ತ್ರಿಡಿಯಲ್ಲಿ ಮೂಡಿಬರಲಿದೆ ಅಣ್ಣಾವ್ರ 'ಬಬ್ರುವಾಹನ'
ನಟ ಸಾರ್ವಭೌಮ ಡಾ.ರಾಜ್ ಕುಮಾರ್ ದ್ವಿಪಾತ್ರಾಭಿನಯದ ಅಮೋಘ 'ಬಬ್ರುವಾಹನ' (1977) ಚಿತ್ರ ತ್ರಿಡಿಯಲ್ಲಿ ಮೂಡಿಬರಲು ಸಿದ್ಧವಾಗುತ್ತಿದೆ. ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ ಈ ಪೌರಾಣಿಕ ಚಿತ್ರವನ್ನು ತ್ರಿಡಿಗೆ ರೂಪಾಂತರಿಸುವ ಕೆಲಸ ಭರದಿಂದ ಸಾಗಿದೆ.
ಕೆ.ಸಿ.ಎನ್ ಚಂದ್ರಶೇಖರ್ ನಿರ್ಮಾಣದ ಈ ಚಿತ್ರದ ಪಾತ್ರವರ್ಗದಲ್ಲಿ ಅಣ್ಣಾವ್ರ ಜೊತೆಗೆ ಬಿ.ಸರೋಜಾ ದೇವಿ, ಕಾಂಚನಾ, ಜಯಮಾಲಾ, ಶನಿಮಹದೇವಪ್ಪ, ವಜ್ರಮುನಿ, ತೂಗುದೀಪ ಶ್ರೀನಿವಾಸ್, ಶಕ್ತಿ ಪ್ರಸಾದ್, ರಾಜಾನಂದ ಸೇರಿದಂತೆ ಮುಂತಾದ ಕಲಾವಿದರಿದ್ದರು. [ಅಣ್ಣಾವ್ರ 'ಕಸ್ತೂರಿ ನಿವಾಸ' ಮನಮೋಹಕ ವಿಡಿಯೋ]

ಈ ಸಮಯ ಆನಂದಮಯ, ಬರಸಿಡಿಲು ಬಡಿದಂತೆ, ಯಾರು ತಿಳಿಯರು ನಿನ್ನ ಭುಜಬಲದ, ನಿನ್ನ ಕಣ್ಣ ನೋಟದಲ್ಲಿ...ಹಾಡುಗಳು ಇಂದಿಗೂ ಚಿತ್ರರಸಿಕರ ತನುಮನಗಳನ್ನು ತಣಿಸುತ್ತಿವೆ. ಈ ಚಿತ್ರ ತ್ರಿಡಿಯಲ್ಲಿ ಮೂಡಿಬರುತ್ತಿದ್ದು ಅಣ್ಣಾವ್ರ ದ್ವಿಪಾತ್ರಾಭಿನಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಲ್ಲುವಂತಾಗಿದೆ.
ಇದೇ ನವೆಂಬರ್ 7ಕ್ಕೆ ವರ್ಣರಂಜಿತ 'ಕಸ್ತೂರಿ ನಿವಾಸ' ಚಿತ್ರ ತೆರೆಕಾಣುತ್ತಿದೆ. ಇದರ ಜೊತೆಗೆ ವೀರಕೇಸರಿ, ಶ್ರೀ ರಾಘವೇಂದ್ರ ಮಹಾತ್ಮೆ ಚಿತ್ರಗಳನ್ನು ವರ್ಣಮಯವಾಗಿಸುವ ಕೆಲಸ ಭರದಿಂದ ಸಾಗಿದೆ. ಅಣ್ಣಾವ್ರ ಕಪ್ಪುಬಿಳುಪು ಚಿತ್ರಗಳನ್ನು ಬಣ್ಣದಲ್ಲಿ ನೋಡುವ ಸೌಭಾಗ್ಯವನ್ನು ನಿರ್ಮಾಪಕ ಕೆಸಿಎನ್ ಮೋಹನ್ ಮಾಡುತ್ತಿದ್ದಾರೆ. (ಏಜೆನ್ಸೀಸ್)


Click it and Unblock the Notifications











