ನನ್ನ ಗುರುತು ಕನ್ನಡ.. ನನ್ನ ಅಸ್ತಿತ್ವ ಕನ್ನಡ.. ಅಪರ್ಣಾ ಅಪೂರ್ಣ ಕನಸು...!
ಬದುಕೇ ಹಾಗೇ. ಈ ಕ್ಷಣ ಇದ್ದಂತೆ ಮತ್ತೊಂದು ಕ್ಷಣ ಇರಲ್ಲ. ಇದಕ್ಕೆ ಕನ್ನಡದ ಶ್ರೇಷ್ಠ ನಿರೂಪಕಿ ಅಪರ್ಣಾ ಅವರ ಬದುಕು ಅತ್ಯುತ್ತಮ ಉದಾಹರಣೆ.
ಹೌದು, ನನ್ನ ಗುರುತು ಕನ್ನಡ .. ನನ್ನ ಅಸ್ತಿತ್ವ ಕನ್ನಡ .. ಎಂದು ಹೆಮ್ಮೆಯಿಂದ ಹೇಳುತ್ತಿದ್ದ ಅಪರ್ಣಾ, ಬದುಕಿನ ಯಾತ್ರೆ ಮುಗಿಸಿ ಎದ್ದು ನಡೆದಿದ್ದಾರೆ. ನಿಮಗೆ ಗೊತ್ತಾ ಅಪರ್ಣಾ ಚಿಕ್ಕಮಗಳೂರಿನ ಪಂಚನಹಳ್ಳಿ ಮೂಲದವರು. ಅಚ್ಚ ಕನ್ನಡದ ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಅಪರ್ಣಾ ಅವರ ತಂದೆ ನಾರಾಯಣಸ್ವಾಮಿ ಸಿನಿಮಾ ಪತ್ರಕರ್ತರಾಗಿದ್ದರು.

ಇನ್ನೂ ಅಪರ್ಣ ಕೇವಲ ನಿರೂಪಕಿ ಮಾತ್ರ ಅಲ್ಲ. ಅತ್ಯುತ್ತಮ ಕಲಾವಿದೆ ಕೂಡ ಹೌದು. ಕನ್ನಡದ ಹಿರಿತೆರೆ, ಕಿರುತರೆ, ರಂಗಭೂಮಿಯಲ್ಲೂ ತಮ್ಮ ಛಾಪು ಮೂಡಿಸಿದ್ದವರು ಅಪರ್ಣಾ. ಇಂಥಾ ಅಪರ್ಣಾ ಅವರಿಗೆ ನಿರೂಪಣಾ ಶಾಲೆಯನ್ನು ತೆರೆಯಬೇಕೆನ್ನುವ ಕನಸಿತ್ತು. ತಮ್ಮ ಆಪ್ತರ ಬಳಿ ಅವರು ಈ ಬಗ್ಗೆ ಹೇಳಿಕೊಂಡಿದ್ದರು ಕೂಡ. ಆದರೆ..ವಿಧಿ ಅದಕ್ಕೆ ಅವಕಾಶ ನೀಡಲೇ ಇಲ್ಲ. ನಿರೂಪಣೆಯ ಶಾಲೆ ತೆರೆದು ಮತ್ತಷ್ಟು ಉತ್ತಮ ನಿರೂಪಕರನ್ನು ಕನ್ನಡಕ್ಕೆ ಕೊಡಬೇಕು ಎನ್ನುವ ಅಪರ್ಣಾ ಅವರ ಕನಸು ನನಸಾಗಲಿಲ್ಲ.
ಅಪರ್ಣಾ ಅವರ ಈ ಅಪೂರ್ಣ ಕನಸಿನ ಕುರಿತು ನ್ಯೂಸ್ 18 ಜೊತೆ ತಮ್ಮ ಮನದ ಮಾತನ್ನು ಹಂಚಿಕೊಂಡಿರುವ, ರಂಗಭೂಮಿ ಕಲಾವಿದ, ಹಿರಿಯ ನಟ ಮತ್ತು ಅಪರ್ಣಾ ಅವರನ್ನು ತೀರಾ ಹತ್ತಿರದಿಂದ ಬಲ್ಲ ಮಂಡ್ಯ ರಮೇಶ್ ಮಾತನಾಡಿದ್ದಾರೆ. ಅಪರ್ಣಾ ಅವರಿಗೆ ಒಂದು ನಿರೂಪಣೆ ಶಾಲೆ ಮಾಡಬೇಕು ಅಂತ ಆಸೆ ಇತ್ತು. ನನ್ನ ಬಳಿಯೂ ಹೇಳಿಕೊಂಡಿದ್ದರು. ಆದ್ರೆ ಅದು ಈಡೇರುವ ಮುನ್ನವೇ ನಮ್ಮನ್ನ ಬಿಟ್ಟು ಹೋದರು ಎಂದು ಭಾವುಕರಾಗಿದ್ದಾರೆ.

ಹೀಗೆ ಕಂಡ ಕನಸು ನನಸಾಗುವ ಮುನ್ನವೇ ಬಾರದೂರಿಗೆ ಹೋದ ಅಪರ್ಣಾ, ಕೇವಲ ಕಿರುತೆರೆ ಲೋಕಕ್ಕೆ.. ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿದ್ದವರಲ್ಲ. ರಾಜ್ಯ ಸರಕಾರದ ಪ್ರಾಯೋಜಿತ ಪ್ರಮುಖ ಕಾರ್ಯಕ್ರಮಗಳನ್ನು ಬಹುಪಾಲು ಅಪರ್ಣಾ ವಸ್ತಾರೆ ಅವರೇ ನಿರೂಪಿಸುತ್ತಿದ್ದರು. ಈ ಮೂಲಕ ರಾಜಕೀಯ ರಂಗದಲ್ಲಿ ಕೂಡ ಅನೇಕರಿಗೆ ಚಿರಪರಿಚಿತರಾಗಿದ್ದರು.
ಇನ್ನೂ ಅಪರ್ಣಾ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ''ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ. ಮೃತ ಅಪರ್ಣಾಳ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ ಸಿ,ಎಂ. ಸಿದ್ಧರಾಮಯ್ಯ
ಒಟ್ಟಿನಲ್ಲಿ ಅಪರ್ಣಾ ಅವರ ಸಾವು ನಿಜಕ್ಕೂ ಕನ್ನಡ ಸಿನಿಮಾ, ಮಾಧ್ಯಮ ಮತ್ತು ನಿರೂಪಣಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದೇ ಹೋದರೂ, ಧ್ವನಿಯಾಗಿ ಮಾತ್ರ ಕನ್ನಡಿಗರ ಜೊತೆ ಸದಾ ಇರುತ್ತಾರೆ. ಹೋಗಿ ಬನ್ನಿ ಅಪರ್ಣಾ...


Click it and Unblock the Notifications











