'ಕಾಟೇರ' ಮೂಲಕ ದೊಡ್ಮನೆ ಕುಡಿ ಚಿತ್ರರಂಗಕ್ಕೆ ಎಂಟ್ರಿ: ಟ್ವಿಸ್ಟ್ ಕೊಡುತ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಸೂರಜ್ ಪಾತ್ರ
ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಚಿತ್ರಕ್ಕೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಎಲ್ಲಾ ವಿಭಾಗದಲ್ಲೂ ಚಿತ್ರಕ್ಕೆ ಒಳ್ಳೆ ಅಂಕಗಳು ಸಿಗುತ್ತಿವೆ. ಅದ್ಧೂರಿ ಮೇಕಿಂಗ್, ಕಲಾವಿದರ ಪರ್ಫಾರ್ಮನ್ಸ್, ತರುಣ್ ನಿರ್ದೇಶನ ಎಲ್ಲವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಫ್ಯಾಮಿಲಿ ಆಡಿಯನ್ಸ್ನ ಸಿನಿಮಾ ದೊಡ್ಡಮಟ್ಟದಲ್ಲಿ ಸೆಳೆಯುವ ಸುಳಿವು ಸಿಗುತ್ತಿದೆ.
'ಕಾಟೇರ' ಚಿತ್ರದಲ್ಲಿ ಒಂದಕ್ಕಿಂತ ಒಂದು ಪಾತ್ರ ಹೈಲೆಟ್ ಎನಿಸಿಕೊಳ್ಳುತ್ತದೆ. ದರ್ಶನ್ ಮಾತ್ರವಲ್ಲ ನಾಯಕಿಯಾಗಿ ಆರಾಧನಾ, ನಾಯಕನ ಅಕ್ಕನಾಗಿ ಶ್ರುತಿ, ಭಾವನಾಗಿ ಕುಮಾರ್ ಗೋವಿಂದ್, ತಾಯಿಯಾಗಿ ಪದ್ಮಾ ವಾಸಂತಿ, ಆಪ್ತನಾಗಿ ಬಿರಾದಾರ್ ಹೀಗೆ ಎಲ್ಲಾ ಪಾತ್ರಗಳು ಪ್ರೇಕ್ಷಕರ ನೆನಪಿನಲ್ಲಿ ಉಳಿಯುತ್ತವೆ. ಇನ್ನು ಊರಿನ ಜಮೀನ್ದಾರನಾಗಿ ಜಗಪತಿ ಬಾಬು, ಗೌಡನಾಗಿ ಕಾಳೇಗೌಡ, ಶಾನುಭೋಗನಾಗಿ ಅವಿನಾಶ್ ಹೀಗೆ ಆಯಾ ಪಾತ್ರಗಳಿಗೆ ಸೂಕ್ತರಾಗುವ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜೊತೆಗೆ ಒಳ್ಳೆ ನಟನೆ ಹೊರ ತೆಗೆಸಿದ್ದಾರೆ.

ಇನ್ನು 'ಕಾಟೇರ' ಚಿತ್ರದ ಮೂಲಕ ಮೂವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಮೂವರು ಕೂಡ ಸಿನಿಮಾ ಹಿನ್ನೆಲೆ ಇರುವ ಕುಟುಂಬದಿಂದ ಬಂದವರು ಎನ್ನುವುದು ವಿಶೇಷ. ಕನಸಿನ ರಾಣಿ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ಒಳ್ಳೆ ಅಂಕ ಗಿಟ್ಟಿಸಿಕೊಂಡಿದ್ದಾರೆ. ಇನ್ನು 'ಕಾಟೇರ'ನ ಟೀನೇಜ್ ಸನ್ನಿವೇಶಗಳಲ್ಲಿ ದರ್ಶನ್ ಸಹೋದರಿ ಪುತ್ರ ಚಂದು ಕಾಣಿಸಿಕೊಂಡಿದ್ದಾರೆ. ಸಣ್ಣ ಝಲಕ್ನಲ್ಲಿ ಹೀಗೆ ಬಂದು ಹಾಗೆ ಹೋಗುತ್ತಾರೆ.
'ಕಾಟೇರ' ಚಿತ್ರದ ಮೂಲಕ ದೊಡ್ಮನೆ ಕುಡಿ ಕೂಡ ಚಿತ್ರರಂಗಕ್ಕೆ ಬಂದಿದ್ದಾರೆ. ಅದು ಮತ್ಯಾರು ಅಲ್ಲ ಸೂರಜ್ ಕುಮಾರ್(ಧ್ರುವನ್). ಚಿತ್ರದಲ್ಲಿ ಶ್ಯಾನುಭೋಗರ ಮಗನ ಪಾತ್ರದಲ್ಲಿ ಸೂರಜ್ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ಇದು ಒಂದು ಸಣ್ಣ ಪಾತ್ರ ಎನಿಸಿದರೂ ಕೊನೆಗೆ ಇದೇ ಪಾತ್ರ ಕಥೆಗೆ ದೊಡ್ಡ ಟ್ವಿಸ್ಟ್ ಕೊಡುತ್ತದೆ. ಅದು ಏನು ಎನ್ನುವುದನ್ನು ನೀವು ತೆರೆಮೇಲೆ ನೋಡಬೇಕು. ಪಾರ್ವತಮ್ಮ ರಾಜ್ಮಾರ್ ಸಹೋದರನ ಪುತ್ರ ಸೂರಜ್ 6 ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಂಭಿರವಾಗಿ ಗಾಯಗೊಂಡಿದ್ದರು.

'ಭಗವಾನ್ ಶ್ರೀ ಕೃಷ್ಣ ಪರಮಾತ್ಮ' ಸೇರಿದಂತೆ ಒಂದೆರಡು ಸಿನಿಮಾಗಳಲ್ಲಿ ಸೂರಜ್ ಹೀರೊ ಆಗಿ ನಟಿಸಿದ್ದರು. ಆದರೆ ಯಾವುದೇ ಸಿನಿಮಾ ಬಿಡುಗಡೆ ಆಗಿರಲಿಲ್ಲ. 'ಕಾಟೇರ' ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದು ಅದೇ ಸಿನಿಮಾ ಮೊದಲು ಬಿಡುಗಡೆಯಾಗಿದೆ. ಈ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇದೇ ವರ್ಷ ಜೂನ್ 24ರ ಸಂಜೆ ಅಪಘಾತದಲ್ಲಿ ಸೂರಜ್ಗೆ ಪೆಟ್ಟಾಗಿತ್ತು. ಬೈಕ್ನಲ್ಲಿ ಊಟಿಗೆ ತೆರಳುತ್ತಿದ್ದ ವೇಳೆ ಬೇಗೂರಿನಿಂದ ಹಿರಿಕಾಟಿ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿ ಮೈಸೂರು ಕಡೆಯಿಂದ ಬರುತ್ತಿದ್ದ ಸೂರಜ್ ಬೈಕ್ಗೆ ಡಿಕ್ಕಿ ಹೊಡೆದಿತ್ತು. ಅದೇ ಟಿಪ್ಪರ್ ಸೂರಜ್ ಕಾಲಿನ ಮೇಲೆ ಹರಿದು ಬಲಗಾಲು ಸಂಪೂರ್ಣ ನಜ್ಜುಗುಜ್ಜಾಗಿತ್ತು.
ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿತ್ತು. ಸೂರಜ್ ಕುಮಾರ್ ತಮ್ಮ ಹೆಸರನ್ನು ಧ್ರುವನ್ ಎಂದು ಬದಲಿಸಿಕೊಂಡು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಮೈಸೂರಿನಲ್ಲಿ ಡಿಗ್ರಿ ಮುಗಿಸಿ ಚಿತ್ರರಂಗಕ್ಕೆ ಬರಲು ತಯಾರಿ ನಡೆಸುತ್ತಿದ್ದಾರೆ. ನೀನಾಸಂನಲ್ಲಿ ನಟನೆ, ಚೆನೈನಲ್ಲಿ ಡ್ಯಾನ್ಸ್ ಮತ್ತು ಫೈಟಿಂಗ್ ತರಬೇತಿ ಪಡೆದಿದ್ದಾರೆ.
ಪಾವರ್ತಮ್ಮ ರಾಜ್ಕುಮಾರ್ ಸೋದರ ಸಂಬಂಧಿ ಆಗಿದ್ದರೂ ಸೂರಜ್ ಕುಮಾರ್ ಮೈಸೂರಿನಲ್ಲಿ ಹುಟ್ಟಿ ಬೆಳೆದವರು. ಹಾಗಾಗಿ ನಟ ದರ್ಶನ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಸೂರಜ್ ಸಿನಿ ಆರಂಗೇಟ್ರಂಗೆ ದರ್ಶನ್ ಬೆಂಬಲವಾಗಿ ನಿಂತಿದ್ದಾರೆ. ಇದೀಗ 'ಕಾಟೇರ' ಚಿತ್ರದ ಮೂಲಕ ಚಿತ್ರರಂಗಕ್ಕೆ ಧ್ರುವನ್ ಬಂದಿದ್ದಾರೆ. ಇತ್ತೀಚೆಗೆ ಸಿನಿಮಾ ವೀಕ್ಷಿಸಿದ್ದ ವಿಜಯಲಕ್ಷ್ಮಿ ದರ್ಶನ್ ಕೂಡ ಸೂರಜ್ ಕುಮಾರ್ ಡೆಬ್ಯುಗೆ ಶುಭಾಶಯ ತಿಳಿಸಿದ್ದರು.


Click it and Unblock the Notifications











