ಚಿರು, ರಜನಿ, ಬಿಗ್ಬಿ ಜೊತೆ ಸಿನಿಮಾ ಚಾನ್ಸ್ ಬಗ್ಗೆ ಉಪೇಂದ್ರ ಮಾತು
ರಿಯಲ್ ಸ್ಟಾರ್ ಉಪೇಂದ್ರ 'ಯುಐ' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಉಪೇಂದ್ರ ನಿರ್ದೇಶಿಸಿ, ನಟಿಸಿದ್ದ 'ಎ' ಸಿನಿಮಾ ಹೊಸ ರೂಪದಲ್ಲಿ ಬಿಡುಗಡೆ ಆಗಿ ಸದ್ದು ಮಾಡಿತ್ತು. ಅಭಿಮಾನಿಗಳು ಮತ್ತೊಮ್ಮೆ ಮುಗಿಬಿದ್ದು ಸಿನಿಮಾ ನೋಡಿದ್ದರು. ಇದೀಗ 'ಎ' ಸಿನಿಮಾ ತೆಲುಗಿನಲ್ಲಿ ಮತ್ತೆ ರಿಲೀಸ್ಗೆ ರೆಡಿಯಾಗಿದೆ.
ಇದೇ ಶುಕ್ರವಾರ 'ಎ' ಸಿನಿಮಾ ತೆಲುಗು ಪ್ರೇಕ್ಷಕರ ಮುಂದೆ ಹೋಗುತ್ತಿದೆ. 90ರ ದಶಕದಲ್ಲೇ ತಮ್ಮ ವಿಭಿನ್ನ ಆಲೋಚನೆಗಳು, ಸಿನಿಮಾ ಸ್ಟೈಲ್ನಿಂದ ಉಪೇಂದ್ರ ಭಾರೀ ಸದ್ದು ಮಾಡಿದ್ದರು. ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲಿ ಉಪ್ಪಿ ಕ್ರೇಜ್ ಶುರುವಾಗಿತ್ತು. ತೆಲುಗಿಗೆ 'ಓಂ' ಸಿನಿಮಾ ರೀಮೆಕ್ ಮಾಡಿದ್ದರು. ಬಳಿಕ ಚಿರಂಜೀವಿ ಜೊತೆ ಸಿನಿಮಾ ಮಾತುಕತೆ ನಡೆದಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಮತ್ತೊಮ್ಮೆ ರಿಯಲ್ ಸ್ಟಾರ್ ಮಾತನಾಡಿದ್ದಾರೆ.

'ಎ' ಸಿನಿಮಾ ರೀ ರಿಲೀಸ್ ಹಿನ್ನೆಲೆ ತೆಲುಗು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಸಾಕಷ್ಟು ಸಂಗತಿ ಬಿಚ್ಚಿಟ್ಟಿದ್ದಾರೆ. 'ಎ' ಹಾಗೂ 'ಉಪೇಂದ್ರ' ಚಿತ್ರದ ಯಶಸ್ಸಿನ ನಂತರ ತೆಲುಗಿನಲ್ಲಿ ಚಿರಂಜೀವಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಅವಕಾಶ ನನಗೆ ಸಿಕ್ಕಿತ್ತು ಎಂದು ಉಪೇಂದ್ರ ಹೇಳಿದರು. ವೈಜಯಂತಿ ಮೂವೀಸ್ ಬ್ಯಾನರ್ನಲ್ಲಿ ಅಶ್ವಿನಿ ದತ್ ನಿರ್ಮಾಣದಲ್ಲಿ ಮೆಗಾಸ್ಟಾರ್ ಸಿನಿಮಾ ಮಾಡಬೇಕಿತ್ತು."
"ಹೊಸ ನಿರ್ದೇಶಕನಾಗಿದ್ದ ಕಾರಣ ಆ ಸಮಯದಲ್ಲಿ ಮೆಗಾಸ್ಟಾರ್ ಇಮೇಜ್ ಅನ್ನು ನಿರ್ಣಯಿಸಲು ಸಾಧ್ಯವಾಗಲಿಲ್ಲ. ಮೆಗಾಸ್ಟಾರ್ನ ಹ್ಯಾಂಡಲ್ ಮಾಡಲು ಅದಕ್ಕೆ ತಕ್ಕ ಸಬ್ಜೆಕ್ಟ್ ಬೇಕು. ನನ್ನಲ್ಲಿರುವ ಹೊಸ ಐಡಿಯಾಗಳನ್ನು ನಿರ್ಮಾಪಕರ ಜೊತೆಗೆ ಚಿರಂಜೀವಿ ಅವರಿಗೆ ಹೇಳಿದ್ದೆ. ಅವರು ಇಷ್ಟಪಟ್ಟರು. ಆದರೆ ನನ್ನ ಕಥೆಗಳು ಚಿರಂಜೀವಿ ಇಮೇಜ್ಗೆ ಹೊಂದಿಕೆಯಾಗದ ಕಾರಣ ಚಿತ್ರ ಕಾರ್ಯರೂಪಕ್ಕೆ ಬರಲಿಲ್ಲ. ಹಾಗಾಗಿ ಚಿರಂಜೀವಿ ಸಿನಿಮಾ ನಿರ್ದೇಶನದ ಆಫರ್ ಮಿಸ್ ಮಾಡಿಕೊಂಡೆ ಎಂದು ಉಪ್ಪಿ ಹೇಳಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಸರ್ ಕೂಡ ಒಂದು ಸಿನಿಮಾ ಮಾಡಿಕೊಡುವಂತೆ ಕೇಳಿದ್ದರು. 20 ವರ್ಷಗಳ ಹಿಂದೆ ಅಮಿತಾಬ್ ಬಚ್ಚನ್ ಅವರ ಪ್ರೊಡಕ್ಷನ್ ಹೌಸ್ನಿಂದ ನಿರ್ದೇಶಕನಾಗಿ ಸಿನಿಮಾ ಮಾಡುವ ಆಫರ್ ಕೂಡ ಬಂದಿತ್ತು. ಆದರೆ ಯಾವುದೂ ವರ್ಕ್ ಔಟ್ ಆಗಲಿಲ್ಲ ಎಂದು ಉಪೇಂದ್ರ ನೆನಪಿಸಿಕೊಂಡಿದ್ದಾರೆ.

"ಕನ್ಯಾದಾನಂ', 'ರಾ', 'ಒಕೇ ಮಾಟ', 'ನೀತೊನೆ ಉಂಟಾನು' ಸೇರಿದಂತೆ ಕೆಲ ತೆಲುಗು ಸಿನಿಮಾಗಳಲ್ಲಿ ಉಪೇಂದ್ರ ನಟಿಸಿದ್ದರು. ಇನ್ನು 'ಎ', 'ಉಪೇಂದ್ರ', 'ಹಾಲಿವುಡ್' ಹಾಗೂ 'ಸೂಪರ್' ಸಿನಿಮಾಗಳು ತೆಲುಗಿಗೆ ಡಬ್ ಆಗಿ ರಿಲೀಸ್ ಆಗಿತ್ತು. ಉಪೇಂದ್ರ ಸಿನಿಮಾ ಸ್ಟೈಲ್ ತೆಲುಗು ಪ್ರೇಕ್ಷಕರಿಗೂ ಅಚ್ಚುಮೆಚ್ಚು. ಕೆಲ ತೆಲುಗು ಫಿಲ್ಮ್ ಮೇಕರ್ಸ್ಗೆ ಉಪೇಂದ್ರ ಪ್ರೇರಣೆ ಎಂದರೂ ತಪ್ಪಾಗಲ್ಲ.
ಸದ್ಯ 'ಯುಐ' ಸಿನಿಮಾ ಮೂಲಕ ಮತ್ತೆ ಉಪ್ಪಿ ತೆಲುಗು ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಟ್ರೋಲ್ ಸಾಂಗ್ ತೆಲುಗಿನಲ್ಲೂ ಹಿಟ್ ಆಗಿ ಗಮನ ಸೆಳೆದಿದೆ. ಆಗಸ್ಟ್ನಲ್ಲಿ 'ಯುಐ' ಸಿನಿಮಾ ಜೊತೆ ನಿಮ್ಮ ಮುಂದೆ ಬರ್ತೀನಿ ಎಂದು ಉಪೇಂದ್ರ ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದಾರೆ.
ಕೆ. ಪಿ ಶ್ರೀಕಾಂತ್, ಮನೋಹರ್ ನಿರ್ಮಾಣದ 'ಯುಐ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈಗಾಗಲೇ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡಿದೆ. ಗ್ರಾಫಿಕ್ಸ್ ವರ್ಕ್ ಜಾಸ್ತಿ ಇರುವುದರಿಂದ ಪೋಸ್ಟ್ ಪ್ರೊಡಕ್ಷನ್ ತಡವಾಗುತ್ತಿದೆ. ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ.


Click it and Unblock the Notifications










