'ನಿನ್ನ ಸನಿಹಕೆ' ನಿರ್ದೇಶನದಿಂದ ಕೆಳಗಿಳಿದ ಬಗ್ಗೆ ಸುಮನ್ ಜಾದೂಗರ್ ಹೇಳಿದ್ದೇನು?
ನಟ ಸೂರಜ್ ಗೌಡ ಮತ್ತು ಧನ್ಯಾ ರಾಮ್ ಕುಮಾರ್ ಅಭಿನಯದ ನಿನ್ನ ಸನಿಹಕೆ ಸಿನಿಮಾದ ಚಿತ್ರೀಕರಣ ಮುಗಿದು, ಸದ್ಯ ಪೋಸ್ಟ್ ಪ್ರೊಡಕ್ಷನ್ ನಲ್ಲಿದೆ. ಈ ಸಮಯದಲ್ಲಿ ಚಿತ್ರ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಚಿತ್ರತಂಡದ ಜೊತೆ ವೈಮನಸ್ಸಿನಿಂದ ನಿರ್ದೇಶಕರು ಸಿನಿಮಾದಿಂದ ಹೊರಹೋಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
Recommended Video
ನಿನ್ನ ಸನಿಹಕೆ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಸುಮನ್ ಜಾದೂಗರ್ ವಹಿಸಿಕೊಂಡಿದ್ದರು. ಪ್ರಾರಂಭದಲ್ಲಿ ನಿರ್ದೇಶಕರಾಗಿ ಎಂಟ್ರಿ ಕೊಟ್ಟ ಸುಮನ್ ಸಿನಿಮಾ ಮುಗಿಯುವಷ್ಟೊತ್ತಿಗೆ ನಾಯಕ ಸೂರಜ್ ನಿರ್ದೇಶಕರಾಗಿದ್ದಾರೆ. ಸುಮನ್ ನಿರ್ದೇಶನದಿಂದ ಕೆಳಗಿಳಿದ ಬಳಿಕ ನಾಯಕ ಸೂರಜ್ ಅವರೇ ಸಿನಿಮಾ ಮುಂದುವರೆಸಿಕೊಂಡು ಹೋಗಿದ್ದಾರೆ. ಆದರೆ ಸಿನಿಮಾತಂಡದ ಜೊತೆಗಿನ ವಿವಾದಿಂದ ನಿರ್ದೇಶಕರು ಸಿನಿಮಾದಿಂದ ದೂರ ಆಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ನಿರ್ದೇಶಕ ಸುಮನ್ ಜಾದೂಗರ್ ಸ್ಪಷ್ಟನೆ ನೀಡಿದ್ದಾರೆ. ನಿರ್ದೇಶನದಿಂದ ಕೆಳಗಿಳಿಯಲು ಅಸಲಿ ಕಾರಣವೇನು ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ.

ಧನ್ಯಾ ಅಭಿನಯದ ಮೊದಲ ಸಿನಿಮಾ
'ನಿನ್ನ ಸನಿಹಕೆ' ಸ್ಯಾಂಡಲ್ ವುಡ್ ನಲ್ಲಿ ನಿರೀಕ್ಷೆ ಮೂಡಿಸಿದ ಸಿನಿಮಾಗಳಲ್ಲಿ ಒಂದು. ವಿಶೇಷ ಅಂದರೆ ಡಾ. ರಾಜ್ ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಅಭಿನಯದ ಮೊದಲ ಸಿನಿಮಾವಿದು. ರಾಜ್ ಕುಟುಂಬದಿಂದ ಮೊದಲ ಬಾರಿಗೆ ಹೆಣ್ಣು ಮಗಳೊಬ್ಬಳು ನಾಯಕಿಯಾಗಿ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಹಾಗಾಗಿ ಸಹಜವಾಗಿಯೇ ರಾಜ್ ಅಭಿಮಾನಿಗಳಿಗೆ ಇದು ವಿಶೇಷ ಸಿನಿಮಾವಾಗಿದೆ.

ಕಥೆ ಬರೆದು ನಿರ್ದೇಶನನೂ ಮಾಡಿರುವ ನಟ ಸೂರಜ್
ನಿರ್ದೇಶಕ ಸುಮನ್ ಅರ್ಧಕ್ಕೆ ನಿಲ್ಲಿಸಿದ ಸಿನಿಮಾವನ್ನು ನಾಯಕ ಸೂರಜ್ ಅವರೇ ಪೂರ್ಣ ಮಾಡಿದ್ದಾರೆ. ಸೂರಜ್ ಅವರೆ ಚಿತ್ರಕ್ಕೆ ಕಥೆ ಬರೆದಿರುವುದರಿಂದ ಸುಮನ್ ಬಿಟ್ಟ ಕೆಲಸವನ್ನು ನಾಯಕನೇ ವಹಿಸಿಕೊಂಡು ಮಾಡಿ ಮುಗಿಸಿದ್ದಾರೆ. ಲಾಕ್ ಡೌನ್ ಆಗುವ ಒಂದು ವಾರ ಮೊದಲು ಸಿನಿಮಾದ ಚಿತ್ರೀಕರಣ ಪೂರ್ತಿ ಮಾಡಿ ಮುಗಿಸಿದ್ದಾರೆ. ಈಗ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಸಿನಿಮಾತಂಡ ಬ್ಯುಸಿಯಾಗಿದೆ.

ಸಿನಿಮಾದಿಂದ ಸುಮನ್ ಜಾದೂಗರ್ ಹೊರಬಂದಿದ್ದೇಕೆ?
ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ ಸುಮಾನ್ ನಿನ್ನ ಸನಿಹಕೆ ಸಿನಿಮಾದ ಬಗ್ಗೆ ಬಹಿರಂಗ ಪಡಿಸಿದ್ದಾರೆ. 'ನಿನ್ನ ಸನಿಹಕೆ' ಸಿನಿಮಾ ನಿರ್ದೇಶನದಿಂದ ಹೊರಬಂದಿದ್ದೇನೆ. ಈಗ ಸಿನಿಮಾದ ನಟ ಸೂರಜ್ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈಗಾಗಲೆ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಆಕ್ಸಿಡೆಂಟ್ ಆಗಿ ತುಂಬಾ ಸಮಸ್ಯೆ ಅನುಭವಿಸಿದೆ, ಆ ನಂತರ ಸೂರಜ್ ಅವರೆ ಸಿನಿಮಾವನ್ನು ಮುಂದುವರೆಸಿಕೊಂಡು ಹೋಗಿದ್ದಾರೆ. ನಿರ್ದೇಶನ ವಿಭಾಗದಲ್ಲಿ ಇಲ್ಲ, ಆದರೆ ಸಿನಿಮಾ ಜೊತೆ ಇದ್ದೀನಿ. ಅನೇಕರು ವಿವಾದ ಮಾಡಿಕೊಂಡು ದೂರ ಹೋಗಿದ್ದಾರೆ ಅಂತ ಅಂದುಕೊಂಡಿದ್ದಾರೆ. ಆದರೆ ಅದೆಲ್ಲ ಸುಳ್ಳು" ಎಂದಿದ್ದಾರೆ.

ಸಿನಿಮಾ ಅದ್ಭುತವಾಗಿ ಮಾಡಿದ್ದಾರೆ ಸೂರಜ್
"ನಟ ಸೂರಜ್ ಅವರೆ ಕಥೆ ಬರೆದಿದ್ದರಿಂದ ಅವರೆ ನಿರ್ದೇಶನ ಮಾಡಿದರೆ ಉತ್ತಮ ಎಂದು ಎನಿಸಿ ಅವರೆ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸೂರಜ್ ತುಂಬಾ ಅದ್ಭುತವಾಗಿ ಮಾಡಿದ್ದಾರೆ. ನಾನು ಈ ಸಿನಿಮಾದಲ್ಲಿ ನಿರ್ದೇಶನ ಮಾಡುತ್ತಿಲ್ಲ. ಆದರೆ ಸಿನಿಮಾತಂಡದ ಜೊತೆ ಇದ್ದೀನಿ" ಎಂದು ಹೇಳಿದ್ದಾರೆ.

'ಈ ವರ್ಷ ನಿರ್ದೇಶನ ಮಾಡಲ್ಲ...'
"ಈ ವರ್ಷ ಯಾವುದೆ ಸಿನಿಮಾ ನಿರ್ದೇಶನ ಮಾಡುವುದಿಲ್ಲ. ಎರಡು ಸಿನಿಮಾದ ಕಥೆ ಸಿದ್ಧತೆ ನಡೆಯುತ್ತಿದೆ. ಮುಂದಿನ ವರ್ಷ ಚಿತ್ರೀಕರಣ ಪ್ರಾರಂಭಿಸಬೇಕು. ಬೆಂಗಳೂರು ಮೂಲಕ ಕಥೆ ಆದರಿಂದ ಬೆಂಗಳೂರಿನಲ್ಲಿಯೆ ಚಿತ್ರೀಕರಣವಾಗಬೇಕು. ಈ ವರ್ಷ ಚಿತ್ರೀಕರಣ ಮಾಡಲು ಸಾಧ್ಯವಾಗುವುದು ಅನುಮಾನ, ಹಾಗಾಗಿ ಮುಂದಿನ ವರ್ಷ ಸಿನಿಮಾ ನಿರ್ದೇಶನ ಮಾಡುತ್ತೇನೆ. ಒಂದು ಸಿನಿಮಾ ಒಟಿಟಿಗಾಗಿಯೇ ಮಾಡುತ್ತಿದ್ದೇವೆ" ಎಂದು ನಿರ್ದೇಶಕ ಸುಮನ್ ಮುಂದಿನ ಸಿನಿಮಾ ಯೋಜನೆಗಳ ಬಗ್ಗೆ ಹೇಳಿದ್ದಾರೆ.


Click it and Unblock the Notifications











