twitter
    For Quick Alerts
    ALLOW NOTIFICATIONS  
    For Daily Alerts

    ಡಾ.ರಾಜ್ ಕುಮಾರ್ ಅವರು ತೀರಿಕೊಂಡ ಆ ಕ್ಷಣ...

    By ವಸಂತ ಶೆಟ್ಟಿ
    |

    ಕನ್ನಡಿಗರ ಹೆಮ್ಮೆಯ ಕಣ್ಮಣಿ ವರನಟ ಡಾ.ರಾಜ್ ಕುಮಾರ್ ಅವರದು ಇಂದು (ಏಪ್ರಿಲ್ 12) 10ನೇ ಪುಣ್ಯಸ್ಮರಣೆ. 2006ರಲ್ಲಿ ನಮ್ಮೆಲ್ಲರನ್ನು ಅಗಲಿದ ಚೇತನ ಮಾತ್ರ ಕೋಟ್ಯಾಂತರ ಅಭಿಮಾನಿಗಳ ಮನಸ್ಸಲ್ಲಿ ಇಂದಿಗೂ ಚಿರವಾಗಿ ಉಳಿದಿದೆ.

    ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಪುಣ್ಯತಿಥಿ ಪ್ರಯುಕ್ತ ಖ್ಯಾತ ಬರಹಗಾರ ವಸಂತ ಶೆಟ್ಟಿ ಅವರು ತಮ್ಮ ಫೇಸ್ ಬುಕ್ಕಿನಲ್ಲಿ ಬರೆದಿರುವ ವಿಶೇಷ ಲೇಖನ ನಿಮಗಾಗಿ...

    "ಅಣ್ಣಾವ್ರು ಇಲ್ಲದೇ ಹತ್ತು ವರುಷ. ನಾನು ಉತ್ತರ ಕರ್ನಾಟಕದ ಒಂದು ಚಿಕ್ಕ ಊರಿನಲ್ಲಿ ಓದಿ ಬೆಳೆಯುವಾಗ ನಮ್ಮೂರಲ್ಲಿದ್ದ ಒಂದೇ ಒಂದು ಚಿತ್ರ ಮಂದಿರದಲ್ಲಿ ರಾಜಕುಮಾರ್ ಅವರ ಹಳೆಯ ಚಿತ್ರಗಳಲ್ಲಿ ಕೆಲವನ್ನು ನೋಡಿದ್ದು ಬಿಟ್ಟರೆ ಅಣ್ಣಾವ್ರ ಹೆಚ್ಚಿನ ಚಿತ್ರಗಳನ್ನು ನಾನು ನೋಡಿದ್ದು ಟಿ.ವಿಯಲ್ಲೇ.[ಮಂಗಳವಾರ ನಟ ಸಾರ್ವಭೌಮ ಡಾ.ರಾಜ್ ಅವರ 10ನೇ ಪುಣ್ಯತಿಥಿ]

    ಬೆಂಗಳೂರಿಗೆ ಬರುವವರೆಗೂ ರಾಜ್ ಕುಮಾರ್ ಒಂದು ದೊಡ್ಡ phenomenon ಅಂತ ತೀವ್ರವಾಗಿ ನನಗೆ ಅನ್ನಿಸಿರಲಿಲ್ಲ. ಆದರೆ ಬೆಂಗಳೂರಿಗೆ ಬಂದ ಕೆಲ ವರ್ಷದಲ್ಲೇ, ಬೆಂಗಳೂರಿನಲ್ಲಿನ ಕನ್ನಡಕ್ಕಾಗಿ ನಿರಂತರವಾಗಿ ಹೋರಾಡಬೇಕಿರುವ ಪರಿಸರ ನನ್ನನ್ನು ರಾಜ್ ಕುಮಾರ್ ಅವರತ್ತ, ಅವರ ಸಿನೆಮಾಗಳತ್ತ, ಅವರ ಹಾಡುಗಳತ್ತ ತೀವ್ರವಾಗಿ ಸೆಳೆಯಿತು.

    ಎಷ್ಟೋ ಜನ ಕೇಳ್ತಾರೆ ರಾಜಕುಮಾರ್ ಕನ್ನಡಕ್ಕೆ ಏನು ಮಾಡಿದ್ದಾರೆ ಅಂತ. ಒಬ್ಬ ನಟನಾಗಿ ಐದು ದಶಕಗಳ ಕಾಲ ತಮ್ಮ ಸಿನೆಮಾಗಳ ಮೂಲಕ ಎರಡು ತಲೆಮಾರಿನ ಕನ್ನಡಿಗರ ಮಾರಲ್ ಕಂಪಾಸ್ ಅನ್ನು, ಕನ್ನಡತನದ ಅರಿವನ್ನು ರೂಪಿಸಿಕೊಟ್ಟಿದ್ದು ಸಣ್ಣ ಸಾಧನೆಯೇನಲ್ಲ.[ಡಾ.ರಾಜ್ ಅಸುನೀಗಿದ ದಿನ ಏನಾಗಿತ್ತು : ಅಭಿಮಾನಿ ಕಂಡಂತೆ]

    'ಬಂಗಾರದ ಮನುಷ್ಯ' ಚಿತ್ರ ನೋಡಿ ಹಳ್ಳಿಗೆ ಮರಳಿ ಹೋಗಿ ಸಾಗುವಳಿಗೆ ಹಿಂತಿರುಗಿದ ನೂರಾರು ಜನರ ಉದಾಹರಣೆಯನ್ನು ಹಿಂದೊಮ್ಮೆ ಪತ್ರಿಕೆಯೊಂದರಲ್ಲಿ ಓದಿದ್ದೆ. ಗೋಕಾಕ್ ಚಳುವಳಿಯಿಂದ ಹಿಡಿದು ಕಾವೇರಿಯವರೆಗೆ, ನೆರೆಯಿಂದ ಹಿಡಿದು ಬರದವರೆಗೆ ಕನ್ನಡಿಗರ ನೆರವಿಗೆ ನಿಲ್ಲಲು ಅವರು ಯಾವತ್ತೂ ಸಿದ್ದರಿರಲಿಲ್ಲವೇ? ಒಬ್ಬ ನಟನಾಗಿ ಇದಕ್ಕಿಂತ ಹೆಚ್ಚಿನದೇನು ಮಾಡಲು ಸಾಧ್ಯ?

    ಅಣ್ಣಾವ್ರು ತೀರಿ ಹೋದ ದಿನ ನಾನು ನನ್ನ ಅಕ್ಕನ ಜೊತೆ ಬಿ.ಟಿ.ಎಮ್ ಲೇಔಟ್ ನಿಂದ ವಿಜಯನಗರದತ್ತ ಹೊರಟಿದ್ದೆ. ದಾರಿಯುದ್ದಕ್ಕೂ ಅಂಗಡಿ ಬಾಗಿಲು ಎಳೆಯುತ್ತಿದ್ದ ಜನರನ್ನು ನೋಡಿ ಆಟೋದವನಿಗೂ ಆತಂಕ ಶುರುವಾಗಿ ಮಾರ್ಕೆಟ್ ಬಳಿ ಆಟೋ ನಿಲ್ಲಿಸಿ, ಬಸ್ ಅಲ್ಲಿ ಹೋಗಿ ಸಾರ್, ಆಮೇಲೆ ವಾಪಸ್ ಬರೋದು ನನಗೆ ತೊಂದರೆಯಾದೀತು ಎಂದು ಇಳಿಸಿ ಹೋದ.[ಡಾ.ರಾಜ್ ಕುಮಾರ್ 9 ನೇ ಪುಣ್ಯತಿಥಿಗೆ ಜನಸಾಗರ]

    ಮಾರ್ಕೆಟ್ ನಿಂದ ವಿಜಯನಗರಕ್ಕೆ ಒಂದು ಬಸ್ಸಿನಲ್ಲಿ 80-90ಜನ ಹತ್ತಿ ಉಸಿರಾಡಲು ಜಾಗವಿಲ್ಲದಂತಿತ್ತು. ದಾರಿಯುದ್ದಕ್ಕೂ ಜನರು ನಡೆದೇ ಮನೆ ಸೇರುವ ನೋಟ ಎಲ್ಲೆಡೆ ಕಾಣುತ್ತಿತ್ತು. ಮನೆಗೆ ತಲುಪಿ ರೇಡಿಯೋ ಹಾಕಿದರೆ ಇಂಗ್ಲಿಷ್/ಹಿಂದಿಯಲ್ಲಿ ಬಡಬಡಿಸುವ ಚಾನೆಲ್ ಗಳಲ್ಲೂ ಅಣ್ಣಾವ್ರ ಹಾಡುಗಳು.

    ಸಂಜೆ ಹೊತ್ತಿಗೆ ಜೀವನದಲ್ಲೊಮ್ಮೆ ನೋಡಬೇಕು ಎಂದುಕೊಳ್ಳುತ್ತಿದ್ದ ಅಣ್ಣಾವ್ರನ್ನು ಕೊನೆಗೂ ನೋಡಲಾಗಲೇ ಇಲ್ಲವಲ್ಲ ಅನ್ನುವ ಹತಾಶೆ, ಅವರನ್ನು ಕಳೆದುಕೊಂಡ ದುಃಖ ಕಣ್ಣೀರನ್ನೇ ತರಿಸಿತ್ತು. ಮುಂದಿನ ಎರಡು ದಿನ ಅಂತಹ ದೊಡ್ಡ ಕಲಾವಿದನಿಗೆ ಒಂದು ಗೌರವದ ಬೀಳ್ಕೊಡುಗೆಯನ್ನು ಕೊಡಲಾಗದೇ, ಯಾರು ಯಾರನ್ನು ಸಂಬಾಳಿಸಲಾಗದ ಸ್ಥಿತಿಯ ನಡುವೆ, ದೊಂಬಿ ಗದ್ದಲದ ನಡುವೆ ಅವರನ್ನು ಕಳಿಸಿದ್ದು ಇನ್ನೊಂದು ಕಹಿ ನೆನಪಾಗಿ ಉಳಿಯಿತು.[ನಾವು ನೀವು ಅರಿಯದ ರಾಜ್ ಅಪರೂಪದ ಸಂಗತಿಗಳು]

    ಏನೇ ಅದರೂ ಕನ್ನಡ ನಾಡಿರುವವರೆಗೂ ಅಣ್ಣಾವ್ರ ನೆನಪು ಅಳಿಯದು. ಅವರು ನಿಜವಾದ ಅರ್ಥದಲ್ಲಿ ಕರ್ನಾಟಕದ ಐಕಾನ್. ಮುಂದಿನ ಪೀಳಿಗೆಯ ಮಕ್ಕಳಿಗೆ ಇದನ್ನೆಲ್ಲ ಹೇಳಿ ಕೊಡಬೇಕಿದೆ. ಹೆಚ್ಚಿನ ವಿವರಗಳನ್ನು ತಿಳಿಯಲು ಈ ವಿಡಿಯೋ ನೋಡಿ..

    ಇವತ್ತಿನ ಸಿ.ಬಿ.ಎಸ್.ಇ/ಐ.ಸಿ.ಎಸ್.ಇ ಸಿಲೆಬಸ್ ನಲ್ಲಿ ನಮ್ಮ ಕನ್ನಡ ನಾಡಿನ ಇತಿಹಾಸಕ್ಕೆ ಯಾವುದೇ ಜಾಗವಿಲ್ಲ, ಅಲ್ಲಿ ಅಣ್ಣಾವ್ರು ತರದ ಸಾಧಕರ ಪರಿಚಯವೂ ಇಲ್ಲ. ಇದೆಲ್ಲ ಯೋಚಿಸಿದ್ರೆ ಈ ಮಕ್ಕಳು ತಮ್ಮ ಬೇರಿನಿಂದಲೇ ಬೇರ್ಪಟ್ಟು ಬೆಳೆಯುತ್ತವಲ್ಲ ಅಂತ ಕಳವಳ ಆಗುತ್ತೆ. ಇದರ ಬಗ್ಗೆ ನಾವೆಲ್ಲ ಯೋಚಿಸಬೇಕಿದೆ". ವಸಂತ ಶೆಟ್ಟಿ.

    ನಟ ಸಾರ್ವಭೌಮ ಡಾ.ರಾಜ್ ಅವರ ಪುಣ್ಯಸ್ಮರಣೆಯ ಫೊಟೋ ಗ್ಯಾಲರಿ ನೋಡಲು ಸ್ಲೈಡ್ಸ್ ಕ್ಲಿಕ್ ಮಾಡಿ...

    ಡಾ.ರಾಜ್ ಕುಮಾರ್ ಅವರು ತೀರಿಕೊಂಡ ಆ ಕ್ಷಣ...

    ಡಾ.ರಾಜ್ ಕುಮಾರ್ ಅವರು ತೀರಿಕೊಂಡ ಆ ಕ್ಷಣ...

    English summary
    Karnataka's Matinee Idol Dr Rajkumar 10th death anniversary Today (April 12th). Here is the special article by writer Vasanth Shetty. Check it.
    Tuesday, April 12, 2016, 16:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X