ರಾಜ್ ಇಲ್ಲದ ಜೀವನ ಬೇಸರ ತರಿಸಿದೆ, ಪಾರ್ವತಮ್ಮ
ಇದೇ ಸಂದರ್ಭದಲ್ಲಿ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಅವರು ರಾಜ್ ಅವರನ್ನು ನೆನೆದು ಭಾವುಕರಾದರು. ಅವರು ಇನ್ನೂ ಜೀವಂತವಾಗಿರಬೇಕಿತ್ತು. ಆದರೆ ದೇವರು ಅವರನ್ನು ಕರೆಸಿಕೊಂಡು ಬಿಟ್ಟ ಎಂದು ಕಣ್ಣೀರಾದರು.
ಹುಟ್ಟುಹಬ್ಬದ ನಿಮಿತ್ತ ಅವರು ರಾಜ್ ಸಮಾಧಿಗೆ ಪೂಜೆ ಸಲ್ಲಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಭಾವುಕರಾಗಿ ಮಾತನಾಡುತ್ತಿದ್ದ ಪಾರ್ವರ್ತಮ್ಮ ಅವರು ನನ್ನನ್ನೂ ದೇವರು ಬೇಗ ಕರೆಸಿಕೊಳ್ಳಬೇಕಿತ್ತು. ಆ ಪುಣ್ಮಾತ್ಮನನ್ನು ಇನ್ನೂ ಜೀವಂತವಾಗಿ ಉಳಿಸಿ ಈ ನಾಡಿಗೆ ಸೇವೆ ಸಲ್ಲಿಸುವ ಅವಕಾಶ ನೀಡಬೇಕಿತ್ತು ಎಂದರು.
ನಮ್ಮ ಯಜಮಾನರನ್ನು ಕಳೆದುಕೊಂಡು ಏಳು ವರ್ಷಗಳು ಕಳೆದುಹೋಗಿವೆ. ಅವರಿಲ್ಲದ ಜೀವನ ನನಗೆ ಬೇಸರ ತರಿಸಿದೆ. ಆದರೆ ಅವರ ಅಭಿಮಾನಿ ದೇವರುಗಳಲ್ಲಿ ಅವರನ್ನು ನಾನು ಕಾಣುತ್ತಿದ್ದೇನೆ. ಇಂಥಹ ಅಭಿಮಾನಿ ದೇವರುಗಳನ್ನು ಹೊಂದಿರುವ ಅವರೇ ಧನ್ಯರು ಎನ್ನುತ್ತಿದ್ದಂತೆ ಅವರ ಕಣ್ಣಾಲಿಗಳು ತುಂಬಿ ಬಂದವು.
ಬಳಿಕ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಮಾತನಾಡುತ್ತಾ, "ಅಪ್ಪಾಜಿ ಅವರು ಇನ್ನೂ ನಮ್ಮೊಂದಿಗೆ ಇದ್ದಾರೆ. ಅವರ ಹುಟ್ಟುಹಬ್ಬ ಹಿಂದಿನಂತೆಯೇ ಈಗಲೂ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಅವರಿಗೆ ಇಷ್ಟವಾದ ತಿಂಡಿಗಳನ್ನು ಅಭಿಮಾನಿಗಳಿಗೆ ಹಂಚಿ ಅವರ ಸಂಭ್ರಮದಲ್ಲಿ ನಾವೂ ಭಾಗಿಯಾಗುತ್ತಿದ್ದೇವೆ" ಎಂದರು.
ಈ ಸಂದರ್ಭದಲ್ಲಿ ರಾಜ್ ಅವರ ಸಹೋದರಿ ನಾಗಮ್ಮ, ಪುತ್ರಿಯರಾದ ಲಕ್ಷ್ಮಿ, ಪೂರ್ಣಿಮಾ, ಅಳಿಯ ಗೋವಿಂದರಾಜು, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ಸಾ.ರಾ.ಗೋವಿಂದು ಸೇರಿದಂತೆ ಚಿತ್ರರಂಗದ ಗಣ್ಯರು ಉಪಸ್ಥಿತರಿದ್ದರು. (ಒನ್ಇಂಡಿಯಾ ಕನ್ನಡ)


Click it and Unblock the Notifications












