ಹೋರಾಟಕ್ಕೆ ಸಿದ್ಧವಾದ ರಾಜ್ಕುಮಾರ್-ವಿಷ್ಣುವರ್ಧನ್ ಅಭಿಮಾನಿಗಳು
ಡಾ.ರಾಜ್ಕುಮಾರ್ ಮತ್ತು ವಿಷ್ಣುವರ್ಧನ್ ಪರಸ್ಪರ ಆತ್ಮೀಯವಾಗಿದ್ದರು. ಆದರೆ ಅವರಿಬ್ಬರ ಅಭಿಮಾನಿಗಳ ನಡುವೆ ಸದಾ ಒಂದು ಶೀಥಲ ಸಮರ. ಆಗಾಗ್ಗೆ ಗಲಾಟೆಗಳು ನಡೆಯುತ್ತಲೇ ಇದ್ದವು. ಅದೀಗ ಈಗ ಇತಿಹಾಸ.
ಈಗ ಇಬ್ಬರು ಮೇರು ನಟರು ಅಗಲಿದ್ದಾರೆ. ಅವರ ಅಭಿಮಾನಿಗಳು ಅವರನ್ನು ಮರೆತಿಲ್ಲ. ಈಗಲೂ ರಾಜ್ಕುಮಾರ್, ವಿಷ್ಣುವರ್ಧನ್ ಹುಟ್ಟುಹಬ್ಬದಂದು ಅಭಿಮಾನಿಗಳು ಹಬ್ಬ ಆಚರಿಸುತ್ತಾರೆ. ಇದೀಗ ಬಹುತೇಕ ಮೊದಲನೇ ಬಾರಿಗೆ ಈ ಇಬ್ಬರು ನಟರ ಅಭಿಮಾನಿಗಳು ಒಂದಾಗುತ್ತಿದ್ದಾರೆ. ಒಂದಾಗಿ ಹೋರಾಟಕ್ಕೆ ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿ ಹಲವೆಡೆ ಡಾ.ರಾಜ್ಕುಮಾರ್ ಹಾಗೂ ವಿಷ್ಣುವರ್ಧನ್ರ ಪುತ್ಥಳಿಗಳಿವೆ. ಆದರೆ ಇದೀಗ ಆ ಪುತ್ಥಳಿಗಳನ್ನು ತೆರವುಗೊಳಿಸಲು ಬಿಬಿಎಂಪಿ ಮುಂದಾಗಿದೆ. ರಾಜ್ಕುಮಾರ್, ವಿಷ್ಣುವರ್ಧನ್ ಮಾತ್ರವೇ ಅಲ್ಲದೆ ಶಂಕರ್ನಾಗ್, ಅಂಬರೀಶ್ ಇನ್ನೂ ಹಲವು ಪ್ರಮುಖ ನಾಯಕರ, ಮುಂಖಡರ ಪುತ್ಥಳಿಗಳನ್ನು ತೆಗೆಯಲಾಗುತ್ತಿದೆ. ಇದಕ್ಕೆ ಆಯಾ ನಟರ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ಹೋರಾಟದ ಮುಂದಿನ ಸಾಲಿನಲ್ಲಿ ರಾಜ್ಕುಮಾರ್ ಹಾಗೂ ವಿಷ್ಣುವರ್ಧನ್ ಅಭಿಮಾನಿಗಳಿದ್ದಾರೆ.

ನ್ಯಾಯಾಲಯದ ಆದೇಶದಂತೆ ಬಿಬಿಎಂಪಿಯು ಪುತ್ಥಳಿಗಳ ತೆರವಿಗೆ ಮುಂದಾಗಿದೆ. ಹಾಗಾಗಿ ಅಭಿಮಾನಿಗಳು ಸಹ ಸಂಕಷ್ಟಕ್ಕೆ ಸಿಲುಕಿದ್ದು, ತಮ್ಮ ಹೋರಾಟ ಹೇಗಿರಬೇಕು ಎಂಬ ರೂಪು ರೇಷೆಗಳನ್ನು ಮಾಡಿಕೊಂಡು ಘೋಷಿಸುತ್ತೇವೆ ಎಂದಿದ್ದಾರೆ. ''ನ್ಯಾಯಾಲಯದ ಆದೇಶದ ಬಗ್ಗೆ ನಮ್ಮ ಗೌರವವಿದೆ ಆದರೆ ಅದರ ಹೊರತಾಗಿಯೂ ರಾಜ್ಕುಮಾರ್, ವಿಷ್ಣುವರ್ಧನ್ ಹಾಗೂ ಇತರ ನಾಯಕರ, ಮುಖಂಡರ ಪುತ್ಥಳಿ ಉಳಿಸಿಕೊಳ್ಳುವುದು ಸಹ ಜವಾಬ್ದಾರಿಯಾಗಿದೆ ಎಂದು ರಾಜ್-ವಿಷ್ಣು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಡಾ.ರಾಜ್ಕುಮಾರ್ ಅಭಿಮಾನಿಗಳು ಫಿಲಂ ಛೇಂಬರ್ಗೆ ಭೇಟಿ ನೀಡಿ ಪ್ರತಿಭಟನೆ ನಡೆಸಿ ಮನವಿ ಪತ್ರವೊಂದನ್ನು ನೀಡಿದ್ದರು. ಡಾ.ರಾಜ್ಕುಮಾರ್ ನಟಿಸಿದ್ದ ಐಕಾನಿಕ್ ಸಿನಿಮಾಗಳ ಹೆಸರನ್ನು ಮರುಬಳಕೆಯನ್ನು ವಿರೋಧಿಸಿ ಈ ಪ್ರತಿಭಟನೆ ನಡೆದಿತ್ತು. ಮನವಿ ಪತ್ರ ಸ್ವೀಕರಿಸಿದ ಸಾ.ರಾ.ಗೋವಿಂದು ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ್ದರು. ಅಷ್ಟೇ ಅಲ್ಲದೆ, ''ಈಗ ರಾಜ್ಕುಮಾರ್ ಅಭಿಮಾನಿಗಳು ಬಂದಿದ್ದಾರೆ ಮುಂದೆ ವಿಷ್ಣುವರ್ಧನ್, ಶಂಕರ್ ನಾಗ್ ಹಾಗೂ ಇತರ ನಾಯಕರ ಅಭಿಮಾನಿಗಳು ಬರುತ್ತಾರೆ'' ಎಂದು ಹೇಳಿದ್ದರು.


Click it and Unblock the Notifications











