'ಒಬ್ಬ ಸಾಮಾನ್ಯ ಪ್ರಜೆಯ ಅಳಲು ಅಷ್ಟೇ': ನಿರ್ದೇಶಕ ಶಶಾಂಕ್ ಮುಂದಿಟ್ಟ ಪ್ರಶ್ನೆಗೆ ಉತ್ತರಿಸುವುದ್ಯಾರು?
ಕೊರೊನಾ ವೈರಸ್ ಹರಡುವಿಕೆ ನಿಯಂತ್ರಿಸುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ ಎನ್ನುವುದು ವಾಸ್ತವ. ಸರ್ಕಾರದ ನಿಯಮ, ಸೌಲಭ್ಯ, ವ್ಯವಸ್ಥೆಗೆ ಕಾಯದೆ ಸಾರ್ವಜನಿಕರೇ ಎಚ್ಚರವಾಗಬೇಕು ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯವಾಗಿದೆ.
ಇದೀಗ, ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ ಶಶಾಂಕ್ ಕೋವಿಡ್ ಸಂಬಂಧ ಸರ್ಕಾರದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಕೊರೊನಾ ವಿಚಾರದಲ್ಲಿ ತಾವು ಎದುರಿಸಿದ ಆತಂಕ, ಆ ಹಿನ್ನೆಲೆ ತಾವು ಕೈಗೊಂಡ ಕೆಲವು ನಿರ್ಧಾರಗಳನ್ನು ಹೇಳುವ ಮೂಲಕ ಸರ್ಕಾರದ ವೈಫಲ್ಯವನ್ನು ಪ್ರಶ್ನಿಸಿದ್ದಾರೆ. ಈ ಕುರಿತು ಟ್ವಿಟ್ಟರ್ನಲ್ಲಿ ವಿವರವಾಗಿ ಚರ್ಚೆ ಮಾಡಿರುವ ಶಶಾಂಕ್ ಐದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಮುಂದೆ ಓದಿ...

ಒಬ್ಬ ಸಾಮಾನ್ಯ ಪ್ರಜೆಯ ಅಳಲು ಅಷ್ಟೇ
'ಕೋವಿಡ್ನಿಂದಾಗಿ, ನಡೆಯುವ ದುರಂತನ್ನು ನೋಡಿ, ಎದೆ ಭಾರವಾಗಿದೆ. ನನ್ನ ಆಪ್ತ ವಲಯದಲ್ಲೇ, ಐವರು ಅಸು ನೀಗಿದ್ದಾರೆ. ಮನನೊಂದು ಇದುವರೆಗೂ ಹಿಡಿದಿಟ್ಟಿದ್ದ ನನ್ನ ಒಂದು ಸ್ವಂತ ಅನುಭವ ಮತ್ತು ಅದರಿಂದ ಉದ್ಭವಿಸಿದ ಪ್ರಶ್ನೆಯನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಇದು, ಒಬ್ಬ ಸಾಮಾನ್ಯ ಪ್ರಜೆಯ ಅಳಲು ಅಷ್ಟೇ' ಎಂದು ಟ್ವಿಟ್ಟರ್ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ಉಪ್ಪಿ ಜೊತೆ ಸಿನಿಮಾ ಮಾಡಬೇಕಿತ್ತು
ನನ್ನ ನಿರ್ಮಾಣ ಮತ್ತು ನಿರ್ದೇಶನದ UPPI#54 ಸಿನಿಮಾಗೆ, ಒಂದು ವರ್ಷದಿಂದ ಜಾತಕಪಕ್ಷಿಯಂತೆ ಉಪ್ಪಿ ಸರ್ ಡೇಟ್ಗಾಗಿ ಕಾಯುತ್ತಿದ್ದ ನನಗೆ, ಗ್ರೀನ್ ಸಿಗ್ನಲ್ ಸಿಕ್ಕಿದ್ದು 2021ರ ಫೆಬ್ರವರಿಯಲ್ಲಿ. ಪ್ರೀ-ಪ್ರೊಡಕ್ಷನ್ ಕೆಲಸಗಳು ತ್ವರಿತಗತಿಯಲ್ಲಿ ಶುರುವಾದವು, ಏಪ್ರಿಲ್ 22 ರಿಂದ ಬೆಳಗಾವಿ ಸುತ್ತಮುತ್ತ ಶೂಟಿಂಗ್ ನಿಗದಿಯಾಯಿತು.

ಕೋವಿಡ್ ಎರಡನೇ ಅಲೆಯ ಭಯ
ಮಾರ್ಚ್ ಮೂರನೇ ವಾರದ ವೇಳೆಗೆ ಕೋವಿಡ್ 19 ಎರಡನೇ ಅಲೆಯ ಮುನ್ಸೂಚನೆ ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಶುರುವಾಯಿತು. ಗಾಬರಿಯಾದ ನಾನು, ಹಲವಾರು ತಜ್ಞರ ವರದಿಗಳನ್ನು ಪರಿಶೀಲಿಸಿದೆ, ಕೆಲವರೊಂದಿಗೆ ಚರ್ಚಿಸಿದೆ. ಏಪ್ರಿಲ್-ಮೇ ತಿಂಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಎಲೆಕ್ಷನ್ನಲ್ಲಿ ಬ್ಯುಸಿ ಇದ್ದ ನಮ್ಮ ಜನಪ್ರತಿನಿಧಿಗಳು ಯಾವುದೇ ಕಾರಣಕ್ಕೂ ಲಾಕ್ಡೌನ್ ಮಾಡುವುದಿಲ್ಲ ಎಂಬ ಘೋಷಣೆಗಳನ್ನು ದಿನವೂ ಮೊಳಗಿಸುತ್ತಿದ್ದರೂ, ಅವರ ಹಲವು ನಾಲಿಗೆ ಗುಣದ ಅರಿವಿದ್ದ ನಾನು, ತಜ್ಞರ ಸಲಹೆ ಆಧರಿಸಿ, ನನ್ನ ಚಿತ್ರವನ್ನು ಮುಂದೂಡುವ ನಿರ್ಧಾರಕ್ಕೆ ಬಂದೆ ಮತ್ತು ಅದನ್ನು ಉಪ್ಪಿ ಸರ್ಗೆ ಸಹ ತಿಳಿಸಿದೆ. ಅಂದು ದಿನಾಂಕ ಮಾರ್ಚ್ 23.

50 ಲಕ್ಷದ ನಷ್ಟದ ಭರಿಸಬೇಕಿತ್ತು!
ಏನೇ ಅಡೆ ತಡೆ ಬಂದರೂ, ಬದುಕು ಸಾಗಲೇಬೇಕಲ್ಲವೇ? ಅದಕ್ಕಾಗಿ ಎಲೆಕ್ಷನ್ ಮುಗಿದ ನಂತರ ನಿದ್ದೆಯಿಂದ ಎದ್ದು ಸರ್ಕಾರ ವಿಧಿಸಬಹುದಾದ ಮಾರ್ಗಸೂಚಿ ವ್ಯಾಪ್ತಿಯಲ್ಲೇ ಚಿತ್ರೀಸಬಹುದಾದ ಒಂದು ಹೊಸಬರ ಚಿತ್ರ ಮಾಡಲು ನಿರ್ಧರಿಸಿದೆ. ಅಂದು ನಾನು ಆ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳದೆ, ಹುಂಬತನದಿಂದ ಮುಂದುವರಿದಿದ್ದರೆ ತಜ್ಞರ ವರದಿಯಂತೆಯೇ ಅಪ್ಪಳಿಸಿದ ಕೋವಿಡ್ 19 ಎರಡನೇ ಅಲೆಗೆ, ನಮ್ಮ ಯೋಜನೆಗಳೆಲ್ಲ ಲೆಕೆಳಗಾಗಿ, ಕಡಿಮೆಯೆಂದರೂ 50 ಲಕ್ಷ ನಷ್ಟದ ಹೊರೆ ನನ್ನ ತಲೆಯ ಮೇಲೆ ಬೀಳುತ್ತಿತ್ತು ಮತ್ತು ನನ್ನ ತಂದದಲ್ಲಿ ಹಲವರಿಗೆ ಕೋವಿಡ್ 19 ವೈರಸ್ ತಗುಲುವ ಅಪಾಯವಿತ್ತು. ನನ್ನವರ ಹಿತಾಸಕ್ತಿ ಮತ್ತು ನಷ್ಟದ ಭಯ, ನನ್ನನ್ನು ಸರಿಯಾದ ಸಮಯದಲ್ಲಿ, ಸರಿಯಾದ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತು.
Recommended Video

ಸಾಮಾನ್ಯನಿಂದ ಆಗುತ್ತದೆ, ಸರ್ಕಾರದಿಂದ ಏಕೆ ಆಗಲ್ಲ?
* ನನ್ನಂತಹ ಒಬ್ಬ ಸಾಮಾನ್ಯ ವ್ಯಕ್ತಿ, ಕೇವಲ ಸಾಮಾನ್ಯ ಜ್ಞಾನದಿಂದ ಇಷ್ಟು ಮುಂಜಾಗ್ರತೆ ವಹಿಸಬಹುದಾದರೆ, ಒಂದು ವ್ಯವಸ್ಥೆ-ತಜ್ಞರ ತಂಡಗಳನ್ನು ಬೆನ್ನಿಗಿಟ್ಟುಕೊಂಡಿರುವ ಸರ್ಕಾರಗಳು ಎಷ್ಟಯ ಮುಂಜಾಗ್ರತೆ ವಹಿಸಬಹುದಲ್ಲವೇ?
* ಜನರ ತೆರಿಗೆ ಹಣದಲ್ಲಿ-ಜನರಿಗಾಗಿ ನಡೆಯುವ ಸರ್ಕಾರಗಳಿಗೆ ಇರಬೇಕಾದದ್ದು ಇದೇ ಭಯ-ಕಾಳಜಿಯಲ್ಲವೇ?
* ಎಲ್ಲಕಿಂತ ಮಾನವೀಯತೆ ಮುಖ್ಯ ಎಂದು ಸರ್ಕಾರುಗಳು ಕಾರ್ಯ ನಿರ್ವಹಿಸಿದ್ದರೆ, ಇಂದು ನೂರಾರು ಜೀವಗಳು ಉಳಿಯುತ್ತಿದ್ದವಲ್ಲವೇ?
* ಪರಿಸ್ಥಿತಿ ಕೈ ಮೀರಿ, ತಿಂಗಳುಗಟ್ಟಲೇ ಲಾಕ್ಡೌನ್ ಮಾಡುವ ಸ್ಥಿತಿ ಬರದೆ, ಎಷ್ಟೋ ಸಂಸಾರಗಳು ಬೀದಿ ಪಾಲಾಗುವುದು ತಪ್ಪುತಿತ್ತಲ್ಲವೇ?
* ಎಲ್ಲದಕ್ಕೂ ಜನರೇ ಹೊಣೆ ಎನ್ನುವುದಾದರೆ, ಸರ್ಕಾರಗಳು ಏಕೆ ಬೇಕಲ್ಲವೇ? ಎಂದು ನಿರ್ದೇಶಕ ಶಶಾಂಕ್ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಪ್ರಶ್ನಿಸಿದ್ದಾರೆ.


Click it and Unblock the Notifications











