ನಿಮ್ಮ ಮರ್ಯಾದೆ ಕಳೆದುಕೊಳ್ಳಬೇಡಿ ; ಯಶ್ ತಾಯಿ ಪುಷ್ಪಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ಪಿಡಿಒ ನಟರಾಜ್
ಒಂದ್ಕಾಲದಲ್ಲಿ ಬಸ್ ಕಂಡಕ್ಟರ್ ಮಗ ಆಗಿದ್ದ ಯಶ್ ಇಂದು ಕೇವಲ ರಾಕಿಂಗ್ ಸ್ಟಾರ್ ಮಾತ್ರ ಅಲ್ಲ ಬದಲಿಗೆ ಪ್ಯಾನ್ ಇಂಡಿಯಾ ಸ್ಟಾರ್. ಕೇವಲ ನಾಯಕ ಮಾತ್ರ ಅಲ್ಲ ಬದಲಿಗೆ ನಿರ್ಮಾಪಕ. ಹಿಂದಿ ಉದ್ಯಮದಲ್ಲಿ ಕೋಟ್ಯಂತರ ಹಣ ಹೂಡಿ ''ರಾಮಾಯಣ'' ಚಿತ್ರವನ್ನು ಮಾಡುತ್ತಿದ್ದಾರೆ ಯಶ್. ಆದರೂ ಕೂಡ ಯಶ್ ಅವರ ತಾಯಿಗೆ ಮಾತ್ರ ಕಾಂಪೌಂಡ್ ನೆಲಸಮವಾದ ಜಾಗದ ಮೇಲೆಯೇ ಆಸೆ.
ನಿಜಾ.. ಆ ಜಾಗ ಪುಷ್ಪಾ ಅವರದ್ದೇ ಆಗಿದ್ದರೂ ಆಗಿರಬಹುದು. ಆದರೆ.. ಈ ವಿಚಾರವನ್ನು ಮಾತುಕಥೆಯ ಮೂಲಕವೂ ಕೂಡ ಬಗೆ ಹರಿಸಿಕೊಳ್ಳಬಹುದಾಗಿತ್ತು. ಅನ್ಯಾಯವಾಗಿದ್ದರೆ ನ್ಯಾಯಾಲಯದ ಮೊರೆ ಹೋಗಬಹುದಿತ್ತು.

ಆದರೆ.. ಯಶ್ ಅವರ ತಾಯಿ ಪುಷ್ಪಾ ಮಾತ್ರ ಬೀದಿ ರಂಪ ಮಾಡುತ್ತಿದ್ದಾರೆ. ಯಶ್ ಅವರಿಗೊಂದು ಮರ್ಯಾದೆ ಇದೆ.. ನಿಮ್ಮ ಹೆಸರಿಗೊಂದು ಘನತೆ ಇದೆ.. ಎಂದು ಗ್ರಾಮಸ್ಥರು ಸೇರಿ ಹಲವರು ಹೇಳಿದರು ಕೂಡ ಪುಷ್ಪಾ ಅರುಣ್ ಕುಮಾರ್ ಅವರ ಕೋಪ-ತಾಪ ಕಡಿಮೆಯಾಗುತ್ತಿಲ್ಲ. ಹಠ ಬಿಡುತ್ತಿಲ್ಲ. ಬದಲಿಗೆ ಈ ಎಲ್ಲ ರಾದ್ಧಾಂತಕ್ಕೆ ಅಂದು ಪಿಡಿಒ ಆಗಿದ್ದ ನಟರಾಜ್ ಅವರೇ ಕಾರಣ ಎಂದು ಆರೋಪವನ್ನು ಕೂಡ ಮಾಡಿದ್ದಾರೆ.
ಸದ್ಯ ಪುಷ್ಪಾ ಅರುಣ್ ಕುಮಾರ್ ಅವರ ಈ ಆರೋಪಗಳಿಗೆ ಪಿಡಿಒ ನಟರಾಜ್ ಉತ್ತರವನ್ನು ನೀಡಿದ್ದಾರೆ. ಮಾನನಷ್ಟ ಮೊಕದ್ದಮೆ ಹೂಡುವ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ಈ ಕುರಿತು ''ಟಿವಿ9 ಕನ್ನಡ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪಿಡಿಒ ನಟರಾಜ್ ಎಲ್ಲ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ.
ಮೂಲ ದಾಖಲೆಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಬದಲಿಗೆ ಕಂದಾಯ ಇಲಾಖೆ ಮತ್ತು ಸಬ್ರೆಜಿಸ್ಟರ್ ವ್ಯಾಪ್ತಿಗೆ ಬರುವ ದಾಖಲೆಗಳು ಎಂದು ಹೇಳಿರುವ ನಟರಾಜ್ ನಕಲಿ ದಾಖಲೆಗಳನ್ನು ಸುಲಭವಾಗಿ ಸೃಷ್ಟಿಸಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ. ಗ್ರಾಮೀಣ ಅಭಿವೃದ್ದಿ ಇಲಾಖೆಯಲ್ಲಿ ಈ ಯಾವುದೇ ದಾಖಲೆಗಳು ಇರಲ್ಲ ಎಂದಿದ್ದಾರೆ.
ರೆವೆನ್ಯೂ ಸ್ಕೆಚ್ ಅಥವಾ ನಗರಾಭಿವೃದ್ದಿ ಇಲಾಖೆಯಲ್ಲಿ ನೀಡಲಾದ ಪ್ಲ್ಯಾನ್ಗಳನ್ನು ಮಾತ್ರ ನಾವು ನೋಡಿಕೊಂಡು ಇ-ಸ್ವತ್ತು ಮಾಡುತ್ತೇವೆ ಹೊರತು ಗ್ರಾಮೀಣ ಅಭಿವೃದ್ದಿ ಇಲಾಖೆಯಲ್ಲಿ ದಾಖಲೆಗಳನ್ನು ಸೃಷ್ಟಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ನನ್ನ ಹೆಸರನ್ನು ಅವರು ಯಾಕೆ ಹೇಳ್ತಿದ್ದಾರೆ ಎನ್ನುವುದೇ ನನಗೆ ಅರ್ಥ ಆಗ್ತಿಲ್ಲ ಎಂದು ಹೇಳಿರುವ ಪಿಡಿಒ ನಟರಾಜ್ ನನ್ನ ಅವಧಿಯಲ್ಲಿ ತಪ್ಪಾಗಿದ್ದರೆ ಅದಕ್ಕೆ ಸಂಬಂಧಿಸಿದಂತೆ ಅವರು ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಲಿ ಎಂದು ಹೇಳಿದ್ದಾರೆ.

ಮುಂದುವರೆದು ಸುಮ್ಮನೆ ಅವರು ತಮ್ಮ ಮನಸ್ಥಿತಿ ಹಾಳು ಮಾಡಿಕೊಳ್ತಿದ್ದಾರೆ, ಸಮಾಜದಲ್ಲಿ ಅಧಃಪಥನಕ್ಕೆ ಇಳಿಯುತ್ತಿದ್ದಾರೆ. ಎಂದು ಹೇಳಿರುವ ಪಿಡಿಒ ನಟರಾಜ್ ನನಗೇನೂ ಬೇಜಾರಿಲ್ಲ, ತಪ್ಪಾಗಿದ್ದರೆ ದೂರು ಕೊಡಲಿ.. ಸರ್ವೇ ಇಲಾಖೆಯಲ್ಲಿ ತನಿಖೆ ಮಾಡಲಿ ಎಂದು ಹೇಳಿದ್ಧಾರೆ.
ಇದೇ ಸಮಯದಲ್ಲಿ ಸತ್ಯಮಂಗಲ ಗ್ರಾಮ ಪಂಚಾಯಿತಿಯಲ್ಲಿ 2018ರಿಂದ 2022ರ ತನಕ ನಾನು ಕೆಲಸ ಮಾಡಿದ್ದೇನೆ ಎಂದು ಹೇಳಿರುವ ಪಿಡಿಒ ನಟರಾಜ್ ಆ ಸಮಯದಲ್ಲಿ ಇ-ಸ್ವತ್ತು ನಾನೇ ಮಾಡಿಕೊಟ್ಟಿದ್ದು. ಹಾಗಿದ್ದರೂ ನನ್ನ ಮೇಲೆ ಅವರು ಆರೋಪ ಮಾಡುತ್ತಿದ್ದಾರೆ. ಯಾಕೆ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ. ನಾನು ನನ್ನ ವೃತ್ತಿ ಧರ್ಮ ಪಾಲಿಸಿದ್ದೇನೆ, ಹೀಗಿದ್ದರೂ ಕೂಡ ಸುಳ್ಳರು, ಕಳ್ಳರು, ಮೋಸಗಾರರು ಎಂದು ಹೇಳಿದರೆ ನೋವಾಗುತ್ತೆ ಎಂದು ಹೇಳಿರುವ ಪಿಡಿಒ ನಟರಾಜ್ ಮಾನನಷ್ಟ ಮೊಕದಮ್ಮೆ ಹೂಡುವ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆಯುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











