ರಾಜಕೀಯ ಪಕ್ಷಗಳಿಂದ ಭಟ್ರಿಗೆ ಆಗುತ್ತಿದೆಯಂತೆ ಹಿಂಸೆ
Recommended Video

ಸದ್ಯ ದೇಶದಲ್ಲಿ ರಾಜಕೀಯ ರಣರಂಗ ಕಾವೇರಿದೆ. ಅದರಲ್ಲೂ ಕರ್ನಾಟಕದ ರಾಜಕೀಯ ಕಣ ಮತ್ತಷ್ಟು ರಂಗೇರಿದೆ. ರಾಜಕೀಯ ವ್ಯಕ್ತಿಗಳೊಂದಿಗೆ ಸ್ಯಾಂಡಲ್ ವುಡ್ ನ ಕೆಲವು ಮಂದಿಯ ಹೆಸರುಗಳು ಕೇಳಿ ಬರುತ್ತಿದೆ. ಆ ಪಕ್ಷದ ಪರ, ಇವರ ಪರ.. ಅವರ ಪರ.. ಪ್ರಚಾರಕ್ಕೆ ಹೋಗುತ್ತಾರೆ ಅನ್ನೋ ಮಾತುಗಳು ಹರಿದಾಡುತ್ತಿವೆ. ಈ ವಿಚಾರವಾಗಿ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಹೆಸರು ಕೂಡ ಕೇಳಿಬರುತ್ತಿದೆ.
ಭಟ್ಟರ ಹೆಸರನ್ನು ಮಾತ್ರವಲ್ಲದೆ ಅವರ ಕವನದ ಸಾಲುಗಳು ಮತ್ತು ಗಾದೆ ರೀತಿಯ ಬರಹಗಳನ್ನು ರಾಜಕೀಯವಾಗಿ ಬಳಕೆಯಾಗುತ್ತಿವುದನ್ನು ನೋಡಲು ಹಿಂಸೆಯಾಗುತ್ತಿದೆ ಎಂದು ಯೋಗರಾಜ್ ಭಟ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ದಯವಿಟ್ಟು ನನ್ನನ್ನ ಯಾವುದೇ ಪಕ್ಷದ ಜೊತೆ ಸೇರಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಒಂದು ಪತ್ರ ಬರೆದಿರುವ ಭಟ್ರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಸಕಲರಿಗೂ ನಮಸ್ತೆ ಇದೊಂದು ಸಣ್ಣ ಭಿನ್ನವತ್ತಳೆ ನಾನು ಯಾವುದೇ ಥರದ ರಾಜಕಾರಣದ ಆರಾಧಕ ಅಲ್ಲ. ಎಡ ಬಲ ಮಧ್ಯ ಮೇಲೆ ಕೆಳಗೆ ಜಾತಿ ಪಾತಿ ಯಾವುದಕ್ಕೂ ನಾ ಸೇರಿಲ್ಲ. ನನ್ನ ಕೆಲವು ಕವನದ ಸಾಲುಗಳನ್ನು, ಗಾದೆ ರೀತಿಯ ಬರಹಗಳನ್ನು ರಾಜಕೀಯ ಪಕ್ಷಗಳು ಸುಮ್ಮನೇ ಬಳಸಿಕೊಳ್ಳುತ್ತಿವೆ, ಅದೊಂಥರ ಹಿಂಸೆ. ಆದರಿಂದ ಓದಗರು ಅಥವಾ ನೋಡುಗರು ನನ್ನನ್ನು ಯಾವುದೇ ಪಕ್ಷಕ್ಕು ಸೇರಿಸದೇ ಜೋಡಿಸದೇ ನನ್ನ ರಾಜಕೀಯ ನಿರ್ಲಿಪ್ತತೆಯನ್ನು ಕಾಪಾಡಬೇಕಾಗಿ ಪ್ರಾರ್ಥನೆ'. ನಿಮ್ಮವನು ಯೋಗರಾಜ್ ಭಟ್.

ಚುನಾವಣೆ ಬಂದ ಸಮಯದಲ್ಲೆಲ್ಲ ಭಟ್ರು ಒಂದು ಹಾಡನ್ನು ತಯಾರಿಸುತ್ತಾರೆ. ಎಲ್ಲರೂ ಓಟ್ ಮಾಡಿ ಎಂದು ಜಾಗೃತಿ ಮೂಡಿಸುವ ಜೊತೆಗೆ ಉತ್ತಮರನ್ನು ಆಯ್ಕೆ ಮಾಡಿ ಎಂಬ ಸಂದೇಶವನ್ನು ಹಾಡಿನ ಮೂಲಕ ಜನರಿಗೆ ತಲುಪಿಸುತ್ತಾರೆ. ಆದರೆ ಇದುವರೆಗೂ ಭಟ್ರು ಯಾವುದೇ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡಿಲ್ಲ. ಹಾಗಾಗಿ ಭಟ್ರು ಹೆಸರನ್ನು ರಾಜಕೀಯದಲ್ಲಿ ಎಳೆದು ತರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.


Click it and Unblock the Notifications











