'ಆಕೆ ಐಷಾರಾಮಿ ಮನೆಯಲ್ಲಿದ್ದಾರೆ, ನಾನು ಬಾಡಿಗೆ ಮನೆಯಲ್ಲಿ ಇದ್ದೇನೆ' : ಇದು ನಿರ್ದೇಶಕನ ನೋವು!
''24 ವರ್ಷದ ನನ್ನ ಸಿನಿಮಾ ದುಡಿಮೆಯನ್ನು ಇಂದು ನೀರಿನಲ್ಲಿ ಹೋಮ ಮಾಡಿದ್ದಾರೆ. ಆಕೆ ಐಷಾರಾಮಿ ಮನೆಯಲ್ಲಿ ಇದ್ದಾರೆ, ನಾನು ಇಂದೂ 8 ಸಾವಿರದ ಬಾಡಿಗೆ ಮನೆಯಲ್ಲಿ ಇದ್ದೇನೆ'' ಹೀಗೆ ಹೇಳಿ ಒಂದು ಕ್ಷಣ ಭಾವುಕರಾದರು ನಿರ್ದೇಶಕ ರವಿ ಶ್ರೀವತ್ಸ.
ಹೌದು, ನಿರ್ದೇಶಕ ರವಿ ಶ್ರೀವತ್ಸ ಈಗ ನಟಿ ಸಂಜನಾ ಮೇಲೆ ಅಸಮಾಧಾನಗೊಂಡಿದ್ದಾರೆ. ತನ್ನ ಮೇಲೆ ಸಂಜನಾ ಮಾಡಿರುವ ಆರೋಪಕ್ಕೆ ರವಿ ಶ್ರೀವತ್ಸ ತಿರುಗೇಟು ನೀಡಿದ್ದಾರೆ.
'ಗಂಡ ಹೆಂಡತಿ' ಸಿನಿಮಾದ ವಿವಾದದ ಬಗ್ಗೆ ಇಂದು ಮಾತನಾಡಿದ ಅವರು ಅನೇಕ ವಿಷಯಗಳನ್ನು ಹಂಚಿಕೊಂಡರು. ಇಷ್ಟು ವರ್ಷದ ತಮ್ಮ ಸಿನಿಮಾ ಜೀವನವನ್ನು ನೆನೆಪು ಮಾಡಿಕೊಂಡು ನೋವಿನ ನುಡಿಯನ್ನು ಹೊರ ಹಾಕಿದರು. ಮುಂದೆ ಓದಿ...

24 ವರ್ಷದ ದುಡಿಮೆ ನೀರಿನಲ್ಲಿ ಹೋಮ
''24 ವರ್ಷದ ನಮ್ಮ ಸಿನಿಮಾ ದುಡಿಮೆಯನ್ನು ನೀರಿನಲ್ಲಿ ಹೋಮ ಮಾಡಿದ್ದಾರೆ. ನಾನು ಎಷ್ಟೋ ನಟಿಯರ ಜೊತೆಗೆ ಕೆಲಸ ಮಾಡಿದ್ದೇನೆ. ಮಾಲಾಶ್ರೀ ಅವರ ಜೊತೆಗೆ ಸಿನಿಮಾ ಮಾಡಿದ್ದೇನೆ. ಅವರನ್ನು 'ಅಮ್ಮ' ಎಂದು ಕರೆಯುತ್ತಾನೆ. ನನ್ನ ಸಿನಿಮಾದಲ್ಲಿ ನಟಿಸಿದ ಎಲ್ಲ ನಟಿಯರನ್ನು ಕರೆದು ನನ್ನ ಬಗ್ಗೆ ಕೇಳಿ.'' - ರವಿ ಶ್ರೀವತ್ಸ, ನಿರ್ದೇಶಕ

ಇಂದೂ ಬಾಡಿಗೆ ಮನೆಯಲ್ಲಿ ಇದ್ದೇನೆ
''ನಿಮ್ಮ ಅಷ್ಟೂ ಆಸ್ತಿಯ ಐ ಟಿ ರಿಟನ್ಸ್ ಮಾಡಿದ್ದೀರಾ?. ಇವತ್ತು ನಿಮ್ಮ ಬಳಿ ಜಾಗ್ವರ್ ಕಾರ್ ಇದೆ. ನನ್ನ ಬಳಿ ಕೇವಲ ಒಂದೇ ಒಂದು ಮಾರುತಿ ಬೆಲೆನೋ ಕಾರ್ ಇದೆ. ನೀವು ಐಷಾರಾಮಿ ಮನೆ ಕಟ್ಟಿದ್ದೀರಾ ನಾನು ಇಂದೂ 8 ಸಾವಿರದ ಬಾಡಿಗೆ ಮನೆಯಲ್ಲಿ ಇದ್ದೇನೆ.'' - ರವಿ ಶ್ರೀವತ್ಸ, ನಿರ್ದೇಶಕ

'ಗಂಡ ಹೆಂಡತಿ' ನನಗೆ ಅನ್ನ ಕೊಟ್ಟ ಸಿನಿಮಾ
''ಗಂಡ ಹೆಂಡತಿ' ನನಗೆ ಅನ್ನ ಕೊಟ್ಟ ಸಿನಿಮಾ. ಹಾಲು ಕುಡಿಸಿದ ತಾಯಿಯನ್ನು ಮರೆಯುವುದಕ್ಕೆ ಆಗುತ್ತದೆಯೇ. 'ಡೆಡ್ಲಿ ಸೋಮ', 'ಗಂಡ ಹೆಂಡತಿ' ನನ್ನ ಜೀವನದ ಹಾದಿಯ ಮೆಟ್ಟಿಲುಗಳು. ಇವತ್ತು ಕನ್ನಡ ನಿರ್ದೇಶಕನ ಮಾನ ತೆಗೆದ ಈಕೆ ನಾಳೆ ತಮಿಳು, ತೆಲುಗು, ಮಲೆಯಾಳಂ ನಿರ್ದೇಶಕನಿಗೂ ಇದೇ ಸ್ಥಿತಿಗೆ ತರುತ್ತಾಳೆ.'' - ರವಿ ಶ್ರೀವತ್ಸ, ನಿರ್ದೇಶಕ

ನಾನು ಮದುವೆ ಆಗಿಲ್ಲ
''ನಾನು ಮದುವೆ ಆಗಿಲ್ಲ. 'ಗಂಡ ಹೆಂಡತಿ' ಸಂಬಂಧದ ಬಗ್ಗೆ ನನಗೆ ದೊಡ್ಡ ಗೌರವವಿದೆ. ನನಗೆ ಸಿನಿಮಾದಲ್ಲಿ 'ಗಂಡ ಹೆಂಡತಿ'ಯ ಒಳ್ಳೆಯ ಸಂಬಂಧವನ್ನು ತೋರಿಸಬೇಕು ಎಂಬ ದೃಷ್ಟಿ ಇತ್ತು. ಸಿನಿಮಾ ಕ್ಲೈಮ್ಯಾಕ್ಸ್ ಬಗ್ಗೆ ನೀವು ಮಾತಾಡಿ. ಸೆಕ್ಸ್ ಸಿನಿಮಾ ಮಾಡುವ ಅಗತ್ಯ ನನಗೆ ಇಲ್ಲ.'' - ರವಿ ಶ್ರೀವತ್ಸ, ನಿರ್ದೇಶಕ

ಬೆವರು ಒರೆಸಿಕೊಳ್ಳಲು ಸಮಯ ಇರುವುದಿಲ್ಲ
''ಹಗಲು ರಾತ್ರಿ ಸಿನಿಮಾಗಾಗಿ ಕೆಲಸ ಮಾಡು ಅಂತ ನನ್ನ ಗುರುಗಳು ಕೇಳಿ ಕೊಟ್ಟಿದ್ದಾರೆ. ನಮ್ಮ ಬೆವರನ್ನು ಒರೆಸಿಕೊಳ್ಳಲು ನಮಗೆ ಸಮಯ ಇರುವುದಿಲ್ಲ. ಬ್ಯಾಂಕಾಕ್ ನಲ್ಲಿ ಶೂಟಿಂಗ್ ಮಾಡುವಾಗ ನಾವು ನಾಳೆಯ ಸೀನ್ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದರೆ, ಆಕೆ ಶಾಪಿಂಗ್ ಗೆ ಹೋಗುತ್ತಿದ್ದರು.'' - ರವಿ ಶ್ರೀವತ್ಸ, ನಿರ್ದೇಶಕ

ಮನಸ್ಸಿಗೆ ತುಂಬ ನೋವಾಗುತ್ತದೆ
''ನಾನು ವಿಷ್ಣು ಸರ್ ಅವರ ಜೊತೆಗೆ ಕೆಲಸ ಮಾಡಿದ್ದೇನೆ. ರವಿ ಶ್ರೀವತ್ಸ ತುಂಬ ಮಾಗಿದ್ದಾನೆ. ಆಕೆ ಇದೇ ಮಾತನ್ನು ಹತ್ತು ವರ್ಷದ ಹಿಂದೆ ಹೇಳಿದ್ದಾರೆ. ನನ್ನ ಬಳಿ ಬೇರೆಯೇ ಉತ್ತರ ಇರುತಿತ್ತು. ನನಗೆ ಇನ್ನೊಂದು ವರ್ಷ ಆದರೆ 50 ವರ್ಷ ಆಗುತ್ತದೆ. ಈಗ ನನಗೆ ಇದೆಲ್ಲ ಬೇಡ. ಮನಸ್ಸಿಗೆ ತುಂಬ ನೋವಾಗುತ್ತದೆ.''


Click it and Unblock the Notifications











