ಎಲ್ಲರ ಮನೆ ದೋಸೇನೂ ಈ ಶುಕ್ರವಾರ ತೂತೇ..
ಎಲ್ಲರ ಮನೆ ದೋಸೇನೂ ತೂತೇ ಎಂಬುದು ಈಗಾಗಲೇ ಪ್ರೂವ್ ಆಗಿ ಹೋಗಿದೆ. ಈಗ ಅದೇ ಹೆಸರಿನ ಕನ್ನಡ ಚಿತ್ರವೊಂದು ಮಾ.30ರ ಶುಕ್ರವಾರ ತೆರೆ ಕಾಣುತ್ತಿದೆ. ಬಿ.ಎನ್. ಗಂಗಾಧರ್ ಅರ್ಪಿಸಿ ಎಸ್.ಡಿ.ಎಂ. ಫಿಲಂಸ್ ಲಾಂಛನದಲ್ಲಿ ಬಿ.ಜಿ. ಹೇಮಲತಾ ತಯಾರಿಸುತ್ತಿರುವ ಎಲ್ಲರ ಮನೆ ದೋಸೇನೂ.. .. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ.
ಇತ್ತೀಚೆಗೆ ಬಿಚ್ಚಮ್ಮಳಾಗುತ್ತಿದ್ದಾಳೆ ಎಂಬ ಆರೋಪ ಹೊತ್ತಿರುವ ಭಾವನಾ ಜತೆ, ಸದಾ ಕಣ್ಣೀರ ಧಾರೆ ಹರಿಸುವ ಶ್ರುತಿ ಇದ್ದಾರೆ. ಕುರಿಗಳು ಸಾರ್ ಕುರಿಗಳು ಚಿತ್ರದಲ್ಲಿ ಮಿಂಚಿರುವ ಮೋಹನ್ ಹಾಗೂ ರಾಮಕುಮಾರ್ ನಾಯಕರು. ಯುವ ತಂತ್ರಜ್ಞ ಪ್ರಕಾಶ್ ನಿರ್ದೇಶಕ. ಪ್ರಸಾದ್ ಬಾಬು ಛಾಯಾಗ್ರಾಹಕರು. ಸುಹಾಸಿನಿ ವಿಶಿಷ್ಟ ಪಾತ್ರವನ್ನು ನಿರ್ವಹಿಸಿದ್ದಾರೆ.
ಇದೊಂದು ಸಂಪೂರ್ಣ ಮನರಂಜನಾತ್ಮಕ ಚಿತ್ರವಂತೆ. ಚಿತ್ರದಲ್ಲಿ ಹಾಸ್ಯವೂ ಇದೆಯಂತೆ. ಪ್ರೇಕ್ಷಕರನ್ನು ನಗಿಸುವ ಹೊಣೆಯನ್ನು ಉಮಾಶ್ರೀ, ಕಾಶಿ, ಬ್ಯಾಂಕ್ ಜನಾರ್ದನ್ ಹಾಗೂ ಹೊನ್ನವಳ್ಳಿ ಕೃಷ್ಣ ಹೊತ್ತಿದ್ದಾರೆ. ಎಸ್. ಮನೋಹರ್ ಸಂಕಲನ, ಹಂಸಲೇಖರ ಗೀತ ರಚನೆ, ಸಂಗೀತ ನಿರ್ದೇಶನವೂ ಇದೆ. ಸುಹಾಸಿನಿ, ಜಯಂತಿ, ಶ್ರೀನಿವಾಸ ಮೂರ್ತಿ, ತೂಗುದೀಪ ಶ್ರೀನಿವಾಸ್, ದರ್ಶನ್ ಹಾಗೂ ಪೂರ್ಣಿಮಾ ಕೂಡ ಚಿತ್ರದಲ್ಲಿದ್ದಾರೆ.
ಎಸ್.ಎಸ್.ಎಲ್.ಸಿ. ಪರೀಕ್ಷೆಯೂ ಸೇರಿದಂತೆ ಬಹುತೇಕ ಶಾಲೆಗಳ ಪರೀಕ್ಷೆ ಮುಗಿದಿರುವುದರಿಂದ ಚೈತ್ರಮಾಸದ ಮೊದಲ ಕೊಡುಗೆಯಾಗಿರುವ ಚಿತ್ರ ಗೆಲ್ಲುತ್ತದೆ ಎನ್ನುವುದು ನಿರ್ಮಾಪಕರ ಲೆಕ್ಕಾಚಾರ. ಅಂದಹಾಗೆ ಚಿತ್ರ ಬೆಂಗಳೂರಿನ ಮೇನಕ, ಪ್ರಸನ್ನ, ಪುಟ್ಟಣ್ಣ, ನಳಂದ (ದಿನ ಮೂರು ಆಟ), ಬೆಳಗಿನ ಪ್ರದರ್ಶನ - ಮೇನಕ, ಪ್ರಮೋದ್, ವೆಂಕಟೇಶ್ವರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ದೋಸೇ ತೂತಾದರೆ ಪರವಾಗಿಲ್ಲ, ಕಾವಲಿಯೇ ತೂತಾಗದಿರಲಿ!!


Click it and Unblock the Notifications