ಬೆಂಗಳೂರನ್ನು ಬೈಯ್ಯಬೇಡಿ: ಕವಿರಾಜ್ ನೆನಪಿಸಿದ ನಗರದ ಋಣ
ಬೆಂಗಳೂರನ್ನು ಬೈಯ್ಯಬೇಡಿ: ಕವಿರಾಜ್ ನೆನಪಿಸಿದ ನಗರದ ಋಣ
ಬೆಂಗಳೂರಿನ ಹಲವು ಪ್ರದೇಶಗಳು ಸತತ ಮಳೆಯಿಂದಾಗಿ ಜಲಾವೃತಗೊಂಡಿವೆ. ರಸ್ತೆಗಳಲ್ಲಿ ಮೊಣಕಾಲುದ್ದ ಮೀರಿ ನೀರು ಹರಿಯುತ್ತಿದೆ. ಹಲವೆಡೆ ಮನೆಗಳು ಮುಳುಗಿವೆ, ಅಪಾರ್ಟ್ಮೆಂಟ್ ಬೇಸ್ಮೆಂಟ್ಗಳು ನೀರಿನಿಂದ ತುಂಬಿ ಹೋಗಿವೆ.
ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರಿನ ಅವ್ಯವಸ್ಥೆಯ ವಿಡಿಯೋಗಳು, ಚಿತ್ರಗಳು ಹರಿದಾಡುತ್ತಿವೆ ಜೊತೆಗೆ ಬೆಂಗಳೂರಿನ ಮೂಲ ವ್ಯವಸ್ಥೆಯನ್ನು ಹೀಗಳೆಯಲಾಗುತ್ತಿದೆ. ನಗರವೇ ಸರಿಯಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕೆಲವು ಐಟಿ ಸಂಸ್ಥೆಗಳ ಮುಖ್ಯಸ್ಥರುಗಳು ಬೆಂಗಳೂರು ಬಿಟ್ಟು ತೆರಳುವ ಮಾತುಗಳನ್ನಾಡಿವೆ, ಇದೇ ಸಮಯಕ್ಕೆ ಕಾದಿದ್ದ ನೆರೆಯ ರಾಜ್ಯಗಳ ರಾಜಕಾರಣಿಗಳು ಬೆಂಗಳೂರಿನ ಅವ್ಯವಸ್ಥೆಯನ್ನು ಆಡಿಕೊಳ್ಳುತ್ತಿದ್ದಾರೆ. ಇದಕ್ಕೆ ಇಲ್ಲಿನ ಜನರೂ ದನಿಗೂಡಿಸುತ್ತಿದ್ದಾರೆ. ಈ ಸಮಯದಲ್ಲಿ ಚಿತ್ರಸಾಹಿತಿ ಬೆಂಗಳೂರನ್ನು ಬೈಯ್ಯುವವರಿಗೆ ಬೆಂಗಳೂರಿನ ಮಹತ್ವ ಸಾರುವ ಸಂದೇಶವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ದುಡಿಮೆಗೆ ದಾರಿಯಾಗಿದ್ದು ಬೆಂಗಳೂರು: ಕವಿರಾಜ್
''ಊರು ಬಿಟ್ಟಾಗಿಂದ ತಿಂದ ಒಂದೊಂದು ಕಾಳು ಅನ್ನದ ದುಡಿಮೆಗೆ ದಾರಿಯಾಗಿದ್ದು ಈ ಊರು. ಊರಲ್ಲಿ ಕೆಲಸಕ್ಕೆ ಬಾರದವರು ಎನಿಸಿಕೊಳ್ಳುತ್ತಿದ್ದವರಿಗೆ ಕೆಲಸ ಕೊಟ್ಟಿದ್ದು ಈ ಊರು. ಅಪ್ಪ- ಅಮ್ಮನ ದುಡ್ಡಲ್ಲಿ ಟಿಕೇಟ್ ಕೊಂಡು ಬಸ್ಸು , ರೈಲು ಹತ್ತಿ ಬಂದವರಿಗೆ ಸ್ವಂತ ಕಾರಲ್ಲಿ ಊರಿಗೆ ಹೋಗಿ ಬರುವಂತೆ ಮಾಡಿದ್ದು ಈ ಊರು. ಹುಟ್ಟಿದ ಊರಲ್ಲಿ ಮನೆ ಕಟ್ಟಿಸಲು ದುಡ್ಡು ಕೊಟ್ಟಿದ್ದು ಈ ಊರು''

ಭಾಷೆ ಭೇದ ಮಾಡದ ಬೆಂಗಳೂರು: ಕವಿರಾಜ್
''ಅಕ್ಕ ತಂಗಿಯರ ಮದುವೆ ಖರ್ಚಿಗೆ ಹಣ ಹುಟ್ಟಿಸಿದ್ದು ಈ ಊರು. ಅಪ್ಪ ಅಮ್ಮನ ಚಿಕಿತ್ಸೆಯ ಬಿಲ್ ಭರಿಸೋ ತಾಕತ್ತು ಕೊಟ್ಟಿದ್ದು ಈ ಊರು. ಆ ಜಾತಿ ಈ ಧರ್ಮ ಆ ರಾಜ್ಯ ಈ ಭಾಷೆ ಅಂತಾ ಭೇದ ಮಾಡದೇ ಎಲ್ಲರನ್ನು ಒಂದೇ ಕಟ್ಟಡಗಳಲ್ಲಿ ಒಂದಾಗಿ ಬಾಳುವಂತೆ ಮಾಡಿದ್ದು ಈ ಊರು. ಬೇರೆ ನಗರಗಳು ಧಗೇಲಿ ಬೇಯುತ್ತಿರುವಾಗ ಏಸಿ ವೆದರ್ ಅಲ್ಲಿ ನಮ್ಮನ್ನು ತಣ್ಣಗಿಟ್ಟಿದ್ದು ಈ ಊರು''

ವಿಶಾಲ ಹೃದಯಿ ಬೆಂಗಳೂರು: ಕವಿರಾಜ್
''ಎಲ್ಲೆಲ್ಲಿಂದಲೋ ಉದ್ಯೋಗ ಅರಸಿ ಹೊಟ್ಟೆ ಪಾಡಿಗಾಗಿ ಬಂದಿಳಿದವರು ನಾಲ್ಕಾರು ಫ್ಲಾಟ್ ಕೊಂಡು , ವೀಕೆಂಡ್ ಮೋಜು ಮಸ್ತಿ ಮಾಡಿಕೊಂಡು ಇಲ್ಲಿನ ಭಾಷೆ ,ಸಂಸ್ಕ್ರತಿ ಗೌರವಿಸದಿದ್ದರು ಹೋಗಲೀ ಬಿಡು ಅಂತಾ ಬಿಂದಾಸಾಗಿರಲು ಅನುವು ಮಾಡಿಕೊಟ್ಟಿದ್ದು ಈ ಊರು. ಕೋಟ್ಯಂತರ ಜನರಿಗೆ ಬದುಕು ಕಟ್ಟಿ ಕೊಟ್ಟ ವಿಶಾಲ ಹೃದಯಿ , ಅವಕಾಶಗಳ ಆಗರ ನಮ್ಮ ಬೆಂಗಳೂರು''

ಗೇಲಿ ಮಾಡಿದರೆ ಉದ್ಧಾರ ಆಗ್ತೀರೇನ್ರೊ: ಕವಿರಾಜ್
''ನಾಲ್ಕು ದಿನದ ಮಳೆಗೆ ರಸ್ತೆ , ಮನೆಗಳಿಗೆ ನೀರು ನುಗ್ಗಿ ಅವಾಂತರಗಳಾದರೆ ಒಂದು ಹಂತಕ್ಕೆ ಆಡಳಿತದ ಅಸಮರ್ಪಕ ನಿರ್ವಹಣೆಯನ್ನು ಟೀಕಿಸಬಹುದಾದರೂ, ಇಂತಾ ಜಡಿಮಳೆಯ ಪ್ರಕೃತಿ ವಿಕೋಪಕ್ಕೆ ಅಮೇರಿಕ , ಯೂರೋಪ್ ಅಂತಾ ದೇಶಗಳ ಸುಸಜ್ಜಿತ ನಗರಗಳು ಸಿಕ್ಕು ಒದ್ದಾಡಿರುವುದನ್ನು ಗಮನಿಸಬೇಕು. ಏನೇ ಆದರೂ ನಾಲ್ಕು ದಿನದ ಸಂಕಷ್ಟಕ್ಕೆ ವರುಷಗಳಿಂದ ಪೊರೆದ ಮಾತೃ ಹೃದಯಿ ಬೆಂಗಳೂರಿಗೆ ಬೈದರೇ, ಗೇಲಿ ಮಾಡಿದರೆ ಉದ್ಧಾರ ಆಗ್ತಿರ್ರೇನ್ರೋ ನಮ್ಮ ಬೆಂಗಳೂರು, ನಮ್ಮ ಹೆಮ್ಮೆ ಇಷ್ಟ ಆಗ್ದೇ ಇರೋರು ದಯಮಾಡಿ ಗಂಟು ಮೂಟೆ ಕಟ್ಟಿ ಹೊರಡಿ. ಮತ್ತೆ ಈ ಕಡೆ ಮುಖ ಹಾಕ್ಬೇಡಿ. ಉಳಿದವರು ನೆಮ್ಮದಿಯಿಂದ ಇರ್ತೀವಿ'' ಎಂದಿದ್ದಾರೆ ಕವಿರಾಜ್.


Click it and Unblock the Notifications











