'ನಿಮ್ಮಿಂದಲೇ ನಾವು, ಈ ಕೆಲಸ ಮಾಡಬೇಡಿ': ಶ್ರೀಮುರಳಿ ಮನವಿ
ಪೈರಸಿ ಭೂತ ಕನ್ನಡ ಚಿತ್ರರಂಗದಲ್ಲಿ ಮತ್ತೆ ಸದ್ದು ಮಾಡ್ತಿದೆ. ಒಂದು ಸಮಯದಲ್ಲಿ ಕನ್ನಡ ಸಿನಿಮಾಗಳನ್ನ ಪೈರಸಿ ಮಾಡುವುದು, ಬೀದಿ ಬೀದಿಯಲ್ಲಿ ಕನ್ನಡ ಸಿನಿಮಾಗಳ ಸಿಡಿ ಮಾರಾಟ ಮಾಡುವುದು ಬಹಳ ಕಡಿಮೆ ಮತ್ತು ಅಪರೂಪವಾಗಿತ್ತು.
ಆದ್ರೀಗ, ಕನ್ನಡ ಇಂಡಸ್ಟ್ರಿಯಲ್ಲಿ ಪೈರಸಿ ಎನ್ನುವುದು ಹೆಚ್ಚಾಗುತ್ತಿದೆ. ಇಷ್ಟು ಪರಭಾಷೆಗಳು ಮಾತ್ರ ರಿಲೀಸ್ ಆದ ಮೊದಲ ದಿನವೇ ಪೈರಸಿ ಆಗುತ್ತಿತ್ತು. ಈಗ ಕನ್ನಡ ಸಿನಿಮಾಗಳಿಗೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ.
ನಟಸಾರ್ವಭೌಮ, ಕುರುಕ್ಷೇತ್ರ, ಯಜಮಾನ, ಪೈಲ್ವಾನ್, ಕೆಜಿಎಫ್ ಅಂತಹ ದೊಡ್ಡ ಸಿನಿಮಾಗಳು ಮೊದಲ ದಿನವೇ ಪೈರಸಿಯಾಗಿದೆ. ಈ ಬೆಳವಣಿಗೆ ಇತರೆ ಚಿತ್ರಗಳಿಗೆ ಆತಂಕ ಉಂಟು ಮಾಡಿದೆ. ಈ ಬಗ್ಗೆ ನಟ ಶ್ರೀಮುರಳಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮುಂದೆ ಓದಿ....

ಕನ್ನಡ ಚಿತ್ರರಂಗಕ್ಕೆ ಅವಮಾನ
''ಬಹಳ ಕಷ್ಟಪಟ್ಟು ಮಾಡುವ ಸಿನಿಮಾಗಳನ್ನ ಪೈರಸಿ ಮಾಡಿದ್ರೆ ಅದು ಕನ್ನಡ ಚಿತ್ರರಂಗಕ್ಕೆ ನೀವು ಮಾಡಿದ ಅವಮಾನ ಆಗುತ್ತೆ. ದಯವಿಟ್ಟು ಯಾರೂ ಪೈರಸಿಗೆ ಪ್ರೋತ್ಸಾಹ ನೀಡಬೇಡಿ'' ಎಂದು ನಟ ಶ್ರೀಮುರಳಿ ಚಿತ್ರರಸಿಕರಿಗೆ ಮನವಿ ಮಾಡಿಕೊಂಡಿದ್ದಾರೆ.

ನಿರ್ಮಾಪಕರಿಗೆ ತೊಂದರೆ ಮಾಡಬೇಡಿ
''ಕೋಟ್ಯಾಂತರ ರೂಪಾಯಿ ಹಾಕಿ ನಿರ್ಮಾಪಕರು ಸಿನಿಮಾ ಮಾಡ್ತಾರೆ. ಎಲ್ಲೆಲ್ಲೋ ಸಾಲಕ್ಕೆ ದುಡ್ಡು ತಂದಿರುತ್ತಾರೆ. ಆದರೆ, ಪೈರಸಿ ಮಾಡಿದ್ರೆ ಅದು ನಿರ್ಮಾಪಕರಿಗೆ ನಷ್ಟವಾಗುತ್ತೆ. ಮುಂದೆ ಅವರು ಸಿನಿಮಾ ಮಾಡುವುದಕ್ಕೆ ಕಷ್ಟ ಆಗುತ್ತೆ. ಆ ರೀತಿ ತೊಂದರೆಗಳು ನಿರ್ಮಾಪಕರಿಗೆ ನೀಡುವುದು ಬೇಡ'' ಎಂದು ಶ್ರೀಮುರಳಿ ಕೇಳಿಕೊಂಡಿದ್ದಾರೆ.

ಇದೆಲ್ಲ ನಿಮ್ಮ ಭಿಕ್ಷೆ
''ನಿಮ್ಮಂದಲೇ ಇಂಡಸ್ಟ್ರಿ. ನೀವು ಕೊಡುತ್ತಿರುವ ಭಿಕ್ಷೆ. ನೀವು ಸಹಕರಿಸಿದರೆ ಇಂಡಸ್ಟ್ರಿ ಮತ್ತಷ್ಟು ಬೆಳೆಯುತ್ತೆ. ಮತ್ತಷ್ಟು ಕಲಾವಿದರು ಚಿತ್ರರಂಗಕ್ಕೆ ಬರ್ತಾರೆ. ಒಳ್ಳೊಳ್ಳೆ ಚಿತ್ರಗಳನ್ನ ಮಾಡುವುದಕ್ಕೆ ಧೈರ್ಯ ಬರುತ್ತೆ'' ಎಂದು ರೋರಿಂಗ್ ಸ್ಟಾರ್ ತಿಳಿಸಿದರು.

ಭರಾಟೆ ಚಿತ್ರದಲ್ಲಿ ಶ್ರೀಮುರಳಿ
ಮಫ್ತಿ ಸಿನಿಮಾದ ಬಳಿಕ ಶ್ರೀಮುರಳಿ ನಟಿಸಿರುವ ಚಿತ್ರ ಭರಾಟೆ. ಚೇತನ್ ಕುಮಾರ್ ನಿರ್ದೇಶನದ ಈ ಸಿನಿಮಾ ಸಂಪೂರ್ಣ ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ಸಜ್ಜಾಗಿದೆ. ಈ ತಿಂಗಳ ಅಂತ್ಯಕ್ಕೆ ತೆರೆಮೇಲೆ ಬರುವ ತಯಾರಿಯಲ್ಲಿದೆ ಭರಾಟೆ ಚಿತ್ರತಂಡ.


Click it and Unblock the Notifications











