ಡಾ.ರಾಜ್ ಮತ್ತು ಅಂಬರೀಶ್ ಅಭಿಮಾನಿಗಳಲ್ಲಿ ಒಡಕು ಮೂಡಿಸಲು ಸಂಚು.?
Recommended Video
ಇಷ್ಟು ದಿನ ತಣ್ಣಗಿದ್ದ ಸ್ಯಾಂಡಲ್ ವುಡ್ ಇದೀಗ ಹೊಸ ವಿವಾದಕ್ಕೆ ಸಾಕ್ಷಿ ಆಗಿದೆ. ಕನ್ನಡದ ಇಬ್ಬರು ದಿಗ್ಗಜ ನಟರ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಅಭಿಮಾನಿಗಳ ಕಿತ್ತಾಟಕ್ಕೆ ಡಾ.ರಾಜ್ ಕಲಾಭವನ ವೇದಿಕೆ ಆಗಿದೆ.
ಹೌದು, ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಿನಿಮಾ ಕಲಾವಿದರ ಭವನಕ್ಕೆ 'ಡಾ.ರಾಜ್ ಕುಮಾರ್ ಭವನ' ಅಂತ ನಾಮಕರಣ ಮಾಡಿರುವುದು ನಿಮಗೆಲ್ಲ ಗೊತ್ತೇ ಇದೆ. ಈಗ ಇದೇ ಸ್ಥಳ ವಿವಾದದ ಕೇಂದ್ರಬಿಂದುವಾಗಿದೆ.
''ಕಲಾವಿದರ ಭವನಕ್ಕೆ ಡಾ.ರಾಜ್ ಕುಮಾರ್ ಬದಲು ಅಂಬರೀಶ್ ಹೆಸರಿಡಲಾಗುತ್ತಿದೆ'' ಅಂತ ಯಾರು ಸುದ್ದಿ ಹಬ್ಬಿಸಿದರೋ, ಗೊತ್ತಿಲ್ಲ. ಆದ್ರೆ, ಈ ಸುಳ್ಳು ಸುದ್ದಿಯನ್ನೇ ನಿಜ ಅಂತ ನಂಬಿ ಡಾ.ರಾಜ್ ಕುಮಾರ್ ಅಭಿಮಾನಿಗಳು ಬೇಸರಗೊಂಡರು. ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದರು.
'ಡಾ.ರಾಜ್ ಕುಮಾರ್ ಭವನ'ದಲ್ಲಿರುವ ಒಂದು ಆಡಿಟೋರಿಯಂಗೆ ಮಾತ್ರ ರೆಬೆಲ್ ಸ್ಟಾರ್ ಅಂಬರೀಶ್ ಹೆಸರಿಡುತ್ತಿದ್ದೇವೆ ಅಂತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸ್ಪಷ್ಟ ಪಡಿಸಿದ್ದಾರೆ. ಇದನ್ನ ಡಾ.ರಾಜ್ ಕುಮಾರ್ ಅಭಿಮಾನಿಗಳ ಒಕ್ಕೂಟ ವಿರೋಧಿಸಿ ಪತ್ರ ಬರೆದಿದೆ. ಡಾ.ರಾಜ್ ಮತ್ತು ಅಂಬರೀಶ್ ಅಭಿಮಾನಿಗಳಲ್ಲಿ ಒಡಕು ಮೂಡಿಸಲು ಕೆಲವರು ವ್ಯವಸ್ಥಿತ ಸಂಚು ರೂಪಿಸುತ್ತಿದ್ದಾರೆ ಎಂದು ಡಾ.ರಾಜ್ ಕುಮಾರ್ ಅಭಿಮಾನಿಗಳ ಒಕ್ಕೂಟ ಆರೋಪಿಸಿದೆ. ಮುಂದೆ ಓದಿರಿ...

ಯಾರ ಹೆಸರನ್ನೂ ಇಡಬೇಡಿ.!
'ಡಾ.ರಾಜ್ ಕುಮಾರ್ ಭವನ'ದಲ್ಲಿರುವ ಒಂದು ಆಡಿಟೋರಿಯಂಗೆ ಅಂಬರೀಶ್ ಹೆಸರಿಡಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದಿದೆ ಡಾ.ರಾಜ್ ಕುಮಾರ್ ಅಭಿಮಾನಿಗಳ ಒಕ್ಕೂಟ. ''ಡಾ.ರಾಜ್ ಕುಮಾರ್ ಕಲಾಭವನದ ಯಾವುದೇ ಅಂತಸ್ತುಗಳಿಗೆ ಬೇರೆ ಯಾವುದೇ ನಟರ ಹೆಸರುಗಳನ್ನು ಇಡಬಾರದು'' ಎಂದು ವಿ.ತ್ಯಾಗರಾಜ್, ಟಿ.ನಾರಾಯಣ್, ಹೊನ್ನೇಗೌಡ ನೇತೃತ್ವದ ಡಾ.ರಾಜ್ ಕುಮಾರ್ ಅಭಿಮಾನಿಗಳ ಒಕ್ಕೂಟ ಮನವಿ ಸಲ್ಲಿಸಿದೆ.

ಆಕ್ರೋಶಕ್ಕೆ ಗುರಿಯಾಗುತ್ತೀರಿ..
''ಹಾಗೊಂದು ವೇಳೆ ಬೇರೆ ನಟ ಹೆಸರು ಇಟ್ಟಿದ್ದೇ ಆದಲ್ಲಿ, ಅಣ್ಣಾವ್ರ ಆಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗುತ್ತೀರಿ. ಕಲಾಭವನದ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು. ಮುಂದಾಗುವ ಅನಾಹುತಕ್ಕೆ ನೀವೇ ಹೊಣೆ'' ಎಂದು ಕಲಾಭವನಕ್ಕೆ ನೀಡಿರುವ ಪತ್ರದಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಒಕ್ಕೂಟ ಎಚ್ಚರಿಕೆ ನೀಡಿದೆ.

ಸಂಚು ಮಾಡುತ್ತಿದ್ದಾರಾ.?
ಡಾ.ರಾಜ್ ಕುಮಾರ್ ಮತ್ತು ಅಂಬರೀಶ್ ಅಭಿಮಾನಿಗಳ ನಡುವೆ ಒಡಕು ಮೂಡಿಸಲು ಕೆಲ ಕಿಡಿಗೇಡಿಗಳು ಸಂಚು ರೂಪಿಸುತ್ತಿದ್ದಾರೆ. ಪ್ರತಿ ದಿನ ಒಂದಲ್ಲಾ ಒಂದು ಹೇಳಿಕೆಗಳನ್ನು ಕೊಟ್ಟು ಕುತಂತ್ರ ಮಾಡುತ್ತಿದ್ದಾರೆ. ಕಲಾಭವನಕ್ಕೆ ಸಂಬಂಧ ಪಡದ ಕಿಡಿಗೇಡಿಗಳನ್ನು ದೂರವಿಡಿ ಅಂತ ಪತ್ರದಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಒಕ್ಕೂಟ ತಿಳಿಸಿದೆ.

ಮುಂದೇನಾಗುತ್ತೋ.?
ನವೆಂಬರ್ 24 ರಂದು ಆಡಿಟೋರಿಯಂಗೆ ಅಂಬರೀಶ್ ಹೆಸರಿಡಲಾಗುವುದು ಅಂತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ತಿಳಿಸಿದ್ದಾರೆ. ಇತ್ತ ಡಾ.ರಾಜ್ ಕುಮಾರ್ ಕಲಾಭವನದಲ್ಲಿ ಬೇರೆ ಯಾರ ಹೆಸರನ್ನು ಇಡಕೂಡದು ಅಂತ ಅಣ್ಣಾವ್ರ ಅಭಿಮಾನಿಗಳು ಮನವಿ ಸಲ್ಲಿಸಿದೆ. ಒಂದು ವೇಳೆ ಇಟ್ಟರೆ, ಪ್ರತಿಭಟನೆ-ವಿವಾದ ಗ್ಯಾರೆಂಟಿ. ಹೀಗಾಗಿ, ಮುಂದೇನಾಗುತ್ತೋ ಕಾದು ನೋಡಬೇಕು.


Click it and Unblock the Notifications











