Don't Miss!
- News Lok Sabha Election: ರಾಜಕೀಯ ಅಖಾಡದಲ್ಲಿ ನಕಲಿ ಅಭ್ಯರ್ಥಿಗಳ ಸೌಂಡ್ ಜೋರು: ಅಖಾಡದಲ್ಲಿ ನಕಲಿ ರಾಹುಲ್ ಗಾಂಧಿ, ಪಿಎಸ್ ಯಡಿಯೂರಪ್ಪ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುನೀತ್ ರಾಜ್ಕುಮಾರ್ ಅನ್ನು ರಾಜಕೀಯಕ್ಕೆ ಸೆಳೆಯಲು ಬಹಳ ಯತ್ನಿಸಿದ್ದೆ: ಡಿಕೆಶಿ
ಪುನೀತ್ ರಾಜ್ಕುಮಾರ್ ಮನೆ ಇರುವುದು ಸದಾಶಿವನಗರದಲ್ಲಿ. ಡಿ.ಕೆ.ಶಿವಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ನೆರೆ ಹೊರೆಯವರು. ಬಹುತೇಕ ಪ್ರತಿದಿನ ಭೇಟಿ ಮಾಡುತ್ತಿದ್ದವರೇ.
ಪುನೀತ್ ರಾಜ್ಕುಮಾರ್ ನಿಧನದ ಸುದ್ದಿ ಡಿ.ಕೆ.ಶಿವಕುಮಾರ್ಗೆ ತೀವ್ರ ಆಘಾತ ತಂದಿದೆ. ಪುನೀತ್ ನಿಧನದ ದಿನವೇ ಅವರು ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿ ಕುಟುಂಬದೊಂದಿಗೆ ಮಾತನಾಡಿದ್ದರು. ಇಂದು ಪುನೀತ್ ರಾಜ್ಕುಮಾರ್ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದ ಡಿಕೆಶಿ, ಅಂತಿಮ ವಿಧಿ-ವಿಧಾನದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದಾರೆ.
''ಪುನೀತ್ ರಾಜ್ಕುಮಾರ್ ಅವರನ್ನು ರಾಜಕೀಯಕ್ಕೆ ಸೆಳೆಯಲು ಬಹಳ ಪ್ರಯತ್ನ ಪಟ್ಟೆ ಆದರೆ ಅವರ ನಿರ್ಧಾರ ಅಚಲವಾಗಿತ್ತು'' ಎಂದಿದ್ದಾರೆ.
''ನಾನು ಅಪ್ಪು ನೆರ ಹೊರೆಯವರು. ಮೊದಲ ಬಾರಿಗೆ ಪುನೀತ್ ನಿಧನದ ಸುದ್ದಿ ಕೇಳಿದಾಗ ನನಗೆ ನಂಬಲಾಗಲಿಲ್ಲ. ವಿನಯ್ ರಾಘವೇಂದ್ರ ನನಗೆ ಮೊದಲು ಕರೆ ಮಾಡಿ ತಿಳಿಸಿದರು. ಅದಾದ ಬಳಿಕ ಪುನೀತ್ ಅವರ ಸಹೋದರ ಸಂಬಂಧಿ ಒಬ್ಬರು ಕರೆ ಮಾಡಿ ಮಾಹಿತಿ ನೀಡಿದರು. ಇದನ್ನು ನಾನು ನಿರೀಕ್ಷಿಸಿರಲಿಲ್ಲ. ಈಗಲೂ ನನಗೆ ಪುನೀತ್ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ'' ಎಂದರು ಡಿ.ಕೆ.ಶಿವಕುಮಾರ್.
''ಪುನೀತ್ ಅವರದ್ದು ಅದ್ಭುತವಾದ ವ್ಯಕ್ತಿತ್ವ. ಹಿರಿಯ-ಕಿರಿಯರು ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದರು. ಕಲಾವಿದನಾಗಿ ಅವರು ಜನಪ್ರಿಯರು. ಕುಟುಂಬದಿಂದ ಬಳುವಳಿಯಾಗಿ ಬಂದ ಕಲೆ ಹಾಗೂ ಆ ಗೌರವವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಿದ್ದಾರೆ. ಆದರೆ ಅದರ ಜೊತೆಗೆ ಸಮಾಜ ಸೇವೆಗೂ ಅವರು ತಮ್ಮನ್ನು ಮುಡಿಪಿಟ್ಟಿದ್ದರು. ಸರ್ಕಾರದ ಯಾವುದೇ ಕಾರ್ಯಕ್ರಮಕ್ಕೆ ಅವರು ನಿರಾಕರಿಸುತ್ತಿರಲಿಲ್ಲ'' ಎಂದರು ಡಿ.ಕೆ.ಶಿವಕುಮಾರ್.
ಹಣ ಪಡೆಯದೇ ನಟನೆ ಮಾಡಿದ್ದರು: ಡಿಕೆಶಿ
''ನಾವು ಎಲ್ಇಡಿ ಬಲ್ಬ್ ಜಾಹೀರಾತಿಗಾಗಿ ಪುನೀತ್ ಅವರನ್ನು ಕರೆಸಿದ್ದೆವು. ಹಿಂದೆ ಕೆಎಂಎಫ್ ಹಾಲಿನ ವಿಚಾರಕ್ಕೆ ಕರೆಸಿದ್ದೆವು, ಬೇರೆ ನಟರೆಲ್ಲ ಲೆಕ್ಕಾಚಾರ ಹಾಕಿ ಹಣ ಪಡೆದುಕೊಳ್ಳುತ್ತಾರೆ. ಆದರೆ ಪುನೀತ್ ಹಣಕ್ಕೆ ಬೇಡಿಕೆ ಇಟ್ಟಿರಲಿಲ್ಲ. ರಾಜಕಾರಣಕ್ಕೆ ಕರೆಯಬೇಕೆಂದು ನಾವೆಲ್ಲ ಸಾಕಷ್ಟು ಒತ್ತಡ ಹಾಕಿದೆವು ಆದರೆ ಆಗಲಿಲ್ಲ. ಅವರ ಅತ್ತಿಗೆ ಚುನಾವಣೆ ನಿಂತಾಗ ಅವರಿಗೆಷ್ಟು ಒತ್ತಡ ಇತ್ತು ಎಂಬುದು ನನಗೆ ಗೊತ್ತಿತ್ತು. ನಾವಿಬ್ಬರೂ ದಿನವೂ ಭೇಟಿ ಮಾಡುತ್ತಿದ್ದೆವು, ಆಗ ಆ ಬಗ್ಗೆ ಅವರು ಮಾತನಾಡಿದ್ದರು. ಏನೇ ಆದರೂ ನಮ್ಮ ತಂದೆಯ ಹಾದಿ ನಾನು ಬಿಡುವುದಿಲ್ಲ ಎಂದು ಹೇಳಿದ್ದರು'' ಎಂದು ನೆನಪು ಮಾಡಿಕೊಂಡಿದ್ದಾರೆ ಡಿ.ಕೆ.ಶಿವಕುಮಾರ್.
''ಕಾರು ನಿಲ್ಲಿಸಿ ಮಾತನಾಡಿಸಿಯೇ ಹೋಗುತ್ತಿದ್ದರು ಅಪ್ಪು''
''ಅವರ ತಾಯಿ ತಂದೆ ಬಗ್ಗೆ ಅವರಿಗೆ ಬಹಳ ಪ್ರೀತಿ ಇತ್ತು. ಪ್ರತಿ ತಿಂಗಳು ಇಲ್ಲಿಗೆ (ಕಂಠೀರವ ಸ್ಟುಡಿಯೋ) ಭೇಟಿ ನೀಡುತ್ತಿದ್ದರು. ಪುನೀತ್ ಮನೆ ಹತ್ತಿರ ಸದಾ ಕೆಲವು ಜನ ಇರುತ್ತಿದ್ದರು, ರಾಜ್ಯದ ಮೂಲೆ-ಮೂಲೆಯಿಂದ ಅವರನ್ನು ಕಾಣಲು ಯುವಕರು ಬಂದಿರುತ್ತಿದ್ದರು. ಕಾರು ನಿಲ್ಲಿಸಿ ಅವರನ್ನೆಲ್ಲ ಮಾತನಾಡಿಸಿಯೇ ಹೋಗುತ್ತಿದ್ದರು. ಇದನ್ನು ನಾನು ಇದನ್ನು ಹಲವು ಬಾರಿ ಗಮನಿಸಿದ್ದೇನೆ. ನಮ್ಮ ಮನೆ ಮುಂದೆ ನಮ್ಮ ಮಕ್ಕಳೇನಾದರೂ ನಿಂತಿದ್ದರೆ ಕಾರು ನಿಲ್ಲಿಸಿ ಕೆಳಗಿಳಿದು ಮಾತನಾಡುತ್ತಿದ್ದರು. ಅಷ್ಟು ಸಜ್ಜನಿಕೆ ಅವರದ್ದು'' ಎಂದರು ಡಿ.ಕೆ.ಶಿವಕುಮಾರ್.
''ಬೇರೆ ಕಲಾವಿದರು, ಪುನೀತ್ ಅನ್ನು ನೋಡಿ ಕಲಿಯಲಿ''
''ಪುನೀತ್ ಹೆಸರು ಶಾಶ್ವತವಾಗಿರುತ್ತದೆ. ಬೇರೆಯ ಕಲಾವಿದರಿಗೂ ನಾನು ಕೇಳಿಕೊಳ್ಳುವುದೇನೆಂದರೆ, ಪುನೀತ್ ಅವರಿಲ್ಲಿದ್ದ ಸರಳತೆ, ಅಜಾತ ಶತ್ರು ಮನೋಭಾವ, ಹೃದಯಶ್ರೀಮಂತಿಕೆ, ಇವೆಲ್ಲವನ್ನೂ ನೀವು ರೂಢಿಸಿಕೊಳ್ಳಿ. ಪುನೀತ್ ಅವರನ್ನು ನೋಡಲು ಜನಸಾಗರವೇ ಸೇರಿದೆ. ಯಾವ ರಾಜಕಾರಣಿಗೂ ಬರುವುದಿಲ್ಲ, ಯಾವ ಶ್ರೀಮಂತರಿಗೂ ಇಷ್ಟು ಜನ ಸೇರುವುದಿಲ್ಲ'' ಎಂದರು.
''ಅವರ ಕುಟುಂಬದಿಂದ ಇನ್ನಷ್ಟು ಮಂದಿ ಮುಂದೆ ಬರಲಿ''
''ಅವರು ಕಟ್ಟಿದ ಸಂಸ್ಥೆಯನ್ನು ಅವರ ಚಿಕ್ಕಮಕ್ಕಳು, ಹೆಂಡತಿ ಮುಂದುವರೆಸಿಕೊಂಡು ಹೋಗುತ್ತಾರೆ. ಜೊತೆಗೆ ಜನರ ಈ ಅಭಿಮಾನ, ಪ್ರೀತಿಯನ್ನು ಉಳಿಸಿಕೊಂಡು ಹೋಗಲಿ. ರಾಜ್ಕುಮಾರ್ ನಿಧನರಾದ ಮೇಲೆ ಪುನೀತ್ ರಾಜ್ಕುಮಾರ್ ಮತ್ತು ಶಿವಣ್ಣ ಅದನ್ನು ಉಳಿಸಿ, ಬೆಳೆಸಿಕೊಂಡು ಹೋದರು. ಅವರ ಕುಟುಂಬದಲ್ಲಿ ಇನ್ನೂ ಹಲವರು ಹೀಗೆ ಮುಂದೆ ಬರಲಿ. ಅದೂ ರಾಜ್ಯ ಸೇವೆ ಮಾಡಲು ಮುಂದೆ ಬರಲಿ ಎಂದು ಆಶಿಸುತ್ತೇನೆ'' ಎಂದು ಕೈ ಮುಗಿದ ತಲೆ ಬಾಗಿದರು ಡಿ.ಕೆ.ಶಿವಕುಮಾರ್.
ಮತ್ತೊಬ್ಬ ಪುನೀತ್ ರಾಜ್ಕುಮಾರ್ ಹುಟ್ಟುವುದಿಲ್ಲ: ಡಿಕೆಶಿ
''ರಾಜ್ಯದ ಜನ ಶಾಂತಿಯಿಂದ ಬಂದು ಅಂತಿಮ ದರ್ಶನ ಪಡೆದಿದ್ದಾರೆ. ಎಷ್ಟೋ ಮಂದಿ ತಾಯಂದಿರು ಟಿವಿಗಳನ್ನು ನೋಡಿ ಕಣ್ಣೀರು ಹಾಕಿದ್ದಾರೆ. ಪುನೀತ್ ಅವರನ್ನು ಅವರ ತಂದೆ-ತಾಯಿ ಜೊತೆಗೆ ಮಣ್ಣು ಮಾಡಿರುವುದು ಒಳ್ಳೆಯ ನಡೆ, ಇನ್ನೂ ಕೆಲವು ಕಾರ್ಯಗಳನ್ನು ಮಾಡಬೇಕಿದೆ ಆ ಬಗ್ಗೆ ನಾನು ವಿಧಾನಸಭೆಯಲ್ಲಿ ಮಾತನಾಡುತ್ತೇನೆ. ಸರ್ಕಾರಕ್ಕೆ ಕೆಲವು ಸಲಹೆಗಳನ್ನು ಕೊಡುವುದಕ್ಕಿದೆ ಅದನ್ನು ಅಲ್ಲಿಯೇ ಕೊಡುತ್ತೇನೆ. ಇರಲಿ ಆದರೆ ಇನ್ನೊಬ್ಬ ಪುನೀತ್ ರಾಜ್ಕುಮಾರ್ ಹುಟ್ಟಲಿಕ್ಕೆ ಸಾಧ್ಯವೇ ಇಲ್ಲ'' ಎಂದು ಮಾತು ಮುಗಿಸಿದರು ಡಿ.ಕೆ.ಶಿವಕುಮಾರ್.