ದರ್ಶನ್-ಇಂದ್ರಜಿತ್ ವಿವಾದ: ಲಂಕೇಶ್ ವಿರುದ್ಧ ದೊಡ್ಡಬಳ್ಳಾಪುರದಲ್ಲಿ ದೂರು
ನಟ ದರ್ಶನ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿರುವ ನಿರ್ದೇಶಕ-ಪತ್ರಕರ್ತ ಇಂದ್ರಜಿತ್ ಲಂಕೇಶ್ ವಿರುದ್ಧ ನಟನ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ. ದರ್ಶನ್ ಅವರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡಲಾಗುತ್ತಿದೆ, ಸುಳ್ಳು ಆರೋಪಗಳನ್ನು ವರಿಸಲಾಗುತ್ತಿದೆ, ಇಂದ್ರಜಿತ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ಪೊಲೀಸರ ಮೊರೆ ಹೋಗಿರುವ ಬೆಳವಣಿಗೆ ಬುಧವಾರ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ದರ್ಶನ್ ವಿರುದ್ಧ ಅವಹೇಳನ ಮಾಡಿದ ಹಾಗೂ ದಲಿತರ ಮೇಲೆ ಹಲ್ಲೆ ಎಂದು ಸುಳ್ಳು ಆರೋಪ ಮಾಡಿದ್ದಾರೆ ಎಂದು ಉಲ್ಲೇಖಿಸಿ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ 'ಕರುನಾಡ ಕಲಾಚಕ್ರವರ್ತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ'ದ ವತಿಯಿಂದ ದೂರು ದಾಖಲಿಸಲಾಗಿದೆ ಎಂಬ ವಿಚಾರ ಹೊರಬಿದ್ದಿದೆ. ದೂರಿನಲ್ಲಿ ಯಾವೆಲ್ಲಾ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ.? ಮುಂದೆ ಓದಿ...

ದೂರಿನಲ್ಲಿದೆ ಎರಡು ಪ್ರಮುಖ ವಿಚಾರ
ನಟ ದರ್ಶನ್ ಹಲ್ಲೆ ಮಾಡಿದ್ದಾರೆ ಎಂದು ಯಾರೂ ದೂರು ನೀಡಿಲ್ಲ. ಆದರೂ ಇಂದ್ರಜಿತ್ ಲಂಕೇಶ್ ಮಾತ್ರ ಆರೋಪ ಮಾಡ್ತಿದ್ದಾರೆ. ಅದಕ್ಕೆ ದಾಖಲೆ, ಸಾಕ್ಷ್ಯ ಸಹ ಒದಗಿಸಿಲ್ಲ. ಹೋಟೆಲ್ ಸಿಬ್ಬಂದಿ ದಲಿತ ಎಂದು ಬಿಂಬಿಸುವ ಮೂಲಕ ಕೋಮು ದ್ವೇಷ ಹರಡಿಸುವ ಪ್ರಯತ್ನ ನಡೆದಿದೆ. ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ್ದಾರೆ. ಉದ್ದೇಶಪೂರ್ವಕ ತಯಾರಿ ನಡೆಸಿ ದರ್ಶನ್ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಬೇಕು ಹಾಗೂ ತೇಜೋವಧೆ ಮಾಡಬೇಕು ಎಂದು ಸುಳ್ಳು ಆರೋಪ ಮಾಡಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

ಇಂದ್ರಜಿತ್ ಭಾವಚಿತ್ರಕ್ಕೆ ಅಪಮಾನ
ಚಾಲೆಂಜಿಂಗ್ ಸ್ಟಾರ್ ವಿರುದ್ಧ ಸಿಡಿದೆದ್ದಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರನ್ನು ಖಂಡಿಸಿ ದರ್ಶನ್ ಅಭಿಮಾನಿಗಳು ಹಾವೇರಿಯಲ್ಲಿ ಪ್ರತಿಭಟನೆ ಮಾಡಿದರು. ಈ ವೇಳೆ ಇಂದ್ರಜಿತ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತರಿಂದ ದೂರು
ಇಂದ್ರಜಿತ್ ಲಂಕೇಶ್ ದಲಿತ ಎನ್ನುವ ಪದವನ್ನ ಪದೇ ಪದೇ ಬಳಸಿದ್ದಾರೆ, ಸಮುದಾಯವನ್ನು ಎತ್ತು ಕಟ್ಟುವ ಪ್ರಯತ್ನ ಮಾಡಿದ್ದಾರೆ, ಸಮುದಾಯಕ್ಕೆ ಕೋಪ ಬರುವಂತೆ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಮಂಗಳವಾರ ಗೃಹಸಚಿವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ದೂರು ನೀಡಿದ್ದರು.

ದರ್ಶನ್ರನ್ನು ಬ್ಯಾನ್ ಮಾಡಿ
ದರ್ಶನ್ ಮತ್ತು ಇಂದ್ರಜಿತ್ ಲಂಕೇಶ್ರ ನಡುವಿನ ಬೆಳವಣಿಗೆ ಗಮನಿಸಿದ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಈ ಇಬ್ಬರನ್ನು ಚಿತ್ರರಂಗದಿಂದ 5 ವರ್ಷ ನಿಷೇಧ ಮಾಡಿ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಒತ್ತಾಯಿಸಿರುವ ಘಟನೆಯೂ ನಡೆದಿದೆ.


Click it and Unblock the Notifications











