ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬುಗೆ ಡಾ ವಿಷ್ಣುವರ್ಧನ್ ಪ್ರಶಸ್ತಿ
ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಡಾ ವಿಷ್ಣು ಸೇನಾ ಸಮಿತಿ ಸಹಯೋಗದಲ್ಲಿ ಪ್ರತಿ ವರ್ಷ ನೀಡಲಾಗುವ ಅಭಿನವ ಭಾರ್ಗವ ಡಾ.ವಿಷ್ಣುವರ್ಧನ ಪ್ರಶಸ್ತಿಗೆ 2019ನೇ ಸಾಲಿನಲ್ಲಿ ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರು ಆಯ್ಕೆಯಾಗಿದ್ದಾರೆ.
ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯ ಸಭಾಂಗಣದಲ್ಲಿ ಅಕ್ಟೋಬರ್ 11 ರಂದು ಸಂಜೆ 4.30 ಗಂಟೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಅಭಿನವ ಭಾರ್ಗವ ಡಾ.ವಿಷ್ಣುವರ್ಧನ ಪ್ರಶಸ್ತಿಯನ್ನ ಈ ಹಿಂದೆ 2014 ರಲ್ಲಿ ಎಸ್ಪಿ ಬಾಲಸುಬ್ರಹ್ಮಣ್ಯಂ, 2015 ರಲ್ಲಿ ಡಾ.ಲೀಲಾವತಿ, 2016 ರಲ್ಲಿ ಡಾ.ಅಂಬರೀಶ್, 2017 ರಲ್ಲಿ ಗಿರೀಶ್ ಕಾಸರವಳ್ಳಿ ಮತ್ತು 2018 ರಲ್ಲಿ ರಮೇಶ್ ಭಟ್ ಅವರು ಪಡೆದುಕೊಂಡಿದ್ದಾರೆ.
ರಾಜೇಂದ್ರ ಸಿಂಗ್ ಬಾಬು ಕುರಿತು
ನಿರ್ದೇಶಕ, ನಿರ್ಮಾಪಕ, ಬರಹಗಾರರಾಗಿ ಯಶಸ್ಸು ಕಂಡಿರುವ ರಾಜೇಂದ್ರ ಸಿಂಗ್ ಬಾಬು 1975ರಲ್ಲಿ ವಿಷ್ಣುವರ್ಧನ್ ನಟನೆಯ 'ನಾಗಕನ್ಯೆ' ಚಿತ್ರವನ್ನ ನಿರ್ದೇಶಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದರು. ಅಂತ, ಸಿಂಹದ ಮರಿ ಸೈನ್ಯ, ಕಿಲಾಡಿ ಜೋಡಿ, ಬಂಧನ, ಯುಗಪುರುಷ, ಬಣ್ಣದ ಗೆಜ್ಜೆ, ಕುರಿಗಳು ಸಾರ್ ಕುರಿಗಳು, ಕೋತಿಗಳು ಸಾರ್ ಕೋತಿಗಳು, ಕಾಂಚನ ಗಂಗಾ, ಮೋಹಿನಿ, ಬುದ್ದಿವಂತ ಸೇರಿದಂತೆ ಹಲವು ಸಿನಿಮಾ ನಿರ್ದೇಶಿಸಿ, ನಿರ್ಮಾಣ ಕೂಡ ಮಾಡಿದ್ದಾರೆ.

ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರಿಗೆ ಆತ್ಮೀಯ ಸ್ನೇಹಿತರಾಗಿದ್ದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ವಿಷ್ಣು ಜೊತೆ ನಾಗಕನ್ಯೆ, ಬಂಧನ, ಮುತ್ತಿನಹಾರ, ನಾಗರಹೊಳೆ, ಹಿಮಪಾತ, ಕಿಲಾಡಿಜೋಡಿ, ಮಹಾಕ್ಷತ್ರಿಯ, ಕರ್ಣ, ಕೃಷ್ಣ ನೀ ಬೇಗನೇ ಬಾರೋ, ಅಂತಹ ಬ್ಲ್ಯಾಕ್ ಬಸ್ಟರ್ ಸಿನಿಮಾ ಮಾಡಿದ್ದಾರೆ.
ಕರ್ನಾಟಕ ಚಲನಚಿತ್ರ ನಿರ್ದೇಶಕ ಸಂಘದಲ್ಲಿ 6 ಬಾರಿ ಅಧ್ಯಕ್ಷರಾಗಿದ್ದ ರಾಜೇಂದ್ರ ಸಿಂಗ್ ಬಾಬು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ಕನ್ನಡ ಚಿತ್ರರಂಗಕ್ಕೆ ಇವರು ಸಲ್ಲಿಸಿರುವ ಕೊಡುಗೆಯನ್ನ ಗೌರವಿಸಿ, ವಿಷ್ಣು ಸೇನಾ ಸಮಿತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಈ ಬಾರಿ ವಿಷ್ಣುವರ್ಧನ್ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿದೆ.


Click it and Unblock the Notifications











