ಪುನೀತ್ ಹೆಸರಲ್ಲಿ ಸ್ಟುಡಿಯೋ ನಿರ್ಮಿಸಿ: ಸಿಎಂಗೆ ಡಿಕೆ ಶಿವಕುಮಾರ್ ಮನವಿ
ಪುನೀತ್ ರಾಜ್ಕುಮಾರ್ ಹೆಸರಲ್ಲಿ ಕರ್ನಾಟಕದಲ್ಲಿ ಸ್ಟುಡಿಯೋ ಒಂದು ನಿರ್ಮಾಣ ಮಾಡಬೇಕು ಹಾಗೂ ಹೊಸ ಕಲಾವಿದರನ್ನು ತಯಾರು ಮಾಡುವ ಸಂಸ್ಥೆಯೊಂದನ್ನು ನಿರ್ಮಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಮನವಿ ಮಾಡಿದರು.
ಇಂದು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆದ 'ಪುನೀತ್ ನಮನ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
''ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ನೀಡುತ್ತಿರುವ ವಿಚಾರ ಸಂತೋಶದಾಯಕ. ಅವರ ತಂದೆಯವರಿಗೆ ಬಂಗಾರಪ್ಪನವರ ಅವಧಿಯಲ್ಲಿ ಮೊದಲ ಬಾರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿತ್ತು. ಆಗ ನಾನೂ ಸಹ ಸಂಪುಟದಲ್ಲಿ ಇದ್ದೆ. ಅಣ್ಣಾವ್ರಿಗೆ ಬದುಕಿದ್ದಾಗ ವಿಧಾನಸೌಧದ ಮುಂದೆಯೇ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿತ್ತು, ಆದರೆ ಅಪ್ಪುಗೆ ಮರಣೋತ್ತರವಾಗಿ ನೀಡಲಾಗುತ್ತಿದೆ'' ಎಂದರು.

''ಪುನೀತ್ಗೆ ವ್ಯಾಯಾಮ ಹೇಳಿಕೊಡುವ ವ್ಯಕ್ತಿಯೇ ನನಗೂ ಟ್ರೈನರ್ ಆತ ಪುನೀತ್ಗೆ ಹೀಗೆ ಆಗಿದೆ ಎಂದಾಗ ನನಗೆ ನಂಬಲೇ ಆಗಲಿಲ್ಲ. ಮನುಷ್ಯ ಹುಟ್ಟಿದಾಗ ಉಸಿರಿರುತ್ತದೆ, ಆದರೆ ಹೆಸರು ಇರೋದಿಲ್ಲ, ಸತ್ತಾಗ ಉಸಿರು ಇರಲ್ಲ, ಹೆಸರಿರುತ್ತದೆ, ಇದಕ್ಕೆ ಪುನೀತ್ ರಾಜ್ಕುಮಾರ್ ಸಾಕ್ಷಿ. ಬದುಕು ಕ್ಷಣಿಕ ಆದರೆ ಸಾಧನೆ ಮುಖ್ಯ ಪುನೀತ್ ಸಾಧನೆ ಮಾಡಿ ಹೋಗಿದ್ದಾರೆ'' ಎಂದರು.
''ದೊಡ್ಮನೆ ಕುಟುಂಬ ಕೇವಲ ತಮ್ಮ ಕುಟುಂಬಕ್ಕಾಗಿಯೋ, ಅಭಿಮಾನಿಗಳಿಗಾಗಿಯೋ ಇರುವ ಕುಟುಂಬವಲ್ಲ. ಅವರದ್ದು ನಿಜವಾಗಿಯೂ ಸಾಮಾಜಿಕ ಬದ್ಧತೆ ಇರುವ ಕುಟುಂಬ. ಇದೀಗ ಪುನೀತ್ ದೂರವಾಗಿರುವುದು ವ್ಯಕ್ತಿ ದೂರವಾದಂತಾಗಿಲ್ಲ ಬದಲಿಗೆ ಶಕ್ತಿಯೇ ದೂರವಾದಂತಾಗಿದೆ. ಅವರು ಇನ್ನೂ ಸಾಕಷ್ಟು ಕೆಲಸಗಳನ್ನು ಮಾಡುವುದಿತ್ತು'' ಎಂದರು ಡಿ.ಕೆ.ಶಿವಕುಮಾರ್.
''ಯಾವೊಂದು ವಿವಾದವೂ ಇಲ್ಲದೆ ಎಲ್ಲರ ಹೃದಯವನ್ನೂ ಗೆದ್ದ ವ್ಯಕ್ತಿ ಪುನೀತ್ ರಾಜ್ಕುಮಾರ್. ಅವರ ಪತ್ನಿ ಮತ್ತು ಮಕ್ಕಳಿಗೆ ಆಗಿರುವ ಆಘಾತ ಊಹಿಸಲು ಸಹ ಸಾಧ್ಯವಿಲ್ಲ. ಭಗವಂತ ಅದೆಷ್ಟು ಕ್ರೂರಿ ಎಂಬುದಕ್ಕೆ ಅಪ್ಪು ಸಾವು ಸಾಕ್ಷಿ. ದೇವರ ಮೇಲೆಯೇ ನಂಬಿಕೆ ಕಳೆದುಕೊಳ್ಳುವಂತೆ ಮಾಡಿಬಿಟ್ಟಿದೆ ಅಪ್ಪುವಿನ ಸಾವು. ಆದರೆ ಏನೂ ಮಾಡಲಾಗದು ಎಲ್ಲವೂ ವಿಧಿಯಾಟ'' ಎಂದು ಹೇಳಿದರು.
''ಅವರ ಅಭಿಮಾನಿಗಳು, ಕುಟುಂಬಸ್ಥರಿಗೆ ಈ ಅಪಾರ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲೆಂದು ಬೇಡಿಕೊಳ್ಳುತ್ತೇನೆ'' ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಡಿ.ಕೆ.ಶಿವಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಇಬ್ಬರೂ ನೆರೆ-ಹೊರೆಯವರಾಗಿದ್ದಾರೆ. ಇಬ್ಬರೂ ಸದಾಶಿವನಗರದಲ್ಲಿ ಬಹು ವರ್ಷಗಳಿಂದಲೂ ವಾಸಿಸುತ್ತಿದ್ದಾರೆ. ಇಬ್ಬರ ಮನೆ ಎದುರು ಬದುರೇ ಇದೆ. ಇಬ್ಬರೂ ವಾಕಿಂಗ್ ಫ್ರೆಂಡ್ಸ್ ಸಹ ಆಗಿದ್ದಾರೆ. ಪುನೀತ್ ರಾಜ್ಕುಮಾರ್ ಕುಟುಂಬಕ್ಕೂ ಡಿಕೆಶಿ ಕುಟುಂಬಕ್ಕೂ ಆತ್ಮೀಯ ನಂಟು.


Click it and Unblock the Notifications











