'ಡಿ ಬಾಸ್' ಎಂದವರ ಮೇಲೆ ಗರಂ ಆದ 'ಡಿಕೆ ಬಾಸ್' ಡಿಕೆ ಶಿವಕುಮಾರ್!
ನಟ ದರ್ಶನ್ ಅನ್ನು 'ಡಿ ಬಾಸ್' ಎಂದು ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ ಎಂಬ ವಿಷಯ ಹೊಸದೇನೂ ಅಲ್ಲ. ಆದರೆ ಅದ್ಯಾಕೋ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, 'ಡಿ ಬಾಸ್' ಹೆಸರೇಳಿ ಗರಂ ಆಗಿದ್ದಾರೆ.
ಆಗಿದ್ದಿಷ್ಟು, ಡಿ.ಕೆ.ಶಿವಕುಮಾರ್, ಇಂದು (ಸೆಪ್ಟೆಂಬರ್ 22) ದಾವಣಗೆರೆಯಲ್ಲಿ ನಡೆದ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಜೆ ನಡೆಯುವ ಇದೇ ಕಾರ್ಯಕ್ರಮಕ್ಕೆ ನಟ ದರ್ಶನ್ ಬರುತ್ತಿರುವುದರಿಂದ ಕಾರ್ಯಕ್ರಮದ ಆರಂಭದಿಂದಲೂ 'ಡಿ ಬಾಸ್' ಘೋಷಣೆಗಳನ್ನು ಕೂಗುತ್ತಲೇ ಇದ್ದರು ಜನ. ಡಿ.ಕೆ.ಶಿವಕುಮಾರ್ ವೇದಿಕೆಗೆ ಬರುತ್ತಿದ್ದಂತೆ 'ಡಿ ಬಾಸ್, ಘೋಷಣೆಗಳು ಇನ್ನಷ್ಟು ಜೋರಾದವು. ಇದಕ್ಕೆ ಪ್ರತಿಯಾಗಿ ಡಿಕೆ ಶಿವಕುಮಾರ್ ಬೆಂಬಲಿಗರು 'ಡಿಕೆ ಬಾಸ್' ಎಂದು ಘೋಷಣೆ ಕೂಗಲು ಪ್ರಾರಂಭಿಸಿದರು. ಡಿ.ಕೆ.ಶಿವಕುಮಾರ್ ಅವರು ಜನರತ್ತ ಕೈಬೀಸಿ ಸುಮ್ಮನಿರುವಂತೆ ಮನವಿ ಮಾಡಿದರೂ ಜನ ಸುಮ್ಮನಾಗಲಿಲ್ಲ.

ಡಿ.ಕೆ.ಶಿವಕುಮಾರ್ ಭಾಷಣ ಮಾಡಲು ಬಂದಾಗಲೂ ಘೋಷಣೆಗಳನ್ನು ಕೂಗುತ್ತಲೇ ಇದ್ದರು. ಇದರಿಂದ ಬೇಸರಕೊಂಡ ಡಿ.ಕೆ.ಶಿವಕುಮಾರ್, ''ಸುಮ್ಮನಿದ್ದರೆ ಇರುತ್ತೇನೆ, ಮಾತಾಡ್ತೇನೆ, ಇಲ್ಲಾಂದ್ರೆ ಹೋಗ್ತೇನೆ. ಡಿ. ಕೆ. ಬಾಸು ಬೇಡ, ಡಿ ಬಾಸು ಬೇಡ, ವಿಧಾನಸಭೆ ಸೆಷನ್ ಬಿಟ್ಟು ಬಂದಿದ್ದೇನೆ. ಸುಮ್ಮನಿರಿ, ಮಾತನಾಡುವುದನ್ನು ಕೇಳಿಸಿಕೊಳ್ಳಿ. ಐದು ನಿಮಿಷ ಸುಮ್ಮನಿರಲು ಆಗಲ್ವಾ'' ಎಂದು ಕೋಪದಿಂದಲೆ ಹರಿಹಾಯ್ದರು.
ನಗರದ ಬಾಪೂಜಿ ಎಂಬಿಎ ಗ್ರೌಂಡ್ ನಲ್ಲಿ ಎಸ್ ಎಸ್ ಎಂ ಅಭಿಮಾನಿಗಳ ಬಳಗ ಆಯೋಜಿಸಿದ್ದ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹುಟ್ಟುಹಬ್ಬ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುವ ವೇಳೆ ಸಿಟ್ಟಿಗೆದ್ದ ಡಿ. ಕೆ. ಶಿವಕುಮಾರ್, ಡಿ ಬಾಸ್ ಎಂಬ ಘೋಷಣೆ ಕೂಗಿದವರಿಗೆ ವಾರ್ನ್ ಮಾಡಿದರು.
ಮಲ್ಲಿಕಾರ್ಜುನ್ ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ಆಗಮಿಸುವ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಡಿ ಬಾಸ್ ಘೋಷಣೆ ಮುಗಿಲು ಮುಟ್ಟಿತ್ತು. ಡಿಕೆಶಿ ಬಂದಾಗ ಮತ್ತಷ್ಟು ಜೋರಾದ ಕಾರಣ ಈ ಪ್ರಸಂಗ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ''ಡಾ.ಶಾಮನೂರು ಶಿವಶಂಕರಪ್ಪ ಕುಟುಂಬದ ಋಣ ನನ್ನ ಮೇಲಿದೆ. ಹಾರ, ತುರಾಯಿ, ಜೈಕಾರ ಹಾಕಿಸಿಕೊಳ್ಳಲು ಇಲ್ಲಿಗೆ ಬಂದಿಲ್ಲ. ವಿಧಾನಸೌಧದಲ್ಲಿ ಅಧಿವೇಶನ ನಡೆಯುತ್ತಿದ್ದರೂ ಬಿಟ್ಟು ಬಂದಿದ್ದೇನೆ. ಇದಕ್ಕೆ ಅವರ ಮೇಲಿನ ಅಭಿಮಾನ, ಪ್ರೀತಿ ಕಾರಣ. ಶಾಮನೂರು ಶಿವಶಂಕರಪ್ಪರು ನನಗೆ ಮಾರ್ಗದರ್ಶಕರು. ಮಲ್ಲಿಕಾರ್ಜುನ್ ಜನುಮ ದಿನದಲ್ಲಿ ಪಾಲ್ಗೊಂಡಿದ್ದು ನನ್ನ ಭಾಗ್ಯ. 2023ರ ಚುನಾವಣೆಯಲ್ಲಿ ಮತ್ತೆ ವಿಧಾನಸೌಧದಲ್ಲಿ ಮಲ್ಲಿಕಾರ್ಜುನ್ ಕೂರುವಂತಾಗಬೇಕು. ಇದಕ್ಕೆ ನಿಮ್ಮ ಆಶೀರ್ವಾದ ಬೇಕು'' ಎಂದು ಹೇಳಿದರು.
ಲೋಕಸಭಾ ಚುನಾವಣೆ ಸಮಯದಲ್ಲಿ ಡಿಕೆ ಶಿವಕುಮಾರ್ ಹಾಗೂ ನಟ ದರ್ಶನ್ ಎದುರಾಳಿಗಳಾಗಿದ್ದರು. ಆದರೆ ಪರಸ್ಪರರ ಮೇಲೆ ಕೆಸೆರೆರಚಾಟಕ್ಕೆ ಇಳಿಯದೆ. ಇಬ್ಬರೂ ಸಹ ತಮ್ಮ ತಮ್ಮ ನಂಬಿಕೆಯ ಅಭ್ಯರ್ಥಿ ಪರ ಚುನಾವಣೆ ಪ್ರಚಾರ ಮಾಡಿದರು. ದರ್ಶನ್, ಸಮಲತಾ ಅಂಬರೀಶ್ ಪರ ಪ್ರಚಾರ ಮಾಡಿದರೆ, ಡಿ.ಕೆ.ಶಿವಕುಮಾರ್, ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡಿದ್ದರು.


Click it and Unblock the Notifications











