Dr Rajkumar Death Anniversary: ಇಂದು ಡಾ.ರಾಜ್ಕುಮಾರ್ ಪುಣ್ಯ ಸ್ಮರಣೆ, ಅಣ್ಣಾವ್ರು ಇಲ್ಲದೆ ಕಳೆದವು 16 ವರ್ಷ
ಇಂದು ವರನಟ ಡಾ ರಾಜ್ಕುಮಾರ್ ಪುಣ್ಯಸ್ಮರಣೆ. 16 ವರ್ಷಗಳ ಹಿಂದೆ ಇದೇ ದಿನ ಕನ್ನಡ ನಾಡಿನ ಜನತೆಗೆ ಅಣ್ಣಾವ್ರು ಇನ್ನಿಲ್ಲವೆಂಬ ಆಘಾತಕಾರಿ ಸುದ್ದಿ ಬಡಿದಪ್ಪಳಿಸಿತ್ತು.
ಅಣ್ಣಾವ್ರು ಇನ್ನಿಲ್ಲವಾಗಿ 16 ವರ್ಷಗಳು ಕಳೆದಿವೆ. ಪ್ರತಿ ಏಪ್ರಿಲ್ 12 ಕ್ಕೆ ಒಂದೊಂದು ವರ್ಷ ಏರುತ್ತಲೇ ಹೋಗುತ್ತದೆ, ಆದರೆ ಕನ್ನಡ ಸಿನಿ ಪ್ರೇಮಿಗಳ ಮನದಿಂದ ತುಸುವೂ ದೂರವಾಗಿಲ್ಲ. 16, 60 ವರ್ಷವಾದರೂ ಅಣ್ಣಾವ್ರ ಮೇಲಿನ ಪ್ರೀತಿ, ದೊಡ್ಮನೆ ಮೇಲಿನ ಗೌರವ ಅಚಲವಾಗಿ ಉಳಿಯಲಿದೆ.
ಅಣ್ಣಾವ್ರ ಪುಣ್ಯಸ್ಮರಣೆಯ ದಿನವಾದ ಇಂದು ದೊಡ್ಮನೆ ಕುಟುಂಬ ಕಂಠೀರವ ಸ್ಟುಡಿಯೋಕ್ಕೆ ಭೇಟಿ ನೀಡಿ ತಂದೆಯವರ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಜೊತೆಯಲ್ಲಿಯೇ ಮಲಗಿರುವ ಪಾರ್ವತಮ್ಮ, ಪುನೀತ್ ರಾಜ್ ಕುಮಾರ್ ಅವರಿಗೂ ಪೂಜೆ ಸಲ್ಲಿಸಲಿದ್ದಾರೆ. ಕಳೆದ ಕೆಲ ವರ್ಷಗಳ ಪುಣ್ಯ ಸ್ಮರಣೆಗಿಂತಲೂ ಈ ವರ್ಷದ ಪುಣ್ಯ ಸ್ಮರಣೆ ಹೆಚ್ಚು ನೋವನ್ನು ನೀಡಲಿದೆ. ಏಕೆಂದರೆ ಈ ಪುಣ್ಯ ಸ್ಮರಣೆಗೆ ಪುನೀತ್ ರಾಜ್ಕುಮಾರ್ ಇಲ್ಲ.

16 ವರ್ಷಗಳ ಹಿಂದೆ ಡಾ.ರಾಜ್ಕುಮಾರ್ ಅವರು ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದಾಗ ರಾಜ್ಯದೆಲ್ಲೆಡೆ ಕೋಲಾಹಲ ಎದ್ದಿತ್ತು. ಬೆಂಗಳೂರಿನಲ್ಲಂತೂ ಅಭಿಮಾನಿಗಳು ನೋವಿನಿಂದ ಹುಚ್ಚರೇ ಆಗಿದ್ದರು. ಪರಿಸ್ಥಿತಿಯನ್ನು ಅಂದಾಜಿಸಲು ಪೊಲೀಸರು ವಿಫಲವಾದರು ಹಾಗಾಗಿ ಅನೇಕ ಅಹಿತಕರ ಘಟನೆಗಳು ಸಹ ನಡೆದವು. ಅದೊಂದು ಕರಾಳ ಇತಿಹಾಸ.
ಡಾ.ರಾಜ್ಕುಮಾರ್ ಹಾಕಿಕೊಟ್ಟ ಆದರ್ಶಗಳನ್ನು ಪಾಲಿಸುತ್ತಾ ದೊಡ್ಮನೆ ಕುಟುಂಬ ಮುಂದೆ ಸಾಗುತ್ತಿದೆ. ಡಾ.ರಾಜ್ಕುಮಾರ್ ಅವರ ಮಕ್ಕಳ ಜೊತೆ ಈಗ ಮೊಮ್ಮಕ್ಕಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಣ್ಣಾವ್ರ ಅಭಿಮಾನಿಗಳನ್ನು ಅವರಂತೆ ಮನರಂಜಿಸಲು ಸಾಧ್ಯವಾಗದಿದ್ದರೂ ತಕ್ಕ ಮಟ್ಟಿನ ಪ್ರಯತ್ನವನ್ನಂತೂ ಮಾಡುತ್ತಿದ್ದಾರೆ.
ಡಾ.ರಾಜ್ಕುಮಾರ್ ಅವರ ಮೂವರು ಪುತ್ರರತ್ನರಲ್ಲಿ ಒಂದು ರತ್ನವನ್ನು ಕನ್ನಡಿಗರು ಈಗಾಗಲೇ ಕಳೆದುಕೊಂಡಿದ್ದಾಗಿದೆ. ನಗುವಿನ ಸರದಾರ ಪುನೀತ್ ರಾಜ್ಕುಮಾರ್ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಹಠಾತ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ನಟ ರಾಘವೇಂದ್ರ ರಾಜ್ಕುಮಾರ್ ಪಾರ್ಶ್ವವಾಯುವಿಗೆ ತುತ್ತಾಗಿ ದೈಹಿಕ ಕ್ಷಮತೆ ಕಳೆದುಕೊಂಡಿದ್ದಾರೆ. ಆದರೂ ನಟನೆಯನ್ನು ಬಿಟ್ಟಿಲ್ಲ. ಈಗಲೂ ಮನೆ ಬಾಗಿಲಿಗೆ ಬಂದ ಉತ್ಸಾಹಿ ಸಿನಿಮಾ ತಂಡಗಳನ್ನು ಹಾಗೆಯೇ ವಾಪಸ್ ಕಳಿಸಿಲ್ಲ.
ಇನ್ನು ಶಿವರಾಜ್ ಕುಮಾರ್ ಈಗಾಗಲೇ ಒಮ್ಮೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆದರೂ ನಿಶ್ಯಕ್ತ ಹೃದಯವನ್ನಿಟ್ಟುಕೊಂಡೆ ಕುಣಿಯುತ್ತಾ, ಹಾಡುತ್ತಾ, ಆಡುತ್ತಾ ಜನರನ್ನು ರಂಜಿಸುತ್ತಿದ್ದಾರೆ. ಏನೇ ಆಗಲಿ ಅಭಿಮಾನಿಗಳ ಮನರಂಜಿಸಬೇಕು ಎಂಬ ಡಾ.ರಾಜ್ಕುಮಾರ್ ಆದರ್ಶನವನ್ನು ದೈಹಿಕ ಕ್ಷಮತೆ ಮೀರಿ ಪಾಲಿಸುತ್ತಿದ್ದಾರೆ ಅಣ್ಣಾವ್ರ ಮಕ್ಕಳು.


Click it and Unblock the Notifications











