ಗೋವಾ ಚಲನಚಿತ್ರೋತ್ಸವದಲ್ಲಿ ಪವನ್ ಒಡೆಯರ್ ನಿರ್ಮಾಣದ ಸಿನಿಮಾಕ್ಕೆ ಪ್ರಶಸ್ತಿ
ಗೋವಾದಲ್ಲಿ ನಡೆಯುತ್ತಿರುವ 52ನೇ ಭಾರತ ಅಂತರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಕನ್ನಡದ 'ಡೊಳ್ಳು' ಸಿನಿಮಾಕ್ಕೆ ಪನೊರಮಾ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ.
ಭಾರತೀಯ ಪನೊರಮಾ ವಿಭಾಗದಲ್ಲಿ ಪ್ರದರ್ಶನಗೊಂಡ 'ಡೊಳ್ಳು' ಸಿನಿಮಾಕ್ಕೆ ಅತ್ಯುತ್ತಮ ಸಿನಿಮಾ ಎಂದು ಪರಿಗಣಿಸಿ ಚಿತ್ರತಂಡಕ್ಕೆ ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಗಿದೆ.
ಸುನಿಲ್ ಪುರಾಣಿಕ್ ಪುತ್ರ ಸಾಗರ್ ಪುರಾಣಿಕ್ ನಿರ್ದೇಶನ ಮಾಡಿರುವ ಮೊದಲ ಸಿನಿಮಾ ಇದಾಗಿದ್ದು, ನಿರ್ದೇಶಕ ಪವನ್ ಒಡೆಯರ್ ನಿರ್ಮಾಣದ ಮೊದಲ ಸಿನಿಮಾ ಸಹ ಆಗಿದೆ.

ತಮ್ಮ 'ಒಡೆಯರ್ ಮೂವೀಸ್' ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾದ ಮೊದಲ ಸಿನಿಮಾಕ್ಕೆ ಪ್ರತಿಷ್ಠಿತ ಗೋವಾ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರಶಸ್ತಿ ಬಂದಿರುವುದು ಸಹಜವಾಗಿಯೇ ಪವನ್ ಒಡೆಯರ್ ಖುಷಿಗೆ ಕಾರಣವಾಗಿದೆ. ಗೋವಾದಲ್ಲಿರುವ 'ಡೊಳ್ಳು' ಚಿತ್ರತಂಡ ಪ್ರಶಸ್ತಿ ಪಡೆದು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
'ಡೊಳ್ಳು' ಸಿನಿಮಾಕ್ಕೆ ಇದು ಮೊದಲ ಪ್ರಶಸ್ತಿಯೇನೂ ಅಲ್ಲ. ಈ ಹಿಂದೆ ಢಾಕಾ ಸಿನಿಮೋತ್ಸವ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಬೋಸ್ಟನ್ ಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿ, ಕಲೈಡೊ ಚಿತ್ರೋತ್ಸವದಲ್ಲಿ ಪ್ರಶಸ್ತಿ ಹೀಗೆ ಇನ್ನೂ ಕೆಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇದೀಗ ಪ್ರತಿಷ್ಠಿತ ಗೋವಾ ಸಿನಿಮೋತ್ಸದಲ್ಲಿಯೂ ಪ್ರಶಸ್ತಿ ಗಳಿಸಿಕೊಂಡಿದೆ.
ಈ ಹಿಂದೆ 'ಡೊಳ್ಳು' ಸಿನಿಮಾವು ಢಾಕಾ ಚಿತ್ರೋತ್ಸವಕ್ಕೆ ಆಯ್ಕೆ ಆಗಿದ್ದಾಗ 'ಫಿಲ್ಮಿಬೀಟ್ ಕನ್ನಡ'ದ ಜೊತೆ ಮಾತನಾಡಿದ್ದ ಸಿನಿಮಾದ ನಿರ್ಮಾಪಕ ಪವನ್ ಒಡೆಯರ್, ''ಸಿನಿಮಾದ ಕತೆ ಮೊದಲ ಬಾರಿ ಕೇಳಿದಾಗ ಬಹಳ ಆಸಕ್ತಿಕರ ಎನಿಸಿತು. ಜನಪದ ಕಲೆಯೊಂದನ್ನು ಜನರಿಗೆ ಮರುಪರಿಚಯ ಮಾಡಿಸುವುದು ಈಗಿನ ಅಗತ್ಯ ಹಾಗಾಗಿ ಇದೇ ಕತೆಯನ್ನು ಸಿನಿಮಾ ಮಾಡಬೇಕೆಂದು ನಾನು ಹಾಗೂ ನನ್ನ ಪತ್ನಿ ಅಪೇಕ್ಷ ನಿಶ್ಚಯಿಸಿ ನಮ್ಮ ಪ್ರೊಡಕ್ಷನ್ ಸಂಸ್ಥೆ 'ಒಡೆಯರ್ ಮೂವೀಸ್'ನ ಮೊದಲ ಸಿನಿಮಾ ಆಗಿ ಈ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದೇವೆ'' ಎಂದಿದ್ದರು.

''ಕೇವಲ ಮನರಂಜನೆ ನೀಡುವುದಷ್ಟೆ ಅಲ್ಲದೆ ಸಿನಿಮಾ ಮೂಲಕ ಸಾಮಾಜಿಕ ಸಂದೇಶ ನೀಡುವ ಕಾರ್ಯವೂ ಆಗಬೇಕು. ಹಾಗಾಗಿಯೇ 'ಡೊಳ್ಳು' ಸಿನಿಮಾದ ನಿರ್ಮಾಣಕ್ಕೆ ಕೈ ಹಾಕಿದೆವು. ಈ ಸಿನಿಮಾದಲ್ಲಿ ಡೊಳ್ಳು ಕುಣಿತ ಕಲೆಯ ಹುಟ್ಟು ಸಾಗಿಬಂದ ರೀತಿ. ಈಗ ಈ ಜನಪದ ಕಲೆ ಎದುರಿಸುತ್ತಿರುವ ಸಮಸ್ಯೆಗಳು, ಕಲಾವಿದರ ಮೇಲೆ ನಗರೀಕರಣದ ಪ್ರಭಾವ, ಕಲೆ ನಂಬಿಕೊಂಡ ಕಲಾವಿದರ ಜೀವನ ಸ್ಥಿತಿ ಇನ್ನಿತರ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ'' ಎಂದು ತಮ್ಮ ಸಿನಿಮಾದ ವಿಶೇಷತೆಯ ಬಗ್ಗೆ ಹೇಳಿಕೊಂಡಿದ್ದರು ಪವನ್ ಒಡೆಯರ್.
'ಡೊಳ್ಳು' ಸಿನಿಮಾದಲ್ಲಿ ಸಿನಿಮಾದಲ್ಲಿ ಕಾರ್ತಿಕ್ ಮಹೇಶ್, ಬಾಭು ಹಿರಣಯ್ಯ, ನಿಧಿ ಹೆಗಡೆ ಇನ್ನೂ ಮುಂತಾದವರು ನಟಿಸಿದ್ದಾರೆ. ಅಭಿಲಾಶ್ ಕುಡತಿ ಕ್ಯಾಮೆರಾ, ಅನಂತ್ ಕಾಮತ್ ಸಂಗೀತ ನಿರ್ದೇಶನ ಮಾಡಿದ್ದಾರೆ. 'ತಿಥಿ' ಸಿನಿಮಾಕ್ಕೆ ಸೌಂಡ್ ಡಿಸೈನ್ ಮಾಡಿದ್ದ ನಿತಿನ್ ಲುಕೋಸ್ ಈ ಸಿನಿಮಾಕ್ಕೂ ಸೌಂಡ್ ಡಿಸೈನ್ ಮಾಡಿದ್ದಾರೆ. ಸಿನಿಮಾಕ್ಕೆ ಸಂಭಾಷಣೆಯನ್ನು ಶ್ರೀನಿಧಿ ಡಿ.ಎಸ್ ಬರೆದಿದ್ದಾರೆ. ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿಯೂ ಬಿಡುಗಡೆ ಮಾಡುವ ಯೋಜನೆ ನಿರ್ಮಾಪಕ ಪವನ್ ಒಡೆಯರ್ ಅವರಿಗೆ ಇದೆ.
ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವವು ನವೆಂಬರ್ 22 ಕ್ಕೆ ಪ್ರಾರಂಭವಾಗಿದ್ದು 28 ಕ್ಕೆ ಮುಗಿಯಲಿದೆ. ಪುನೀತ್ ರಾಜ್ಕುಮಾರ್ ಹಾಗೂ ಸಂಚಾರಿ ವಿಜಯ್ಗೆ ಚಿತ್ರೋತ್ಸವದಲ್ಲಿ ಗೌರವ ನೀಡುವ ಜೊತೆಗೆ ಇಬ್ಬರು ನಟರು ನಟಿಸಿರುವ ಕೆಲವು ಸಿನಿಮಾಗಳ ಪ್ರದರ್ಶನವೂ ಆಗಲಿದೆ. ಸಂಚಾರಿ ವಿಜಯ್ ನಟನೆಯ 'ಆಕ್ಟ್ 1978' ಹಾಗೂ 'ತಲೆದಂಡ' ಸಿನಿಮಾಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಇವುಗಳ ಜೊತೆಗೆ ಇದೇ ಮೊದಲ ಬಾರಿಗೆ ಒಟಿಟಿಯಲ್ಲಿ ನೇರವಾಗಿ ಬಿಡುಗಡೆ ಆದ ಸಿನಿಮಾಗಳು ಸಹ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.


Click it and Unblock the Notifications











