ದುರಹಂಕಾರವನ್ನು ನಾನು ಬಿಡಲ್ಲ; ಹಣ ಮೋಸದ ಆರೋಪ ಮಾಡಿದ ನಿರ್ಮಾಪಕ ಕುಮಾರ್ಗೆ ಸುದೀಪ್ ತಿರುಗೇಟು!
ಮೊನ್ನೆಯಷ್ಟೇ ಕಿಚ್ಚ ಸುದೀಪ್ ನಟಿಸಲಿರುವ ಮುಂದಿನ ಚಿತ್ರದ ಗ್ಲಿಂಪ್ಸ್ ಒಂದು ಬಿಡುಗಡೆಯಾಗಿತ್ತು. ಈ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ಎಂಬ ಹೊಸ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿದ್ದು, ತಮಿಳಿನ ನಿರ್ಮಾಪಕ ಕಲೈಪುಲಿ ಎಸ್ ಧನು ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ.
ಇನ್ನು ಈ ಚಿತ್ರದ ಗ್ಲಿಂಪ್ಸ್ನಲ್ಲಿ ರಗಡ್ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡು ವಾರ್ನಿಂಗ್ ಡೈಲಾಗ್ ಹೊಡೆದಿದ್ದ ಕಿಚ್ಚ ಸುದೀಪ್ ಚಿತ್ರದ ಮೇಲೆ ನಿರೀಕ್ಷೆ ಹುಟ್ಟಿಕೊಳ್ಳುವಂತೆ ಮಾಡಿದ್ದರು. ಚಿತ್ರ ಮಾಸ್ ಆಗಿರಲಿದೆ ಎಂಬುದನ್ನು ಈ ಟೀಸರ್ ಮೂಲಕ ತಿಳಿಸಿದ್ದ ಕಿಚ್ಚ ಸುದೀಪ್ ತಮ್ಮ ಮುಂದಿನ ಚಿತ್ರ ಯಾವುದು ಎಂಬ ಹಲವು ದಿನಗಳ ಪ್ರಶ್ನೆಗೆ ಉತ್ತರ ನೀಡಿದರು.

ಹೀಗೆ ಚಿತ್ರದ ಟೀಸರ್ ಯುಟ್ಯೂಬ್ನಲ್ಲಿ ಬಿಡುಗಡೆಯಾಗಿ ಟ್ರೆಂಡ್ ಆದ ಬೆನ್ನಲ್ಲೇ ಸುದೀಪ್ ವಿರುದ್ಧ ಕನ್ನಡದ ಖ್ಯಾತ ನಿರ್ಮಾಪಕ ಎನ್ ಕುಮಾರ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ಸುದ್ದಿಗೋಷ್ಟಿಯೊಂದನ್ನು ಕರೆದಿದ್ದ ಅವರು ಸುದೀಪ್ ಅವರು ತಮ್ಮ ಬಳಿ ಅಡ್ವಾನ್ಸ್ ಪಡೆದು ಎಂಟು ವರ್ಷಗಳಿಂದ ಚಿತ್ರ ಮಾಡದೇ ಕೈಕೊಟ್ಟಿದ್ದಾರೆ ಎಂದು ಆರೋಪಿಸಿದ್ದರು.
ಇನ್ನು ಕಿಚ್ಚ ಸುದೀಪ್ ಅಭಿನಯದ ಹಲವು ಸಿನಿಮಾಗಳನ್ನು ನಿರ್ಮಾಣದ ಜೊತೆಗೆ ವಿತರಣೆ ಕೂಡ ಮಾಡಿರುವ ನಿರ್ಮಾಪಕ ಎನ್ ಕುಮಾರ್ 2016ರಲ್ಲಿ'ಮುಕುಂದ ಮುರಾರಿ' ಅನ್ನೋ ರಿಮೇಕ್ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಆದರೆ, ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಅಂದುಕೊಂಡಷ್ಟು ಸದ್ದು ಮಾಡಿರಲಿಲ್ಲ.
ಈ ಸಿನಿಮಾ ಸಂದರ್ಭದಲ್ಲಿಯೇ ಸುದೀಪ್ ಹಾಗೂ ನಿರ್ಮಾಪಕ ನಡುವೆ ನಡೆದಿದ್ದ ಸಿನಿಮಾವೊಂದರ ಒಪ್ಪಂದ ಈಗ ವಿವಾದದ ರೂಪ ಪಡೆದುಕೊಂಡಿದೆ. ಸುಮಾರು 8 ವರ್ಷಗಳ ಹಿಂದೆ ಎನ್ ಕುಮಾರ್ ಸಿನಿಮಾ ಮಾಡುವ ದೃಷ್ಟಿಯಿಂದ ಕಿಚ್ಚ ಸುದೀಪ್ಗೆ ಮುಂಗಡ ಹಣ ಪಾವತಿಸಿದ್ದರು. ಅಲ್ಲಿಂದ ಇಲ್ಲಿವರೆಗೂ ಕಾಲ್ಶೀಟ್ ಕೊಡದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಅಲ್ಲದೆ ಇವತ್ತು-ನಾಳೆ ಅಂತ ಹೇಳುತ್ತಿದ್ದಾರೆ. ನಿಮ್ಮದೇ ಮುಂದಿನ ಸಿನಿಮಾ ಅಂದು ಬೇರೆಯವರಿಗೆ ಕಾಲ್ಶೀಟ್ ಕೊಡುತ್ತಾರೆ ಎಂದು ಹಿರಿಯ ನಿರ್ಮಾಪಕ ಎನ್.ಕುಮಾರ್ ಆರೋಪ ಮಾಡಿದ್ದಾರೆ.
ಹೀಗೆ ಸುದೀಪ್ ವಿರುದ್ಧ ಕಿಡಿಕಾರಿದ ಎನ್ ಕುಮಾರ್ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧವೂ ಸಹ ಅಸಮಾಧಾನ ಹೊರಹಾಕಿದರು. ಹೀಗೆ ಸುದೀಪ್ ವಿರುದ್ಧ ಕುಮಾರ್ ಆರೋಪ ಮಾಡಿದ ಬೆನ್ನಲ್ಲೇ ಚರ್ಚೆಗಳು ಹಾಗೂ ಟ್ರೋಲ್ಗಳು ಹೆಚ್ಚಾಗತೊಡಗಿದವು. ಸುದೀಪ್ ಈ ರೀತಿ ಯಾಕೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡವು.
ಆದರೆ ಕಿಚ್ಚ ಸುದೀಪ್ ಈ ಕುರಿತು ಎಲ್ಲಿಯೂ ಹೊರಬಂದು ಹೇಳಿಕೆಗಳನ್ನು ನೀಡುವ ಕೆಲಸಕ್ಕೆ ಕೈಹಾಕಲಿಲ್ಲ. ಆದರೀಗ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಈ ವಿವಾದಗಳಿಗೆ ಸುದೀಪ್ ಟಾಂಗ್ ನೀಡಿದ್ದಾರೆ, ತನ್ನ ಒಳ್ಳೆತನವನ್ನು ದುರುಪಯೋಗಪಡಿಸಿಕೊಳ್ಳಬೇಡಿ ಎಂದು ವಾರ್ನಿಂಗ್ ನೀಡಿದ್ದಾರೆ.
ಸುದೀಪ್ "ನನ್ನ ಒಳ್ಳೆತನ ಬಳಸಿಕೊಳ್ಳಲು ಅಥವಾ ದುರುಪಯೋಗಪಡಿಸಿಕೊಳ್ಳಲು ಇರುವ ಸಾಧನವಲ್ಲ ಎಂಬುದು ಎಲ್ಲರಿಗೂ ತಿಳಿದಿರಲಿ. ನನ್ನ ಒಳ್ಳೆತನ ನಿಜವಾಗಿರುವ ಕಾರಣ ಅದು ಹೊಳೆಯುತ್ತಿರುತ್ತದೆ. ದುರಹಂಕಾರ ಅದರ ಪ್ರಕಾಶವನ್ನು ಹಾಳು ಮಾಡಲು ನಾನು ಬಿಡುವುದಿಲ್ಲ. ಸತ್ಯವಾಗಿರಿ ಹಾಗೂ ವಿನಮ್ರರಾಗಿರಿ" ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದಾರೆ.
ಈ ಮೂಲಕ ತನ್ನ ವಿರುದ್ಧ ಬಂದ ಹಣದ ಮೋಸದ ಆರೋಪದ ವಿರುದ್ಧ ಸುದೀಪ್ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದು ಸುಮ್ಮನಿರುವ ತನ್ನ ಒಳ್ಳೆತನವನ್ನು ದುರುಪಯೋಗಪಡಿಸಿಕೊಳ್ಳಬೇಡಿ ಎಂದು ಟಾಂಗ್ ನೀಡಿದ್ದಾರೆ.


Click it and Unblock the Notifications











