ಪೋಸ್ಟ್ ಹಾಕಿದ್ರೆ ಚಾಲೆಂಜಿಂಗ್ ಸ್ಟಾರ್ ಪ್ರಥಮ್ ಅಂತಾರೆ; ನಾನು ದರ್ಶನ್ ವಿರೋಧಿ ಅಲ್ಲ ಎಂದ ಪ್ರಥಮ್!
ಕಳೆದ ಕೆಲ ದಿನಗಳಿಂದ ದರ್ಶನ್ ಅಭಿಮಾನಿಗಳು ಹಾಗೂ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಟ ನಡೆಯುತ್ತಿರುವುದು ಗೊತ್ತೇ ಇದೆ. ಈ ಕಿತ್ತಾಟಕ್ಕೆ ಎರಡೂ ಗುಂಪುಗಳಲ್ಲಿಯೂ ಅವರದ್ದೇ ಕಾರಣಗಳೂ ಸಹ ಇವೆ. ಅದರಲ್ಲಿಯೂ ಹೊಸಪೇಟೆಯಲ್ಲಿ ನಡೆದ ಘಟನೆ ಬಳಿಕ ಪುನೀತ್ ರಾಜ್ಕುಮಾರ್ ಹಾಗೂ ದರ್ಶನ್ ಅಭಿಮಾನಿಗಳ ನಡುವಿನ ಕಿತ್ತಾಟ ಮಿತಿ ಮೀರಿದೆ.
ದರ್ಶನ್ ಪುನೀತ್ ಸತ್ತ ನಂತರ ಜನರು ತೋರಿಸಿದ ಪ್ರೀತಿಯನ್ನು ನಾನು ಈಗಲೇ ನೋಡಿದ್ದೇನೆ ಎಂದು ನೀಡಿದ ಹೇಳಿಕೆಯಿಂದ ಕೋಪಕ್ಕೊಳಗಾಗಿದ್ದ ಹೊಸಪೇಟೆ ಅಪ್ಪು ಫ್ಯಾನ್ಸ್ ದರ್ಶನ್ ಕ್ರಾಂತಿ ಚಿತ್ರವನ್ನು ನಮ್ಮ ಊರಿನಲ್ಲಿ ಬ್ಯಾನ್ ಮಾಡ್ತೇವೆ ಎಂದಿದ್ದರು. ಇನ್ನು ಕ್ರಾಂತಿ ಚಿತ್ರತಂಡ ಅದೇ ಊರಿನಲ್ಲಿ ತಮ್ಮ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಲು ತೀರ್ಮಾನಿಸಿತ್ತು. ಈ ಸಂದರ್ಭದಲ್ಲಿ ಬ್ಯಾನ್ ಮಾಡ್ತೀವಿ ಎಂದ ಊರಿನಲ್ಲಿಯೇ ಹಾಡು ಬಿಡುಗಡೆಯಾಗ್ತಿದೆ ಎಂದು ದರ್ಶನ್ ಫ್ಯಾನ್ಸ್ ಕಾಲೆಳೆದಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಪುನೀತ್ ಫ್ಯಾನ್ಸ್ ಬ್ಯಾನರ್ ಹರಿದು, ಸ್ಟೇಜ್ ಮೇಲೆ ಪುನೀತ್ ಕಟ್ಔಟ್ ಎತ್ತಿಹಿಡಿದು ಕುಣಿದಿದ್ದರು.

ಇಷ್ಟೆಲ್ಲಾ ಮುಗಿದ ನಂತರ ದರ್ಶನ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಹಾಡು ಬಿಡುಗಡೆ ನಡೆಯಿತು. ಆ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಿಡಿಗೇಡಿಯೊಬ್ಬ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದ. ಈ ಘಟನೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಚಪ್ಪಲಿ ಎಸೆದದ್ದು ಪುನೀತ್ ಅಭಿಮಾನಿಯೇ ಎಂದರೆ, ಅಪ್ಪು ಫ್ಯಾನ್ಸ್ ಇಂತಹ ಕೆಲಸ ನಮ್ಮಿಂದಾಗಿಲ್ಲ ಎಂದರು. ಈ ಕುರಿತು ಪ್ರತಿಕ್ರಿಯಿಸಿದ ಹಲವರು ತನಿಖೆ ನಡೆಯುತ್ತಿದೆ, ಆದಷ್ಟು ಬೇಗ ಆತ ಯಾರು ಎಂದು ತಿಳಿಯುತ್ತೆ ಎಂದಿದ್ದರಾದರೂ ಇಲ್ಲಿಯವರೆಗೂ ಆತ ಯಾರೆಂಬ ವಿಷಯ ಹೊರಬಂದೇ ಇಲ್ಲ.
ಹೀಗೆ ಅಂದು ನಡೆದ ಉತ್ತರ ಸಿಗದ ಈ ಘಟನೆಯಿಂದ ಇಂದಿಗೂ ಪುನೀತ್ ಹಾಗೂ ದರ್ಶನ್ ಫ್ಯಾನ್ಸ್ ಕಿತ್ತಾಡುತ್ತಲೇ ಇದ್ದಾರೆ. ಇದರ ನಡುವೆ ನಟ ಒಳ್ಳೆ ಹುಡ್ಗ ಪ್ರಥಮ್ ಸಹ ಸಿಲುಕಿಕೊಂಡಿದ್ದಾರೆ. ಹೌದು, ಹೊಸಪೇಟೆ ವಿವಾದವಾದಾಗ ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ನಾನು ದರ್ಶನ್ ಪರ ನಿಲ್ಲುತ್ತೇನೆ ಎಂದಿದ್ದರು. ಇದನ್ನು ಖಂಡಿಸಿದ್ದ ಪುನೀತ್ ರಾಜ್ಕುಮಾರ್ ಏನು ಮಾಡಿದ್ರು, ಅವರ ಪರನೂ ನಿಲ್ಲುತ್ತೇನೆ ಎಂದು ಹೇಳಿ ಎಂದು ಹೇಳಿಕೆ ನೀಡಿದ್ದರು.

ಪ್ರಥಮ್ ಈ ರೀತಿ ಹೇಳಿಕೆ ನೀಡಿದ ಮೇಲೆ ದರ್ಶನ್ ಅಭಿಮಾನಿಗಳ ಪಾಲಿಗೆ ವಿಲನ್ ಆದರು. ಆಗಿನಿಂದ ಪ್ರಥಮ್ ದರ್ಶನ್ ವಿರೋಧಿ ಎಂದೇ ಬಿಂಬಿಸಲಾಯಿತು. ಪ್ರಥಮ್ ನಟನೆಯ ನಟ ಭಯಂಕರ ಸಿನಿಮಾ ಬಿಡುಗಡೆಯಾದಾಗ ಆ ಚಿತ್ರ ಕ್ರಾಂತಿ ಚಿತ್ರಕ್ಕಿಂತ ಮೊದಲ ದಿನ ಹೆಚ್ಚು ಗಳಿಕೆ ಮಾಡಿದೆ ಎಂದು ಸುದ್ದಿ ಹಬ್ಬಿಸಿ ರಿಯಲ್ ಬಾಕ್ಸ್ ಆಫೀಸ್ ಸುಲ್ತಾನ್ ಪ್ರಥಮ್ ಎಂದು ಕಾಮೆಂಟ್ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಥಮ್ ಇದೆಲ್ಲಾ ಸುಳ್ಳು ಎಂದೂ ಸಹ ಸ್ಪಷ್ಟನೆ ನೀಡಿದ್ರು.
ಹೀಗೆ ಪ್ರಥಮ್ ನೀಡಿದ ಹೇಳಿಕೆಗಳಿಂದ ದರ್ಶನ್ ಅಭಿಮಾನಿಗಳ ವಿರೋಧವನ್ನು ಕಟ್ಟಿಕೊಂಡರು. ಇದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಕಂಡ ಪ್ರಥಮ್ ಇದಕ್ಕೆ ಪೂರ್ಣ ವಿರಾಮ ಇಡಲೇಬೇಕೆಂದು ತೀರ್ಮಾನಿಸಿ ಇದೀಗ ವಿಡಿಯೊವೊಂದನ್ನು ಮಾಡಿ ಅದರಲ್ಲಿ ಸ್ಪಷ್ಟನೆ ನೀಡುವ ಯತ್ನ ಮಾಡಿದ್ದಾರೆ. ಸ್ವಾರಸ್ಯ ಸಿನಿ ಕ್ರಿಯೇಷನ್ ಎಂಬ ಯುಟ್ಯೂಬ್ ಚಾನೆಲ್ನಲ್ಲಿ ಈ ವಿಡಿಯೊವನ್ನು ಅಪ್ಲೋಡ್ ಮಾಡಲಾಗಿದ್ದು, ಪ್ರಥಮ್ ಈ ವಿಡಿಯೊ ಲಿಂಗ್ ಅನ್ನು ತಮ್ಮ ಟ್ವಟರ್ ಖಾತೆಯಲ್ಲಿ ಹಂಚಿಕೊಂಡು 'ದರ್ಶನ್ ಅಭಿಮಾನಿಗಳಿಗೆ ವಿಶೇಷ ಸಂದೇಶ. ನಾನು ದರ್ಶನ್ ಸರ್ ವಿರೋಧಿಯಲ್ಲ, ನಾನು ಯಾವತ್ತೂ ದರ್ಶನ್ ಸರ್ನ ವಿರೋಧಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಬಂದಾಗಲೂ ಇದರ ಬಗ್ಗೆ ಮಾತಾಡಿರಲಿಲ್ಲ. ಆದರೆ ಎಲ್ಲೋ ತಪ್ಪು ಮಾಹಿತಿ ಹೋಗ್ತಾ ಇದೆ ಅಂದಾಗ ಸ್ಟಷ್ಟನೆ ಮುಖ್ಯವಾಗುತ್ತೆ" ಎಂದು ಬರೆದುಕೊಂಡಿದ್ದಾರೆ.
ಇನ್ನು ಇತ್ತೀಚಿನ ದಿನಗಳಲ್ಲಿ ನಾನು ದರ್ಶನ್ ಸರ್ ವಿರೋಧಿ ಎಂದೇ ಬಿಂಬಿಸಲಾಗುತ್ತಿದೆ, ಯಾವುದೇ ಪೋಸ್ಟ್ ಹಂಚಿಕೊಂಡರೂ ಸಹ ಅಲ್ಲಿ ಕೆಲವರು ಬಂದು ಚಾಲೆಂಜಿಂಗ್ ಸ್ಟಾರ್ ಪ್ರಥಮ್ ಎಂದು ಕಾಮೆಂಟ್ ಹಾಕುತ್ತಾರೆ, ಇನ್ನೂ ಕೆಲವರು ಬಂದು ಪವರ್ ಸ್ಟಾರ್ ಪ್ರಥಮ್ ಎಂದು ಕಾಮೆಂಟ್ ಹಾಕುತ್ತಾರೆ. ಇದು ಸಣ್ಣ ಬುದ್ಧಿ ಈ ತರಹ ಮಾಡಬೇಡಿ, ನಿಜವಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ, ಪವರ್ ಸ್ಟಾರ್ ಎಂದರೆ ಪುನೀತ್ ಅವರೇ. ಇದೆಲ್ಲಾ ಶುರುವಾಗಿದ್ದು ನಾನು ಆ ದಿನ ಅಪ್ಪು ಅವರ ಫ್ಯಾಮಿಲಿಗೂ ಬೆಂಬಲ ನೀಡಿ ಎಂದು ನೀಡಿದ ಹೇಳಿಕೆಯಿಂದ. ಅವತ್ತು ನಾನು ದರ್ಶನ್ ರೀತಿಯೇ ಅಪ್ಪು ಫ್ಯಾಮಿಲಿಗೆ ಬೆಂಬಲ ನೀಡಿ ಎಂದಿದ್ದೆ, ಆದರೆ ಇದನ್ನು ತಿರುಚಿ ನನ್ನನ್ನು ದರ್ಶನ್ ವಿರೋಧಿ ಎಂದು ಬಿಂಬಿಸಿದ್ರು ಎಂದು ತಿಳಿಸಿದರು ಹಾಗೂ ನನಗೆ ದರ್ಶನ್ ಸರ್ ಮೇಲೆ ಪ್ರೀತಿಯಿದೆ, ನಾನು ವಿರೋಧಿ ಅಲ್ಲ, ಇಂತಹ ಕೆಲಸಗಳನ್ನು ಇಲ್ಲಿಗೆ ನಿಲ್ಲಿಸಿಬಿಡಿ ಎಂದು ಕೇಳಿಕೊಂಡರು.


Click it and Unblock the Notifications











