ಹಿರಿಯ ನಟ ಶಿವರಾಮ್ ವಿರುದ್ಧ ಪೊಲೀಸ್ ಕಂಪ್ಲೇಂಟ್
ಹಿರಿಯ ನಟ ಶಿವರಾಮ್ ಇದೀಗ ಸುದ್ದಿಯಲ್ಲಿದ್ದಾರೆ. ವರ್ಷಗಳ ಹಿಂದೆ ಸಬ್ಸಿಡಿ ಹಗರಣದಲ್ಲಿ ಲಂಚ ಪಡೆದ ಆರೋಪ ಎದುರಿಸಿದ್ದ ಹಿರಿಯ ನಟ ಶಿವರಾಮ್ ಇದೀಗ ನಿರ್ದೇಶಕರ ಸಂಘದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ನಡಾವಳಿ ಪುಸ್ತಕವನ್ನ ಅನಧಿಕೃತವಾಗಿ 20 ದಿನಗಳ ಹಿಂದೆ ತಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದಾರೆ ಅಂತ ಆರೋಪಿಸಿ ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ನಿರ್ದೇಶಕರ ಸಂಘದ ಕಾರ್ಯದರ್ಶಿ ಟೇ.ಶಿ.ವೆಂಕಟೇಶ್ ದೂರು ನೀಡಿದ್ದಾರೆ. [ಸಬ್ಸಿಡಿ ವಿವಾದ: ಶಿವರಾಂ, ಸುರೇಶ್ ವಿರುದ್ಧ ಎಫ್ ಐಆರ್]

ಹಿರಿಯ ಕಲಾವಿದ ಶಿವರಾಮ್ ಒಂದು ಚಿತ್ರವನ್ನ ನಿರ್ದೇಶಿಸಿರುವ ಕಾರಣ ಅವರು ನಿರ್ದೇಶಕರ ಸಂಘದ ಸದಸ್ಯರು ಕೂಡ. ಇದನ್ನ ದುರುಪಯೋಗ ಪಡಿಸಿಕೊಂಡಿರುವ ಹಿರಿಯ ನಟ ಶಿವರಾಮ್, ಸಂಘದ ನಡಾವಳಿ ಪುಸ್ತಕವನ್ನ ಮನೆಗೆ ತೆಗೆದುಕೊಂಡು ಹೋಗಿದ್ದಾರೆ ಅಂತ ಆರೋಪಿಸುತ್ತಾರೆ ಟೇ.ಶಿ.ವೆಂಕಟೇಶ್.
ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ಎಂ.ಎಸ್.ರಮೇಶ್ ಅವರ ಅಧಿಕಾರಾವಧಿ ಮುಗಿದ ಬಳಿಕ ಆ ಜಾಗಕ್ಕೆ ಚುನಾಯಿತರಾದವರು ಹಿರಿಯ ನಿರ್ದೇಶಕ ಪಿ.ಎಚ್.ವಿಶ್ವನಾಥ್. ಆದ್ರೆ, ನಿರ್ದೇಶಕರ ಸಮಸ್ಯೆಗಳಿಗೆ ಪಿ.ಎಚ್.ವಿಶ್ವನಾಥ್ ಸ್ಪಂದಿಸಲಿಲ್ಲ ಅನ್ನುವ ಕಾರಣಕ್ಕೆ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು.

ಮರು ಚುನಾವಣೆ ನಡೆಸುವ ಬಗ್ಗೆ ಕಾರ್ಯ ಚಟುವಟಿಕೆಗಳು ನಡೆಯಂತೆ ನಿರ್ದೇಶಕರ ಸಂಘದ ಕಾರ್ಯದರ್ಶಿ ಟೇ.ಶಿ.ವೆಂಕಟೇಶ್ ಕೋರ್ಟ್ ನಿಂದ ಸ್ಟೇ ಆರ್ಡರ್ ತಂದಿದ್ದಾರೆ. ಕೋರ್ಟ್ ತಡೆಯಾಜ್ಞೆ ನೀಡಿದ್ದರೂ, ಕಾನೂನು ಬಾಹಿರವಾಗಿ ಚುನಾವಣೆಯ ಪ್ರಕ್ರಿಯೆ ನಡೆಯುತ್ತಿದೆ. ಅದರ ಉಸ್ತುವಾರಿಯನ್ನ ಶಿವರಾಮ್ ಅವರೇ ವಹಿಸಿದ್ದಾರಂತೆ.
ಕೋರ್ಟ್ ಅಂಗಳದಲ್ಲಿ ನಿರ್ದೇಶಕರ ಸಂಘದ ಗದ್ದಲ ಇದ್ದರೂ, ಸಂಘದ ಕಡತಗಳನ್ನ ಮನೆಗೆ ತೆಗೆದುಕೊಂಡು ಹೋಗಿರುವುದು ಅಪರಾಧ ಅನ್ನೋದು ಈಗ ಕೇಳಿ ಬರುತ್ತಿರುವ ದೂರು. ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Click it and Unblock the Notifications











