ನನ್ನ ಹೆಸರಲ್ಲಿ ಸುದೀಪ್, ಯಶ್, ಶಿವಣ್ಣನನ್ನು ಟಾರ್ಗೆಟ್ ಮಾಡ್ತಿದ್ದಾರೆ; ಎಸ್. ನಾರಾಯಣ್
ಕನ್ನಡ ಚಿತ್ರದಲ್ಲೀಗ ಕಿಡಿಗೇಡಿಗಳ ಫೇಕ್ ಅಕೌಂಟ್ ಬಗ್ಗೆ ಭಾರೀ ಚರ್ಚೆ ನಡೀತಿದೆ. ಇತ್ತೀಚೆಗೆ ನಟಿ ರಮ್ಯಾ ಅವರಿಗೆ ಕೆಟ್ಟದಾಗಿ ಕೆಲವರು ಮೆಸೇಜ್ ಮಾಡಿದ್ದರು. ಈ ಬಗ್ಗೆ ಆಕೆ ಕಾನೂನು ಸಮರ ಆರಂಭಿಸಿದ್ದಾರೆ. ಇದೀಗ ನಿರ್ದೇಶಕ, ನಟ ಎಸ್. ನಾರಾಯಣ್ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ನನ್ನ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಬೇರೆ ನಟರನ್ನು ಟ್ರೋಲ್ ಮಾಡುತ್ತಿದ್ದಾರೆ ಎಂದು ಎಸ್. ನಾರಾಯಣ್ ಅಸಮಾಧಾನ ಹೊರ ಹಾಕಿದ್ದಾರೆ. ನನ್ನ ಫೋಟೊ ಹಾಕಿ, ನನ್ನ ಹೆಸರಿನಲ್ಲಿ ಟ್ವಿಟ್ಟರ್ ಅಕೌಂಟ್ ಕ್ರಿಯೇಟ್ ಮಾಡಿ ನಾನೇ ಬೇರೆ ನಟರನ್ನು ಟ್ರೋಲ್ ಮಾಡುವಂತೆ ಬಿಂಬಿಸುತ್ತಿದ್ದಾರೆ. ಇತ್ತೀಚೆಗೆ ಇದನ್ನು ಯಾರೋ ನನ್ನ ಗಮನಕ್ಕೆ ತಂದರು. ಹಾಗಾಗಿ ಆಯುಕ್ತರನ್ನು ಭೇಟಿ ಮಾಡಿ ದೂರು ನೀಡುತ್ತಿದ್ದೇನೆ. ಆ ಫೇಕ್ ಅಕೌಂಟ್ ತೆಗೆದು ಹಾಕುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ದೂರು ನೀಡಿದ ಬಳಿಕ ಎಸ್. ನಾರಾಯಣ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. "ನನ್ನ ಎಕ್ಸ್ ಖಾತೆ ಇಲ್ಲ. ಆದರೆ ನನ್ನ ಹೆಸರು, ಫೋಟೊ ಹಾಕಿ ಅಕೌಂಟ್ ಕ್ರಿಯೇಟ್ ಮಾಡಿದ್ದಾರೆ. ಆ ಫೇಕ್ ಅಕೌಂಟ್ನಿಂದ ಎಲ್ಲಾ ನಟರನ್ನು ಬೈದು ಪೋಸ್ಟ್ ಮಾಡುತ್ತಿದ್ದಾರೆ. ಅಪ್ಪು, ಶಿವಣ್ಣ, ಸುದೀಪ್ ಅವರ ಫೋಟೊಗಳನ್ನು ಹಾಕಿ ಕೆಟ್ಟ ಕೆಟ್ಟ ಕಾಮೆಂಟ್ಸ್ ಮಾಡುತ್ತಿದ್ದಾರೆ. ಬಹುತೇಕ ಎಲ್ಲಾ ಕಲಾವಿದರ ಬಗ್ಗೆ ನಾನು ಕಾಮೆಂಟ್ ಮಾಡುವಂತೆ ಪೋಸ್ಟ್ ಆಗಿದೆ. ಸಾವಿರಾರು ಪೇಜ್ಗಳಿವೆ, ಯಾರೋ ಸ್ನೇಹಿತರು ಹೇಳಿದಾಗ ನನ್ನ ಗಮನಕ್ಕೆ ಬಂತು" ಎಂದು ಹೇಳಿದ್ದಾರೆ.
ಯಾರು ಈ ರೀತಿ ಮಾಡುತ್ತಿದ್ದಾರೆ ಎನ್ಉವ ಬಗ್ಗೆ ನನಗೆ ಐಡಿಯಾ ಇಲ್ಲ ಎಂದಿದ್ದಾರೆ. "ಈವರೆಗೆ ನನಗೆ ಇಂಥಹ ಅನುಭವ ಆಗಿಲ್ಲ. ಇದು ಹೊಸ ಅನುಭವ. ನನ್ನ ಅಕೌಂಟ್ ನಾನೇ ಬಳಸುತ್ತೇನೆ. ಸೋಶಿಯಲ್ ಮೀಡಿಯಾದಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ. ಕನ್ನಡಿಗರಿಗೆ ಇದು ಅವಮಾನ. ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಮಾತಾಡಿ. ಆದರೆ ಎಲ್ಲದಕ್ಕೂ ಒಂದು ಎಲ್ಲೆ ಇದೆ. ಬೇರೆಯವರ ತೇಜೋವಧೆ ಮಾಡುವುದು ಎಷ್ಟು ಸರಿ?" ಎಂದು ಎಸ್. ನಾರಾಯಣ್ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ನಾನು 'ಎಕ್ಕ' ಸಿನಿಮಾ ನೋಡಿ ಮೆಚ್ಚಿ ರಾಘಣ್ಣ ಹಾಗೂ ನಿರ್ಮಾಪಕರಿಗೆ ಫೋನ್ ಮಾಡಿ ಮಾತನಾಡಿದ್ದೆ. ಆದರೆ ಇಲ್ಲಿ 'ಎಕ್ಕ' ಸಿನಿಮಾ ಬಗ್ಗೆ ನನ್ನ ಫೇಕ್ ಅಕೌಂಟ್ನಲ್ಲಿ ಕೆಟ್ಟ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾರೆ. ಅವ್ರು ನೋಡಿದರೆ ಏನಂದುಕೊಳ್ಳುತ್ತಾರೆ. ಇದು ಚಿತ್ರರಂಗಕ್ಕೆ ಇದು ಮಾರಕ. ಫ್ಯಾನ್ಸ್ ಹುಟ್ಟಿಕೊಂಡ ದಿನದಿಂದಲೂ ಫ್ಯಾನ್ಸ್ ವಾರ್ ಇದೆ. ಆದರೆ ಇದು ಬಹಳ ಅತಿರೇಕಕ್ಕೆ ಹೋಗುತ್ತಿದೆ. ಸ್ಟಾರ್ ನಟರು ಅಭಿಮಾನಿಗಳಿಗೆ ತಿಳಿ ಹೇಳುವುದಲ್ಲ, ನಾವೆಲ್ಲಾ ನಾಗರೀಕರು. ಮೊದಲು ಅದನ್ನು ಮರೆಯಬಾರದು" ಎಂದು ಎಸ್. ನಾರಾಯಣ್ ಅಭಿಪ್ರಾಯ ಪಟ್ಟಿದ್ದಾರೆ.
ಎಸ್. ನಿರ್ದೇಶನದ 'ಮಾರುತ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ದುನಿಯಾ ವಿಜಯ್ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ. ಕೆ.ಮಂಜು ಹಾಗೂ ರಮೇಶ್ ಯಾದವ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಬೃಂದಾ, ಸಾಧುಕೋಕಿಲ, ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧಾ, ಶರತ್ ಲೋಹಿತಾಶ್ವ ತಾರಾಗಣದಲ್ಲಿದ್ದಾರೆ.


Click it and Unblock the Notifications











