ಡಿ ಬಾಸ್ ಗೆ ಅವರೇ ಸಾಟಿ: 'ಕುರುಕ್ಷೇತ್ರ' ವಿಮರ್ಶೆ ಮಾಡಿದ ನಿರ್ದೇಶಕ ಸುನಿ
'ಕುರುಕ್ಷೇತ್ರ' ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಸಿನಿಮಾ. ಕೋಟಿ ಕೋಟಿ ಬಾಚಿಕೊಳ್ಳುತ್ತಿರುವ ಕುರುಕ್ಷೇತ್ರ ಕಣ್ತುಂಬಿಕೊಂಡು ಕನ್ನಡಿಗರು ಸಂತಸ ಪಡುತ್ತಿದ್ದಾರೆ.
ಮಹಾಭಾರತ ಕಥೆ, ಬಹುತಾರಾಗಣ, 3 ಡಿ ಎಫಕ್ಟ್, ಗ್ರಾಫಿಕ್ಸ್ ಹೀಗೆ ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಅದ್ದೂರಿ ಕುರುಕ್ಷೇತ್ರ ಚಿತ್ರವನ್ನು ಕನ್ನಡ ಚಿತ್ರಪ್ರಿಯರು ನೋಡಿ ಆನಂದಿಸುತ್ತಿದ್ದಾರೆ. ಸದ್ಯ ಕನ್ನಡಜ ಮತ್ತು ತೆಲುಗು ನಲ್ಲಿ ಸಿನಿಮಾ ರಿಲೀಸ್ ಆಗಿದೆ. ಆದ್ರೀಗ ತಮಿಳು ಮತ್ತು ಮಲಯಾಳಂನಲ್ಲಿ ಚಿತ್ರ ರಿಲೀಸ್ ಗೆ ಸಜ್ಜಾಗಿದೆ.
ಸಿನಿಮಾ ನೋಡಿದ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗೆ ಚಿತ್ರರಂಗದ ಗಣ್ಯರು ಸಹ ಕುರುಕ್ಷೇತ್ರ ನೋಡಿ ಹಾಡಿ ಹೊಗಳುತ್ತಿದ್ದಾರೆ. ಇತ್ತೀಚಿಗೆ ಸಿನಿಮಾ ನೋಡಿದ ನಿರ್ದೇಶಕ ಸಿಂಪಲ್ ಸುನಿ ಕುರುಕ್ಷೇತ್ರ ಚಿತ್ರದ ಬಗ್ಗೆ ವಿಮರ್ಶೆ ಮಾಡಿದ್ದಾರೆ.

ಡಿ ಬಾಸ್ ಅವರಿಗೆ ಅವರೇ ಸಾಟಿ
"ಚಿಕ್ಕ ಹುಡುಗನಿಂದ ನಾಟಕ ಕಥನಗಳು ನೋಡಿ ಓದಿ ಕೇಳಿದ್ದರೂ, ಮುನಿರತ್ನ ಕುರುಕ್ಷೇತ್ರದ ಚಿತ್ರಕಥೆ ಹಾಗೂ ಸಂಭಾಷಣೆ ಬರೆದ ಬರಹಗಾರರು ದುರ್ಯೋಧನನ ದೃಷ್ಠಿಕೋನದಲ್ಲಿ ತೋರಿರುವುದು ಪ್ರಶಂಸನೀಯ. ಸುಯೋಧನನಾಗಿ ಗದಾಯುದ್ಧ, ಪಾಂಚಾಲಿಯಿಂದ ಅವಮಾನವಾಗಿ ಕೊರಗುವ ದೃಶ್ಯ ಕರ್ಣ, ಸ್ನೇಹ ಹಾಗೂ ಕೃಷ್ಣ, ಶಕುನಿ ಜೊತೆ ದೃಶ್ಯಗಳಲ್ಲಿ D boss ಅವರಿಗೆ ಅವರೇ ಸಾಟಿ" ಎಂದು ಮೊದಲ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ನಿಖಿಲ್ ವರಸೆ ಇಷ್ಟವಾಗುತ್ತದೆ
"ಅಭಿಮನ್ಯು ಯುದ್ಧದಲ್ಲಿ ನಿಖಿಲ್ ವರಸೆ ಇಷ್ಟವಾಗುತ್ತದೆ. ಕೃಷ್ಣ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಶಕುನಿ ರವಿಶಂಕರ್ ಅಮೋಘ, ಕರ್ಣ ಆಯಾಮಗಳು ಮತ್ತು ಅರ್ಜುನ್ ಸರ್ಜಾ ಚಿತ್ರದ ಹೈಲೈಟ್, ಮಿಕ್ಕೆಲ್ಲಾ ಪೋಷಕ ಪಾತ್ರಗಳು ನ್ಯಾಯಯುತವಾಗಿದೆ" ಎಂದು ಹೇಳುತ್ತ ನಿಖಿಲ್ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ.

ಇಷ್ಟವಾಗದ ಅಂಶವಿದ್ದರೂ ಮನ್ನಿಸಬಹುದು
ಧರ್ಮರಾಯನಲ್ಲಿ ಮೋಸ ತೋರಿದ್ದು ಗಧಾಯುದ್ಧದಲ್ಲಿ ಭೀಮ ತುಂಬಾ ಒದೆ ತಿಂದಿದ್ದು, ವಿ.ಎಫ್.ಎಕ್ಸ್ ಈ ರೀತಿ ಕೆಲವು ಇಷ್ಟವಾಗದ ಅಂಶವಿದ್ದರೂ ಮನ್ನಿಸಬಹುದು. ಈ ರೀತಿ ಚಿತ್ರಗಳಿಗೆ ತಂಡದ ಕಲ್ಪನೆ ಹಾಗೂ ಪರಿಶ್ರಮ ಅನನ್ಯ. ಇಡೀ ತಂಡಕ್ಕೆ ಹಾಗೂ ಬೆನ್ನೆಲುಬು ಮುನಿರತ್ನರಿಗೆ ಧನ್ಯವಾದಗಳು. ಆ ಶ್ರಮಕ್ಕಾದರೂ ಒಮ್ಮೆ ನೋಡಬೇಕಾದ ಚಿತ್ರ.

ತಮಿಳು, ಮಲಯಾಳಂನಲ್ಲಿ ರಿಲೀಸ್ ಆಗುತ್ತಿದೆ
ಸದ್ಯ ಕನ್ನಡ ಮತ್ತು ತೆಲುಗು ಚಿತ್ರಪ್ರಿಯರ ಮನತಣಿಸಿರುವ 'ಕುರುಕ್ಷೇತ್ರ' ಈಗ ತಮಿಳು ಮತ್ತು ಮಲಯಾಳಂನಲ್ಲಿ ರಿಲೀಸ್ ಗೆ ಸಜ್ಜಾಗುತ್ತಿದೆ. ಈಗಾಗಲೆ ತಮಿಳಿನಲ್ಲಿ ಚಿತ್ರದ ಟ್ರೈಲರ್ ಮತ್ತು ಆಡಿಯೋವನ್ನು ರಿಲೀಸ್ ಮಾಡಲಾಗಿದೆ. ಅಂದ್ಹಾಗೆ ಕುರುಕ್ಷೇತ್ರ ತಮಿಳು ಮತ್ತು ಮಲಯಾಳಂ ವರ್ಷನ್ ಇದೆ ತಿಂಗಲು ಆಗಸ್ಟ್ 15ಕ್ಕೆ ತೆರೆಗೆ ಬರುತ್ತಿದೆ.


Click it and Unblock the Notifications











