ಡಿ ಬಾಸ್.. ಡಿ ಬಾಸ್.. ಅಂತ ಕೂಗಿ ಕೂಗಿ ಪಾಪ ದರ್ಶನ್ನ ನೀವೆಲ್ಲ ಬೀದಿಗೆ ತರ್ತೀರಾ- ಪ್ರಥಮ್
''ಬಿಗ್ ಬಾಸ್'' ಕಾರ್ಯಕ್ರಮದ ನಾಲ್ಕನೇ ಸೀಸನ್ನ ವಿನ್ನರ್ ಆಗಿದ್ದವರು ಪ್ರಥಮ್. ಆ ಸೀಸನ್ನಲ್ಲಿ ಪ್ರಥಮ್ ಉಣಬಡಿಸಿದ್ದ ಮನರಂಜನೆಯ ರಸದೌತಣವನ್ನು ಪ್ರೇಕ್ಷಕರು ಇನ್ನೂ ಮರೆತಿರಲಿಕ್ಕಿಲ್ಲ. ಒಂದಿಷ್ಟು ಕಿರಿಕ್ಕು- ಇನ್ನೊಂದಿಷ್ಟು ವಾದ ವಿವಾದಗಳಿಂದ ಸದ್ದು ಮಾಡಿದ್ದ ಪ್ರಥಮ್ ಆ ನಂತರ ಚಿತ್ರಗಳಲ್ಲಿ ಬ್ಯುಸಿಯಾದರು. ''ದೇವ್ರಂಥಾ ಮನುಷ್ಯ'' ಸೇರಿ ಮೂರ್ನಾಲ್ಕು ಚಿತ್ರಗಳನ್ನು ಮಾಡಿದರು. ಸದ್ಯ ಪ್ರಥಮ್ ಅಭಿನಯದ ''ಫಸ್ಟ್ ನೈಟ್ ವಿತ್ ದೆವ್ವ'' ಮತ್ತು ನಿರ್ದೇಶಿಸಿ ಅಭಿನಯಿಸಿರುವ ''ಕರ್ನಾಟಕದ ಅಳಿಯ'' ಚಿತ್ರಗಳು ಬಿಡುಗಡೆಯಾಗಬೇಕಿವೆ.
ಇಂಥಾ ಪ್ರಥಮ್ ಕಂಡರೆ ಅದ್ಯಾಕೋ ಏನೋ ದರ್ಶನ್ ಅಭಿಮಾನಿಗಳಿಗೆ ವಿಪರೀತ ಪ್ರೀತಿ. ಪ್ರಥಮ್ಗೂ ಕೂಡ ಅಷ್ಟೇ. ಹೀಗಾಗಿಯೇ ಪ್ರಥಮ್ ಹೋದಲ್ಲಿ ಬಂದಲ್ಲಿ ದರ್ಶನ್ ಅಭಿಮಾನಿಗಳು ''ಡಿ ಬಾಸ್'' ಎಂದು ಕೂಗಿದರೆ ಪ್ರಥಮ್ ಅಷ್ಟೇ ಸಮಾಧಾನದಿಂದ ಉತ್ತರ ಕೊಡುತ್ತಾರೆ. ಕೆಲವೊಮ್ಮೆ ಗುಡುಗುತ್ತಾರೆ.

ಇನ್ನೂ ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ವಿಷ ಕಾರುವ ವ್ಯಕ್ತಿಗಳಿಗೆ ಪೊಲೀಸ್ ಠಾಣೆಗೆ ಕರೆಸಿ ಬುದ್ದಿವಾದವನ್ನೂ ಹೇಳುವ ಕಾರ್ಯಕ್ರಮವನ್ನು ಕೂಡ ಪ್ರಥಮ್ ಆಗಾಗ ಹಮ್ಮಿಕೊಳ್ಳುತ್ತಾ ಇರುತ್ತಾರೆ. ಸಮಯ ಸಿಕ್ಕಾಗ ಅಲ್ಲಲ್ಲಿಯೇ ತಿರುಗೇಟನ್ನು ಕೂಡ ನೀಡುತ್ತಾರೆ. ಈ ವಾದ .. ವಿವಾದ .. ವಾಗ್ಯುದ್ದ.. ಬೇರೆ ಹಂತಕ್ಕೆ ತಲುಪಿದ ಉದಾಹರಣೆಗಳಿವೆ.
ಹೀಗಿರುವಾಗ ಇದೀಗ ಇನ್ನೊಮ್ಮೆ ದರ್ಶನ್ ಬಗ್ಗೆ ಪ್ರಥಮ್ ಮಾತನಾಡಿದ್ದಾರೆ. ಡಿ ಬಾಸ್.. ಡಿ ಬಾಸ್.. ಎಂದು ಕೂಗಿ ದರ್ಶನ್ನ ಬೀದಿಗೆ ತರ್ತಿರಾ ಎಂದು ಹೇಳಿದ್ದಾರೆ. ಈ ಮೂಲಕ ಮತ್ತೊಮ್ಮೆ ದರ್ಶನ್ ಅವರ ಅಭಿಮಾನಿಗಳನ್ನು ಪ್ರಥಮ್ ಕೆಣಕಿದ್ದಾರೆ.
ಹೌದು, ಪ್ರಥಮ್ ಕೆಲಸದ ಪ್ರಯುಕ್ತ ಬಾಗಲಕೋಟೆಗೆ ತೆರಳಿದ್ದರು. ಈ ಸಮಯದಲ್ಲಿ ಅಲ್ಲಿದ್ದ ಕೆಲವರು ದರ್ಶನ್ ಪರ ಘೋಷಣೆ ಕೂಗಿದ್ದಾರೆ. ಇದಕ್ಕೆ ಪ್ರಥಮ್ ಅಲ್ಲಿಯೇ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅಲ್ಲಿ ಸೇರಿದ ದರ್ಶನ್ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿರುವ ಪ್ರಥಮ್, ಶಂಕರ್ ನಾಗ್ ಸರ್ ನಮ್ಮನ್ನೆಲ್ಲ ಅಗಲಿ 35 ವರ್ಷ ಆಯ್ತು. ಇವತ್ತು ಕೂಡ ಜನ ಅವರನ್ನು ಸ್ಮರಿಸುತ್ತಾರೆ ಅಂದರೆ ಅವರಂತಹ ಕ್ರೇಜ್ನ ಯಾರು ನೋಡಿಲ್ಲ ಎಂದಿದ್ದಾರೆ. ಅಣ್ಣಾವ್ರು.. ವಿಷ್ಣುವರ್ಧನ್ ಸರ್ ಕೂಡ ಜನಮಾನಸದಲ್ಲಿದ್ದಾರೆ ಎಂದಿದ್ದಾರೆ.
ಮುಂದುವರೆದು ನಾನ್ಯಾಕೇ ಈ ಮಾತು ಹೇಳ್ತಿದ್ದೀನಿ ಅಂದರೆ, ಪಾಪ ಆ ನಟ ದರ್ಶನ್ ಕೂಡ ಚೆನ್ನಾಗಿರ್ತಾರೆ, ನೀವೆಲ್ಲ ಹೇಗೆ ಮಾಡ್ತೀರಾ ಅಂದರೆ ಕೂಗಿ ಕೂಗಿ ಬೀದಿಗೆ ತಂದ್ಬಿಡ್ತೀರಾ, ಆರಾಮಾಗಿರಲಿ ಬಿಡಿ ಎಂದು ಹೇಳಿದ್ದಾರೆ. ನನ್ನ ಮುಂದೆ ಕೂಗಿದರೆ ಏನೂ ಪ್ರಯೋಜನ ಎಂದು ಕೇಳಿರುವ ಪ್ರಥಮ್ ಅವರಿಗೂ ಒಳ್ಳೆಯದಾಗಲಿ, ನಿಮಗೂ ಒಳ್ಳೆಯದಾಗಲಿ ಎಂದು ಹೇಳಿದ್ಧಾರೆ. ನಿಮ್ಮ ಅಪ್ಪ ಅಮ್ಮನ ಹೆಸರನ್ನಾದರೂ ಕೂಗಿ ಎಂದು ಅಲ್ಲಿದ್ದ ಅಭಿಮಾನಿಗಳಿಗೆ ಹೇಳಿ ಪ್ರಥಮ್ ತೆರಳಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಲವರು ಪ್ರಥಮ್ ವಿರುದ್ಧ ಕಿಡಿ ಕಾರಿದರೆ, ಇನ್ನೂ ಕೆಲವರು ಪ್ರಥಮ್ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಪಾಡಿಗೆ ಕಾರ್ಯಕ್ರಮಕ್ಕೆ ತೆರಳಿದ್ದ ಪ್ರಥಮ್ ಅವರನ್ನು ಬೇಕು ಬೇಕಂತಲೇ ಕೆಣಕುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಇನ್ನುಳಿದಂತೆ ಕಳೆದ ವರ್ಷ ಜುಲೈನಲ್ಲಿ ಕೆಲವರು ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದರು, ಬೆದರಿಕೆ ಹಾಕಿದ್ದರು ಎಂದು ಪ್ರಥಮ್ ಆರೋಪಿಸಿದ್ದರು. ಈ ಸಂಬಂಧ ಜುಲೈ 29 ರಂದು ಬೆಂಗಳೂರು ಗ್ರಾಮಂತರ ಎಸ್ಪಿ ಕಚೇರಿಗೆ ತೆರಳಿ ದೂರು ನೀಡಿದ್ದರು. ದರ್ಶನ್ ವಿರುದ್ಧ ನೇರಾನೇರ ವಾಗ್ದಾಳಿ ನಡೆಸಿದ್ದರು. ಉಪವಾಸ ಸತ್ಯಾಗ್ರಹ ಮಾಡುವುದಾಗಿ ಕೂಡ ಹೇಳಿದ್ದರು.


Click it and Unblock the Notifications











