ಭೂಕಂಪನ ಅನುಭವ ಹಂಚಿಕೊಂಡ ನಿರ್ದೇಶಕ ಸುನಿ
ಕೊಡುಗು ಜಿಲ್ಲೆಯಲ್ಲಿ ಮಳೆ, ಕೇರಳ ರಾಜ್ಯದಲ್ಲಿ ಮಳೆ, ಮಳೆಗೆ ಮನೆ ಬಿತ್ತು, ಗುಡ್ಡ ಜಾರಿತು, ಪ್ರವಾಹ ಉಂಟಾಯಿತು ಎಂಬ ಆತಂಕಕಾರಿ ವಿಷ್ಯಗಳನ್ನೇ ಕೇಳುತ್ತಿರುವ ಈ ಸಂದರ್ಭದಲ್ಲಿ ಭೂಕಂಪನ ಆಗಿದೆ ಎನ್ನುವುದು ಮತ್ತಷ್ಟು ಭಯ ಉಂಟು ಮಾಡಿದೆ.
ಹೌದು, ಬೆಂಗಳೂರಿನಲ್ಲಿ ಭೂಕಂಪನ ಆದ ಅನುಭವವನ್ನ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದ್ರೆ, ಇದನ್ನ ವಿಜ್ಞಾನಿಗಳು ಅಲ್ಲೆಗಳೆದಿದ್ದು, ಬೆಂಗಳೂರಿನಲ್ಲಿ ಭೂಕಂಪನ ಆಗಿರುವುದು ಸುಳ್ಳು ಎಂದಿದ್ದಾರೆ.
ಇದೇ ವಿಚಾರವಾಗಿ ಕನ್ನಡದ ನಿರ್ದೇಶಕ ಸಿಂಪಲ್ ಸುನಿ ಅವರು ಟ್ವೀಟ್ ಮಾಡಿದ್ದು, 'ಭೂಕಂಪನ ಆಗಿದ್ದು ನಿಜಾ, ನನಗೆ ಅನುಭವ ಆಗಿದೆ' ಎಂದು ಹೇಳಿಕೊಂಡಿದ್ದಾರೆ.
''ನಾಗದೇವನಹಳ್ಳಿ ಪಿನಾಕ ಸ್ಟುಡಿಯೋದಲ್ಲಿ 'ಬಜಾರ್' ಚಿತ್ರದ ಸಂಕಲನ ಮಾಡುವಾಗ ಭೂಕಂಪನದ ಅನುಭವವಾಯಿತು...ಮತ್ತ್ಯಾರಿಗಾದರು ಆಯಿತೆ ??... ಒಂದ್ ತರ ಭಯ... ಒಂದ್ ತರ ಖುಷಿ'' ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಯಿಸಿರುವ ಮತ್ತೆ ಕೆಲವರು ನಮಗೂ ಆ ಅನುಭವ ಆಗಿದೆ, ಆದ್ರೆ, ಯಾರೂ ನಂಬ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಆದ್ರೆ, ಭೂಗರ್ಭ ವಿಜ್ಞಾನಿಯೊಬ್ಬರು ಬೆಂಗಳೂರಿನಲ್ಲಿ ಯಾವುದೇ ಭೂಕಂಪನ ಆಗಿಲ್ಲ. ಗಾಳಿಯ ಸ್ಥಾನಪಲ್ಲಟದಿಂದ ಕೇಳಿ ಬಂದಿರುವ ಶಬ್ದ ಇದಾಗಿರಬಹುದು. ನಮಗೆ ಯಾರಿಗೂ ಭೂಮಿ ಕಂಪಿಸಿದ ಅನುಭವ ಆಗಿಲ್ಲ. ಭೂಗರ್ಭದ ಒಳಗೆ ಆಗಿರುವ ಕಂಪನ ಇದಲ್ಲ. ಮೋಡಗಳ ಏರುಪೇರಿನಿಂದ ಗಾಳಿ ಸ್ಥಾನಪಲ್ಲಟದ ಸದ್ದು ಇದು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಒಟ್ನಲ್ಲಿ, ಮಳೆ, ಅನಾಹುತ ಸುದ್ದಿಗಳ ಮಧ್ಯೆ ಭೂಕಂಪನದ ಸುದ್ದಿ ಬೆಂಗಳೂರಿಗರನ್ನ ಕೆಲವು ಕ್ಷಣ ಆತಂಕಕ್ಕೆ ಒಳಗಾಗಿಸಿದ್ದು ಮಾತ್ರ ಸುಳ್ಳಲ್ಲ. ಇನ್ನುಳಿದಂತೆ ಬಜಾರ್ ಸಿನಿಮಾ, ಸುನಿ ನಿರ್ದೇಶನ ಹಾಗೂ ಧನ್ವಿರ್ ನಟಿಸುತ್ತಿರುವ ಚಿತ್ರ.


Click it and Unblock the Notifications











