ಡಾ.ರಾಜ್ಕುಮಾರ್ ಕಂಚಿನ ಪುತ್ಥಳಿ ಕಳವು: ಇಬ್ಬರ ಬಂಧನ
ಮಹಾತ್ಮಾ ಗಾಂಧಿ ಬಳಿಕ ಅತಿ ಹೆಚ್ಚು ರಸ್ತೆಗಳಿಗೆ ಡಾ ರಾಜ್ಕುಮಾರ್ ಹೆಸರೇ ಇರುವುದೆನ್ನಲಾಗುತ್ತದೆ. ರಸ್ತೆಗೆ ಹೆಸರು ಮಾತ್ರವಲ್ಲ ರಾಜ್ಕುಮಾರ್ ಪುತ್ಥಳಿಗಳು ಸಹ ಹಲವು ಕಡೆಗಳಲ್ಲಿ ಕಾಣಲು ಸಿಗುತ್ತವೆ.
ಕೆಲವು ಅಭಿಮಾನಿಗಳಂತೂ ಕಂಚಿನ ಪ್ರತಿಮೆಗಳನ್ನೇ ಮಾಡಿ ರಸ್ತೆಯಲ್ಲಿಟ್ಟಿದ್ದಾರೆ. ಆದರೆ ಇದೀಗ ಬೆಂಗಳೂರಿನಲ್ಲಿ ಡಾ. ರಾಜ್ಕುಮಾರ್ ಅವರ ಕಂಚಿನ ಪುತ್ಥಳಿಯನ್ನು ಯಾರೊ ದುಷ್ಕರ್ಮಿಗಳು ಕಳವು ಮಾಡಿದ್ದಾರೆ.
ಬೆಂಗಳೂರಿನ ಲುಂಬಿನಿ ಗಾರ್ಡನ್ ಒಳಗೆ ಡಾ ರಾಜ್ಕುಮಾರ್ ಅವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಿ ಇಡಲಾಗಿತ್ತು. ಕಳೆದ ಎರಡು ದಿನಗಳಿಂದ ಕಂಚಿನ ಪ್ರತಿಮೆ ಕಾಣುತ್ತಿಲ್ಲ. ಪುತ್ಥಳಿಯನ್ನು ಯಾರೋ ದುಷ್ಕರ್ಮಿಗಳು ಕಳವು ಮಾಡಿದ್ದಾರೆ.

ರಾಜ್ಕುಮಾರ್ ಅವರ ಕಂಚಿನ ಪುತ್ಥಳಿ ಕಳುವಾಗಿರುವ ಬಗ್ಗೆ ಅರಣ್ಯಾಧಿಕಾರಿಯೊಬ್ಬರು ನಗರದ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ನಡೆಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳು ಕಂಚಿನ ಪ್ರತಿಮೆಯನ್ನು ಕದ್ದು ಹಣಕ್ಕೆ ಗುಜರಿ ಅಂಗಡಿಗೆ ಮಾರಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರಿನಲ್ಲಿ ನಟರ ಪುತ್ಥಳಿ ವಿಷಯ ಆಗಾಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ಕೆಲವು ದಿನಗಳ ಹಿಂದಷ್ಟೆ ವಿಷ್ಣುವರ್ಧನ್ ಪುತ್ಥಳಿ ತೆರವು ಮಾಡಿದ ವಿಷಯ ತೀವ್ರ ಚರ್ಚೆಯಾಗಿ ರಾಜ್ಕುಮಾರ್ ಹಾಗೂ ವಿಷ್ಣುವರ್ಧನ್ ಅಭಿಮಾನಿಗಳ ನಡುವೆ ವೈಮನಸ್ಯಕ್ಕೆ ಕಾರಣವಾಗಿತ್ತು. ಕೊನೆಗೆ ನಟ ಅನಿರುದ್ಧ ಹಾಗೂ ಇತರ ವಿಷ್ಣು ಅಭಿಮಾನಿಗಳು ಸೇರಿದಂತೆ ವಿಷ್ಣುವರ್ಧನ್ ಪುತ್ಥಳಿಯನ್ನು ಅದೇ ಸ್ಥಳದಲ್ಲಿ ಸ್ಥಾಪಿಸಿದರು.
ಬಳಿಕೆ ಕೆಲವು ತಿಂಗಳ ಹಿಂದಷ್ಟೆ ಬಿಬಿಎಂಪಿಯು ನಗರದಲ್ಲಿರುವ ಎಲ್ಲ ಪುತ್ಥಳಿಗಳನ್ನು ತೆರವು ಮಾಡಲು ಮುಂದಾಗಿತ್ತು. ಆದರೆ ಇದಕ್ಕೆ ರಾಜ್ಕುಮಾರ್ ಹಾಗೂ ವಿಷ್ಣುವರ್ಧನ್ ಅಭಿಮಾನಿಗಳು ಜಂಟಿಯಾಗಿ ವಿರೋಧ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಬಿಬಿಎಂಪಿಯು ಪುತ್ಥಳಿಗಳನ್ನು ತೆರವು ಮಾಡಬಾರದೆಂದು ಪ್ರತಿಭಟನೆ ಸಹ ಮಾಡಿದರು. ಬಳಿಕ ಬಿಬಿಎಂಪಿ ಆ ಯೋಚನೆ ಕೈಬಿಟ್ಟಿತು. ಆದರೆ ಇನ್ನುಮುಂದೆ ಹೊಸ ಪುತ್ಥಳಿ ಸ್ಥಾಪನೆ ಮಾಡುವಂತಿಲ್ಲವೆಂದು ಎಚ್ಚರಿಕೆ ನೀಡಿತು.


Click it and Unblock the Notifications











