"ಕನ್ನಡಿಗರಿಗೆ 'ಧಮ್ಮು' ಹುಟ್ಟಿನಿಂದಲೇ ಇರುತ್ತೆ".. ಟ್ವೀಟ್ ಮಾಡಿ ವಿಡಿಯೋ ಹಂಚಿಕೊಂಡ ಪವನ್ ಒಡೆಯರ್
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆಯುತ್ತಿದ್ದಂತೆ ನಿರ್ದೇಶಕ ಪವನ್ ಒಡೆಯರ್ ಟ್ವೀಟ್ ಮಾಡಿ ಸಿಎಂ ಬೊಮ್ಮಾಯಿಯವರನ್ನು ತಿವಿದಿದ್ದರು. ಹಿಂದಿನ ಘಟನೆಯೊಂದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. "ಮಾಮ ತೋರಿದ ದುರಹಂಕಾರ ನನ್ನ ಕಣ್ಣಿನಲ್ಲಿ ಇನ್ನೂ ಹಾಗೆ ಇದೆ. ಕನ್ನಡಿಗರು ಮುಟ್ಟಾಳರಲ್ಲ" ಎಂದು ದನಿ ಎತ್ತಿದ್ದರು. ಈ ಬಗ್ಗೆ ಪರ ವಿರೋಧ ಚರ್ಚೆ ನಡೆದಿತ್ತು.
ಕೆಲವರು ಪವನ್ ಒಡೆಯರ್ ಈಗ ಯಾಕೆ ಈ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಕೇಳಲು ಧೈರ್ಯ ಇರಲಿಲ್ಲವೇ? ಎಂದು ಕಾಮೆಂಟ್ ಮಾಡಿದ್ದರು. ಇದೇ ವಿಚಾರವಾಗಿ ಪವನ್ ಈಗ ಟ್ವೀಟ್ ಮಾಡಿದ್ದಾರೆ. ಜೊತೆಗೆ ಈ ಹಿಂದೆಯೇ ತಾವು ಈ ಬಗ್ಗೆ ಮಾತನಾಡಿದ್ದ ಸಂದರ್ಶನವೊಂದರ ವಿಡಿಯೋ ಲಿಂಕ್ ಶೇರ್ ಮಾಡಿದ್ದಾರೆ. ಪವನ್ ಮಸ್ತ್ ಸಿನಿಮಾ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸಿಎಂ ರಾಷ್ಟ್ರಪ್ರಶಸ್ತಿ ಪಡೆದ ಚಿತ್ರತಂಡವನ್ನು ಸೌಜನ್ಯಕ್ಕೂ ಕರೆದು ಮಾತನಾಡಿಸಲಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

ಈ ವಿಡಿಯೋ ಶೇರ್ ಮಾಡಿರುವ ಪವನ್, "ಹಲವಾರು ಮುಗ್ಧ ಸ್ನೇಹಿತರು,ಈ ವಿಷಯವನ್ನು ಅಂದೇ ಹೇಳಬಹುದಿತ್ತಲ್ಲ, ಧೈರ್ಯ ಇರ್ಲಿಲ್ವ, ಈಗ ಧಮ್ಮು ಬಂತಾ ಅಂದವರಿಗೆ, ಈ ಕೆಳಗಿನ ಲಿಂಕ್ ನೋಡಿ, ಅಂದು ನಾನು ನನ್ನ ಚಿತ್ರಕ್ಕೆ ಮಾತ್ರ ಅಲ್ಲ 'ತಲೆದಂಡ' ಚಿತ್ರ, 'ನಾದದ ನವನೀತಾ' ಡಾಕ್ಯುಮೆಂಟರಿ ಚಿತ್ರಕ್ಕೂ ದನಿ ಎತ್ತಿದ್ದೆ. ಕನ್ನಡಿಗರಿಗೆ "ಧಮ್ಮು" ಹುಟ್ಟಿನಿಂದಲೇ ಇರುತ್ತೆ" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











