ಅಪ್ಪು ನೆನಪು ಶಾಶ್ವತಗೊಳಿಸಲು ಕುಟುಂಬದವರಿಂದ ಮಹತ್ವದ ಹೆಜ್ಜೆ
ಪುನೀತ್ ರಾಜ್ಕುಮಾರ್ ಅಗಲಿ ಎರಡು ತಿಂಗಳಾಗುತ್ತಾ ಬಂದಿದೆ. ಆದರೆ ಅಪ್ಪು ನೆನಪು ಇನ್ನೂ ಕಾಡುತ್ತಲೇ ಇದೆ.
ಪುನೀತ್ ರಾಜ್ಕುಮಾರ್ ಅಗಲಿಕೆಯಿಂದ ಇಡೀಯ ರಾಜ್ಯಕ್ಕೆ ಶೂನ್ಯ ಭಾವ ಕಾಡಿತ್ತು. ಅವರ ಕುಟುಂಬಕ್ಕಂತೂ ಇದು ವಿಧಿ ಕೊಟ್ಟ ಅತಿದೊಡ್ಡ ಹೊಡೆತ. ಆದರೆ ಕುಟುಂಬ ದುಃಖದಿಂದ ಕುಮುಲಿಹೋಗಿಲ್ಲ ಬದಲಿಗೆ ತಮ್ಮ ಪ್ರೀತಿಯ ಪುನೀತ್ ರಾಜ್ಕುಮಾರ್ ನೆನಪನ್ನು ಶಾಶ್ವತಗೊಳಿಸಲು ಮುಂದಡಿ ಇಟ್ಟಿದೆ.
ಪುನೀತ್ ರಾಜ್ಕುಮಾರ್ ಅವರಿಗೆ ತಮ್ಮ ತಂದೆಯ ಊರು ಗಾಜನೂರೆಂದರೆ ಬಹಳ ಪ್ರೀತಿ. ನಿಧನ ಹೊಂದುವ ಮೂರು ತಿಂಗಳ ಮುಂದೆ ಶಿವರಾಜ್ ಕುಮಾರ್ ದಂಪತಿ ಹಾಗೂ ಪುನೀತ್ ರಾಜ್ಕುಮಾರ್ ದಂಪತಿ ಗಾಜನೂರಿಗೆ ಭೇಟಿ ನೀಡಿ ಅಲ್ಲಿ ಸಮಯ ಕಳೆದಿದ್ದರು. ನಿಧನವಾದ ದಿನವೂ ಸಹ ಗಾಜನೂರಿಗೆ ಹೋಗುವ ಯೋಜನೆ ಇತ್ತು.

ಪುನೀತ್ಗೆ ಗಾಜನೂರಿನ ಆ ಸಣ್ಣ ಗುಡಿಸಲು ಮನೆಯ ಮೇಲಿದ್ದ ಪ್ರೀತಿಯನ್ನು ಬಲ್ಲ ಕುಟುಂಬ ಆ ಮನೆಯನ್ನು ಅಭಿವೃದ್ಧಿಪಡಿಸಿ ಮ್ಯೂಸಿಯಂ ಮಾಡಲು ಚಿಂತನೆ ನಡೆಸಿದೆ. ಡಾ.ರಾಜ್ಕುಮಾರ್ ಹುಟ್ಟಿದ ಆ ಮನೆ ರಾಜ್ಯದ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿ ನೆಲೆನಿಲ್ಲಲಿ ಅಲ್ಲಿ ಪುನೀತ್ ನೆನಪಿಗೂ ಜಾಗ ಸಿಗಲಿ ಎಂಬುದು ಕುಟುಂಬದ ಯೋಜನೆ.
ಮೂರು ತಿಂಗಳ ಹಿಂದೆ ಪುನೀತ್ ರಾಜ್ಕುಮಾರ್, ಗಾಜನೂರಿಗೆ ಭೇಟಿ ಕೊಟ್ಟಾಗ ಆ ಗುಡಿಸಲು ಮನೆಗೆ ಹೋಗಿ ಅಲ್ಲಿ ಫೋಟೊ ತೆಗೆಸಿಕೊಂಡಿದ್ದರು. ಗಾಜನೂರಿನ ತಮ್ಮ ಮನೆಗೆ ಹೋಗಿದ್ದರು. ತಾವು ಚಿಕ್ಕಂದಿನಲ್ಲಿ ಆಡಿ ಬೆಳೆದ ಗೆಳೆಯರನ್ನು ಭೇಟಿಯಾಗಿ ಅವರೊಡನೆ ಸೆಲ್ಫಿ ತೆಗೆಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಒಬ್ಬ ತಾತನ ಚಿತ್ರವನ್ನು ಸಹ ಪುನೀತ್ ಹಂಚಿಕೊಂಡಿದ್ದರು. ಕಳೆದ ಬಾರಿ ಊರಿಗೆ ಹೋಗಿದ್ದಾಗ ಅಪ್ಪಾಜಿ ಹುಟ್ಟಿದ ಮನೆಯನ್ನು ಅಭಿವೃದ್ಧಿ ಪಡಿಸುವುದಾಗಿ ಊರ ಜನರಲ್ಲಿ ಹೇಳಿದ್ದರಂತೆ.
ಇದೀಗ ಅಪ್ಪು ಆಸೆಯಂತೆ ಅಪ್ಪಾಜಿ ಹುಟ್ಟಿದ ಗುಡಿಸಲು ಮನೆಯ ದುರಸ್ತಿ ಕಾರ್ಯ ನಡೆಯುತ್ತಿದೆ. ಕೆಲಸ ಪೂರ್ಣವಾದ ಮೇಲೆ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಅವರುಗಳು ಆಗಮಿಸಿ ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಅವರಿಗೆ ಸಂಬಂಧಿಸಿದ ವಸ್ತುಗಳನ್ನು ಇಟ್ಟು ಮ್ಯೂಸಿಯಂ ರೀತಿ ಮಾಡಲಿದ್ದಾರಂತೆ. ಆ ನಂತರ ಆ ಮನೆಯನ್ನು ಅಭಿಮಾನಿಗಳಿಗೆ ವೀಕ್ಷಣೆಗೆ ಬಿಡಲಾಗುತ್ತದೆ.
ಪುನೀತ್ ರಾಜ್ಕುಮಾರ್ ನಿಧನದ ಬಳಿಕ ಕುಟುಂಬಸ್ಥರು ಅಪ್ಪು ನೆನಪಲ್ಲಿ ಸಹಸ್ರಾರು ಅಭಿಮಾನಿಗಳಿಗೆ ಸಾಮೂಹಿಕವಾಗಿ ಭೋಜನ ಹಾಕಿಸಿದರು. ಅಪ್ಪು ಅಭಿಮಾನಿಗಳು ರಾಜ್ಯದಾದ್ಯಂತ ಅಪ್ಪು ನೆನಪಲ್ಲಿ ರಕ್ತದಾನ ಶಿಬಿರ, ನೇತ್ರದಾನ ಶಿಬಿರ, ಅನ್ನದಾನಗಳನ್ನು ಆಯೋಜಿಸಿದ್ದರು, ಈಗಲೂ ಆಯೋಜಿಸುತ್ತಲೇ ಇದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯು ಅಪ್ಪು ನೆನಪಲ್ಲಿ ಬೃಹತ್ ಕಾರ್ಯಕ್ರಮ ಮಾಡಿತು. ಕಿರುತೆರೆ ನಟರು, ತಂತ್ರಜ್ಞರು ಸೇರಿ ಅಪ್ಪು ಸ್ಮರಣಾರ್ಥ ಭಾವುಕ ಕಾರ್ಯಕ್ರಮ ಮಾಡಿದರು. ಇದೀಗ ಕುಟುಂಬದವರು ಸಹ ಅಭಿಮಾನಿಗಳಿಗಾಗಿಯೇ ಬೃಹತ್ ಕಾರ್ಯಕ್ರಮವನ್ನು ಮಾಡುವ ಇಚ್ಛೇಯಲ್ಲಿದ್ದಾರೆ. ಒಟ್ಟಿನಲ್ಲಿ ಅಪ್ಪು ನೆನಪನ್ನು ಶಾಶ್ವತವಾಗಿರಿಸಲು ಸಕಲ ಸಾಕಷ್ಟು ಕಾರ್ಯಕ್ರಮಗಳನ್ನು ಕುಟುಂಬದವರು ಮಾಡುತ್ತಿದ್ದಾರೆ.
ಈ ನಡುವೆ ಅಪ್ಪುವಿನ ಕನಸುಗಳನ್ನು ನನಸು ಮಾಡಲು ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಟೊಂಕಕಟ್ಟಿ ನಿಂತಿದ್ದು, ಪುನೀತ್ ಅವರ ಕನಸಿನ ಪಿಆರ್ಕೆ ಆಡಿಯೋ ಹಾಗೂ ಪ್ರೊಡಕ್ಷನ್ ಹೌಸ್ನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಅಪ್ಪುವಿನ ಕನಸಿನ ಪ್ರಾಜೆಕ್ಟ್ ಆಗಿದ್ದ 'ಗಂಧದ ಗುಡಿ' ಟ್ರಾವೆಲ್ ಸಿನಿಮಾದ ಟೀಸರ್ ಅನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಈಗಾಗಲೇ ಬಿಡುಗಡೆ ಮಾಡಿದ್ದು, ಸಿನಿಮಾವು 2022 ರಲ್ಲಿ ಬಿಡುಗಡೆ ಆಗಲಿದೆ. ಇದರ ಜೊತೆಗೆ ಪಿಆರ್ಕೆ ಪ್ರೊಡಕ್ಷನ್ ಹೌಸ್ನಿಂದ ನಿರ್ನಾಣ ಹಂದಲ್ಲಿದ್ದ 'ಮ್ಯಾನ್ ಆಫ್ ದಿ ಮ್ಯಾಚ್', 'ಫ್ಯಾಮಿಲಿ ಪ್ಯಾಕ್', 'ಓ2' ಸಿನಿಮಾಗಳನ್ನು ಸಹ ಮುಂದಿನ ವರ್ಷದಲ್ಲಿ ಬಿಡುಗಡೆ ಮಾಡಲಿದ್ದಾರೆ ಅಶ್ವಿನಿ.


Click it and Unblock the Notifications











