯೇ ಈ ವಿರೋಧದ ಮೂಲ ಉದ್ದೇಶ. ಸಿನಿಮಾದ ಮೂಲಕ ಜನಪ್ರಿಯತೆ ಗಳಿಸುವ ಹಪಹಪಿಯೂ ನನಗಿಲ್ಲ. ಏಕೆಂದರೆ ಈಗಾಗಲೇ ನನ್ನ ಪುಸ್ತಕಗಳು ಹಲವಾರು ಮುದ್ರಣಗಳನ್ನು ಕಂಡು ಓದುಗರ ಮನ್ನಣೆ ಗಳಿಸಿವೆ. ಅದಕ್ಕೆ ಸಿನಿಮಾ ಮಂದಿಯ ಮುದ್ರೆ ಬೇಕಿಲ್ಲ. ಈಗ ನನ್ನ ಸುದೀರ್ಘ ಪ್ರಬಂಧವನ್ನು ಮತ್ತೊಬ್ಬರು ಸಿನಿಮಾ ಮಾಡುವುದಕ್ಕೂ ಸಾಧ್ಯವಿಲ್ಲ. ಅದನ್ನು ಅರ್ಧಂಬರ್ಧ, ತಮ್ಮ ಮನಸ್ಸಿಗೆ ತೋಚಿದಂತೆ ಈ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಇಂತಹ ಘಟನೆಗಳು ಕನ್ನಡದಲ್ಲಿ ಮತ್ತೆ ನಡೆಯದಿರಲಿ ಎನ್ನುವುದಷ್ಟೇ ನನ್ನ ಕಳಕಳಿ. ಪ್ರೀತಿ ಅಭಿಮಾನ ತೋರಿಸುವ ನನ್ನೆಲ್ಲಾ ಓದುಗರು ನನಗೆ ಸಾಕು. ಅವರಿಗೆ ಯಾವತ್ತೂ ಋಣಿ.


Click it and Unblock the Notifications











