ಕೇಂದ್ರದ ಹೊಸ ರೈತ ಕಾಯ್ದೆ ಬೆನ್ನಲ್ಲೆ ರೈತರ ಪರ ದನಿ ಎತ್ತಿದ ಶ್ರೀಮುರಳಿ
ಕೇಂದ್ರ ಸರ್ಕಾರ ಹೊಸ ರೈತ ಕಾಯ್ದೆಯನ್ನು ಜಾರಿಗೊಳಿಸಿದ ಮೇಲೆ ರೈತರ ಭವಿಷ್ಯದ ಬಗ್ಗೆ ತೀವ್ರತರವಾದ ಚರ್ಚೆಗಳು ಎದ್ದಿವೆ.
ಬಿಜೆಪಿ ಮತ್ತು ಅದರ ಕೆಲವು ಮಿತ್ರ ಪಕ್ಷಗಳು ಕೇಂದ್ರದ ಹೊಸ ಕಾಯ್ದೆಯನ್ನು ರೈತ ಪರವೆನ್ನುತ್ತಿದ್ದರೆ, ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಹೊಸ ರೈತ ಕಾಯ್ದೆಯು ರೈತರ ಭವಿಷ್ಯ ನಿರ್ನಾಮ ಮಾಡುತ್ತದೆ ಎನ್ನುತ್ತಿವೆ.
ಕಾಯ್ದೆಯನ್ನು ವಿರೋಧಿಸಿ ದೇಶದ ಹಲವೆಡೆಗಳಲ್ಲಿ ಈಗಾಗಲೇ ಪ್ರತಿಭಟನೆಗಳು ನಡೆದಿವೆ. ಸಂಸತ್ತಿನಲ್ಲೂ ಪ್ರತಿಭಟನೆಗಳು ನಡೆದಿವೆ. ರಾಜ್ಯದಲ್ಲಿ ಸಹ ಸೆಪ್ಟೆಂಬರ್ 28 ಕ್ಕೆ ಪ್ರತಿಭಟನೆಗೆ ಕರೆ ನೀಡಲಾಗಿದೆ. ಈ ನಡುವೆ ನಟ ಶ್ರೀಮುರಳಿ ರೈತರ ಪರವಾಗಿ ಟ್ವೀಟ್ ಒಂದನ್ನು ಮಾಡಿದ್ದಾರೆ.

ನಾವೆಲ್ಲರೂ ಕೃಷಿ ಹಿನ್ನೆಲೆಯಿಂದ ಬಂದವರು: ಶ್ರೀಮುರಳಿ
ಬುಧವಾರ ಮಧ್ಯಾಹ್ನ ಟ್ವೀಟ್ ಮಾಡಿರುವ ಶ್ರೀಮುರಳಿ, 'ಒಂದಲ್ಲೊಂದು ರೂಪದಲ್ಲಿ ನಾವೆಲ್ಲ ಕೃಷಿ ಹಿನ್ನೆಲೆಯಿಂದಲೇ ಬಂದವರು. ರಾಜಕಾರಣಿಯೋ, ಕಲಾವಿದರೋ ಅಥವಾ ಉದ್ಯಮಿಯೋ, ಅದು ಯಾರೇ ಆದರೂ ಸರಿ, ರೈತರು ತಮ್ಮ ಜಮೀನುಗಳಲ್ಲಿ ಕಷ್ಟಪಟ್ಟು ಬೆವರು ಹರಿಸಿ ಬೆಳೆ ಬೆಳೆದರೆ ಮಾತ್ರ ನಾವೆಲ್ಲ ಅಚ್ಚುಕಟ್ಟಾಗಿ ಕುಳಿತು ಭೋಜನ ಸವಿಯುವುದು' ಎಂದಿದ್ದಾರೆ.

ರೈತರ ಬಗ್ಗೆ ಅಗೌರವ ತರವಲ್ಲ: ಶ್ರೀಮುರಳಿ
ಮುಂದುವರೆದು, 'ಯಾರೇ ಆದರೂ ಸರಿ, ರೈತರ ಬಗ್ಗೆ ಅಗೌರವ ತೋರುವುದು ಸರಿಯಲ್ಲ' ಎಂದಿದ್ದಾರೆ ಶ್ರೀಮುರಳಿ. ರೈತಪರವಾದ ಶ್ರೀಮುರಳಿ ಮಾತಿಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುರಳಿ ಕೇಂದ್ರದ ಹೊಸ ಕಾಯ್ದೆಯನ್ನು ಗಮನದಲ್ಲಿಟ್ಟುಕೊಂಡೇ ಟ್ವೀಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮುರಳಿ ಟ್ವೀಟ್ನಲ್ಲಿ ಸ್ಪಷ್ಟತೆ ಇಲ್ಲ
ರೈತರ ಕುರಿತಾದ ಕೇಂದ್ರದ ಹೊಸ ಕಾಯ್ದೆಗಳ ಕುರಿತಾಗಿಯೇ ಶ್ರೀಮುರಳಿ ಟ್ವೀಟ್ ಮಾಡಿದ್ದಾದರೆ, ಅವರ ಟ್ವೀಟ್ನಲ್ಲಿ ಸ್ಪಷ್ಟತೆ ಇಲ್ಲ. ಅವರು ಕಾಯ್ದೆಗಳ ಪರವಾಗಿದ್ದಾರೆಯೇ ಅಥವಾ ಕಾಯ್ದೆಗಳು ರೈತರಿಗೆ ಅಪಾಯಕಾರಿಯಾಗಲಿವೆ ಎಂಬುದನ್ನು ಟ್ವೀಟ್ ಮೂಲಕ ಹೇಳುತ್ತಿದ್ದಾರೆಯೇ ಎಂಬುದು ಸ್ಪಷ್ಟವಿಲ್ಲ. ಆದರೆ ರೈತರ ಪರ ಕಾಳಜಿಯಂತೂ ಟ್ವೀಟ್ನಲ್ಲಿದೆ.
Recommended Video

ಮದಗಜ ಚಿತ್ರೀಕರಣದಲ್ಲಿ ಶ್ರೀಮುರಳಿ ಬ್ಯುಸಿ
ಶ್ರೀಮುರಳಿ ಪ್ರಸ್ತುತ 'ಮದಗಜ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೊರೊನಾ ಲಾಕ್ಡೌನ್ ನಿಂದಾಗಿ ನಿಂತಿದ್ದ ಚಿತ್ರೀಕರಣ ಈಗಷ್ಟೆ ಪುನರ್ಪ್ರಾರಂಭವಾಗಿದೆ. ಸಿನಿಮಾದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿದ್ದಾರೆ.


Click it and Unblock the Notifications











