ಅಪ್ಪು ನಾಡಿನ ಶಕ್ತಿ, ಸೋಶಿಯಲ್ ಮೀಡಿಯಾದಲ್ಲಿ ಎಗರಾಡೋರ ಬಗ್ಗೆ ತಲೆಕೆಡಿಕೊಳ್ಬೇಡಿ ಎಂದ ಸ್ಯಾಂಡಲ್ವುಡ್ ನಟ!
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನ ಹೊಂದಿದ ಬಳಿಕ ಅವರ ಅಭಿಮಾನಿಗಳು ಅವರನ್ನು ದಿನನಿತ್ಯ ನೆನಪಿಸಿಕೊಳ್ಳುತ್ತಲೇ ಇದ್ದಾರೆ. ಅವರ ಹೆಸರನ್ನು ರಸ್ತೆಗಳು, ವೃತ್ತಗಳು, ಪಾರ್ಕ್ಗಳು ಹಾಗೂ ಬಸ್ ನಿಲ್ದಾಣಗಳಿಗೆ ಇಟ್ಟು ಅಪ್ಪು ಅವರನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಇನ್ನು ಕೇವಲ ಅಭಿಮಾನಿಗಳು ಮಾತ್ರವಲ್ಲದೇ ಪರಭಾಷೆಯ ಸ್ಟಾರ್ ನಟರು ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಸಹ ಪುನೀತ್ ರಾಜ್ಕುಮಾರ್ ಅವರಿಗೆ ದೊಡ್ಡ ಗೌರವವನ್ನು ನೀಡಿದ್ದಾರೆ.
ಹೌದು, ಪುನೀತ್ ನಿಧನದ ಬಳಿಕ ಕರ್ನಾಟಕಕ್ಕೆ ತಮ್ಮ ಚಿತ್ರಗಳ ಪ್ರಚಾರಕ್ಕೆಂದು ಬಂದ ಬಹುತೇಕ ಎಲ್ಲಾ ಸ್ಟಾರ್ ನಟರೂ ಸಹ ಪುನೀತ್ ರಾಜ್ಕುಮಾರ್ ಪುಣ್ಯಭೂಮಿಗೆ ಭೇಟಿ ನೀಡಿ ಪ್ರಾರ್ಥಿಸಿ ಬಳಿಕ ಪುನೀತ್ ಮನೆಗೆ ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ. ಇನ್ನು ರಾಜ್ಯ ಸರ್ಕಾರ ಪುನೀತ್ ರಾಜ್ಕುಮಾರ್ ಹೆಸರಿನ ಅಡಿಯಲ್ಲಿ ಮಾಡಿದ ಕೆಲಸಗಳು ದೊಡ್ಡಮಟ್ಟದಲ್ಲಿಯೇ ಇವೆ. ಮರಣೋತ್ತರ ಕರ್ನಾಟಕ ಪ್ರಶಸ್ತಿ, ಬೃಹತ್ ರಸ್ತೆಗೆ ಪುನೀತ್ ರಾಜ್ಕುಮಾರ್ ಹೆಸರು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಪುನೀತ್ ರಾಜ್ಕುಮಾರ್ ಹೆಸರು ನಾಮಕರಣ, ಹೀಗೆ ಹತ್ತು ಹಲವಾರು ಬಾರಿ ಪುನೀತ್ ರಾಜ್ಕುಮಾರ್ ಹೆಸರಿನಲ್ಲಿ ರಾಜ್ಯ ಸರ್ಕಾರ ಮಹಾ ಕೆಲಸಗಳನ್ನು ಮಾಡಿದೆ.

ಹೀಗೆ ಪುನೀತ್ ರಾಜ್ಕುಮಾರ್ ನಿಧನ ಹೊಂದಿ ಒಂದೂವರೆ ವರ್ಷ ಸಮೀಪಿಸುತ್ತಿದ್ದರೂ ಸಹ ಅವರನ್ನು ನೆನಪು ಮಾಡಿಕೊಳ್ಳುವುದನ್ನು ಮಾತ್ರ ಜನ ನಿಲ್ಲಿಸಿಲ್ಲ. ಯಾವ ಹಬ್ಬವಿರಲಿ, ಯಾವ ಊರಿನ ಜಾತ್ರೆಯಿರಲಿ ಅಲ್ಲಿ ಅಪ್ಪು ನೆನಪು ಇದ್ದೇ ಇರುತ್ತೆ. ಇನ್ನು ಪುನೀತ್ ರಾಜ್ಕುಮಾರ್ ಬದುಕಿದ್ದಾಗ ತಾವು ಮಾಡಿದ ಒಳ್ಳೆ ಕೆಲಸಗಳಿಂದ ಇಂದು ಅಭಿಮಾನಿಗಳ ಪಾಲಿಗೆ ದೇವರಾಗಿಬಿಟ್ಟಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಫೋಟೊಗಳನ್ನು ಮನೆಗೆ ತಂದಿಟ್ಟುಕೊಂಡು ಪೂಜಿಸುತ್ತಿದ್ದಾರೆ.
ಇಷ್ಟೆಲ್ಲಾ ಗೌರವ ಪಡೆದುಕೊಳ್ಳುತ್ತಿರುವ ಪುನೀತ್ ರಾಜ್ಕುಮಾರ್ ಬಗ್ಗೆ ಕೊಂಕು ನುಡಿಯುವವರೂ ಸಹ ಇದ್ದಾರೆ. ಹೌದು, ಇಂತಹ ಜನರು ಪುನೀತ್ ರಾಜ್ಕುಮಾರ್ ಬಗ್ಗೆ ತೀರ ಕೆಳಮಟ್ಟದಲ್ಲಿ ಟ್ವೀಟ್ ಮಾಡಿ ಅವರ ಹೆಸರಿಗೆ ಮಸಿ ಬಳಿಯುವ ಯತ್ನದಲ್ಲಿ ತೊಡಗಿದ್ದಾರೆ. ಇದರ ಬಗ್ಗೆ ಇದೀಗ ನಟ ಒಳ್ಳೆ ಹುಡುಗ ಪ್ರಥಮ್ ಪ್ರತಿಕ್ರಿಯಿಸಿದ್ದು, ಪುನೀತ್ ರಾಜ್ಕುಮಾರ್ ಈ ನಾಡಿನ ಶಕ್ತಿ, ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಅಪಪ್ರಚಾರ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
ನಟ ಒಳ್ಳೆ ಹುಡುಗ ಪ್ರಥಮ್ "ಅಪ್ಪು ಹೆಸರಿನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಹೊಸ ಬ್ಯಾಗ್, ಪುಸ್ತಕ, ಕೊಟ್ಟಿದ್ದು ನಿಜಕ್ಕೂ ತೃಪ್ತಿಕರ ಕೆಲಸ. ಒಂದು ತಿಳಿದಕೊಳ್ಳಿ ಒಳ್ಳೆ ಕೆಲಸ ಮಾಡೋರ ಹೆಸರು ಯಾವತ್ತೂ ಮಾರ್ಕೆಟ್ನಲ್ಲಿ ಬೀಳಲ್ಲ. ಪುನೀತ್ ರಾಜ್ಕುಮಾರ್ ಈ ನಾಡಿನ ಶಕ್ತಿ, ಸಾಮಾಜಿಕ ಜಾಲತಾಣದಲ್ಲಿ ಎಗರಾಡೋರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಒಳ್ಳೆ ವಿಚಾರ ಹಂಚೋಕೆ ಲಕ್ಷ ಜನ ಇದ್ದಾರೆ. ಆರಾಮಾಗಿರಿ" ಎಂದು ಬರೆದುಕೊಂಡಿದ್ದಾರೆ.

ಈ ಮೂಲಕ ಪುನೀತ್ ರಾಜ್ಕುಮಾರ್ ಬಗ್ಗೆ ಅಪಪ್ರಚಾರ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಅವರ ಬಗ್ಗೆ ಅಪಪ್ರಚಾರ ಮಾಡಲು ನೂರಾರು ಜನರಿದ್ದರೆ, ಅವರ ಬಗ್ಗೆ ಒಳ್ಳೆ ವಿಚಾರ ಹಂಚೋಕೆ ಲಕ್ಷಾಂತರ ಜನರಿದ್ದಾರೆ ಎಂದು ಒಳ್ಳೆ ಹುಡುಗ ಪ್ರಥಮ್ ಅಪ್ಪು ಫ್ಯಾನ್ಸ್ಗೆ ಸಂದೇಶ ರವಾನಿಸಿದ್ದಾರೆ.


Click it and Unblock the Notifications











