Drashan: 'ಕಾಟೇರ' ದರ್ಶನ್ ಬಾಯಲ್ಲಿ ಅಣ್ಣಾವ್ರ 'ಭಕ್ತ ಪ್ರಹ್ಲಾದ' ಡೈಲಾಗ್: ವೀಡಿಯೋ ಲೀಕ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ದಸರಾ ಹಬ್ಬದ ಸಂಭ್ರಮದಲ್ಲಿ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿ ಚಿತ್ರತಂಡ ಶುಭಾಶಯ ಕೋರಿದೆ. ಶಕ್ತಿ ದೇವತೆ ಎದುರು ಸಮಯಕ್ಕೆ ಸಿದ್ಧನಾಗಿ ಕುಳಿತ 'ಕಾಟೇರ'ನನ್ನು ಪೋಸ್ಟರ್ನಲ್ಲಿ ನೋಡಬಹುದು.
ತರುಣ್ ಸುಧೀರ್ ಬಹಳ ಸೊಗಸಾಗಿ 'ಕಾಟೇರ' ಸಿನಿಮಾ ಕೊಟ್ಟಿಕೊಡುತ್ತಿದ್ದಾರೆ. ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಈ ಆಕ್ಷನ್ ಎಂಟರ್ಟೈನರ್ ಸಿನಿಮಾ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆಯಿದೆ. ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು 2 ಹಾಡುಗಳನ್ನು ಮಾತ್ರ ಸೆರೆ ಹಿಡಿಯಬೇಕಿದೆ.

ಗಣೇಶ ಹಬ್ಬ, ದಸರಾ ಹಬ್ಬಕ್ಕೆ 'ಕಾಟೇರ' ಟೀಸರ್ ಬರುತ್ತೆ ಎಂದು ಅಭಿಮಾನಿಗಳು ಕಾದರು. ಆದರೆ ಸದ್ಯಕ್ಕೆ ಟೀಸರ್ ರಿಲೀಸ್ ಆಗಲ್ಲ ಅನ್ನೊದು ಗೊತ್ತಾಗುತ್ತಿದೆ. ರಾಜ್ಯೋತ್ಸವಕ್ಕೆ ಅಥವಾ ದೀಪಾವಳಿಗೆ 'ಕಾಟೇರ'ನ ಆರ್ಭಟದ ಟೀಸರ್ ಬರುವ ಸಾಧ್ಯತೆಯಿದೆ. ಜಗಪತಿ ಬಾಬು, ಶ್ರೀನಿವಾಸ್ ಮೂರ್ತಿ, ಬಿರಾದರ್, ಶ್ರುತಿ, ಕುಮಾರ್ ಗೋವಿಂದ್ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಚಿತ್ರದಲ್ಲಿ 70ರ ದಶಕದ ಕತೆ ಹೇಳಲಾಗ್ತಿದ್ದು ಅಂದಿನ ಕಾಲಘಟ್ಟ ಕಟ್ಟಿಕೊಡೋಕೆ ಚಿತ್ರತಂಡ ಬಹಳ ಶ್ರಮಿಸುತ್ತಿದೆ.
ಇನ್ನು ಸಿನಿಮಾ ಶೂಟಿಂಗ್ ವೇಳೆಯೇ ಫೋಟೊ, ವಿಡಿಯೋಗಳು ಲೀಕ್ ಆಗಿ ಚಿತ್ರತಂಡಕ್ಕೆ ಸಾಕಷ್ಟು ಸಮಸ್ಯೆಗಳು ಆಗುತ್ತಿರುತ್ತದೆ. ಸಿನಿಮಾ ಥಿಯೇಟರ್ಗೆ ಬರುವವರೆಗೂ ಇರುವ ಕುತೂಹಲ ಕಮ್ಮಿ ಆಗಿ ಬಿಡುತ್ತದೆ. ಈ ಹಿಂದೆ ನಟ ದರ್ಶನ್ ಸಿನಿಮಾಗಳಿಗೂ ಈ ರೀತಿ ಆಗಿದ್ದು ಇದೆ. ಇದೇ ಕಾರಣಕ್ಕೆ ತರುಣ್ ಸುಧೀರ್ ಬಹಳ ಮುತುವರ್ಜಿ ವಹಿಸಿ ಸಿನಿಮಾ ಚಿತ್ರೀಕರಣ ಮಾಡುತ್ತಾರೆ.
'ರಾಬರ್ಟ್' ಸಿನಿಮಾ ಚಿತ್ರೀಕರಣದ ವೇಳೆಯೂ ಸೆಟ್ಗೆ ಮೊಬೈಲ್ ಬ್ಯಾನ್ ಮಾಡಿದ್ದರು. 'ಕಾಟೇರ' ಸಿನಿಮಾ ವಿಚಾರದಲ್ಲೂ ಇದನ್ನು ಮುಂದುವರೆಸಿದ್ದರು. ಆದರೂ ಕೂಡ ದರ್ಶನ್ ಶೂಟಿಂಗ್ ಸೆಟ್ನಲ್ಲಿರುವ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗುತ್ತಲೇ ಇದೆ. ಇದೀಗ ದರ್ಶನ್ ಡೈಲಾಗ್ ಹೇಳುತ್ತಿರುವ ಸಣ್ಣ ವಿಡಿಯೋವೊಂದು ಲೀಕ್ ಆಗಿದೆ. ಅಚ್ಚರಿ ಅಂದರೆ ಅದರಲ್ಲಿ ದರ್ಶನ್ ಸೂಪರ್ ಹಿಟ್ 'ಭಕ್ತಪ್ರಹ್ಲಾದ' ಚಿತ್ರದ ಡೈಲಾಗ್ ಹೇಳುತ್ತಿರುವುದನ್ನು ನೋಡಬಹುದು.
1983ರಲ್ಲಿ ಬಂದ 'ಭಕ್ತಪ್ರಹ್ಲಾದ' ಚಿತ್ರದಲ್ಲಿ ಹಿರಣ್ಯ ಕಶಿಪು ಪಾತ್ರದಲ್ಲಿ ಡಾ. ರಾಜ್ಕುಮಾರ್ ಅಬ್ಬರಿಸಿದ್ದರು. ಪೌರಾಣಿಕ ಪಾತ್ರದಲ್ಲಿ ಅದ್ಭುತ ಅಭಿನಯ ಪ್ರದರ್ಶಿಸಿ ಪ್ರೇಕ್ಷಕರ ಮನಗೆದ್ದಿದ್ದರು. ಹಿರಣ್ಯ ಕಶಿಪು ತನ್ನ ವೈರಿ ಎಂದು ಭಾವಿಸಿದ ಹರಿ(ವಿಷ್ಣು)ಗೆ ಆತನ ಮಗ ಪ್ರಹ್ಲಾದನೇ ಬಹಳ ನಿಷ್ಟನಾಗಿರುತ್ತಾನೆ. ಭಕ್ತನಾಗಿರುತ್ತಾನೆ. ಇದು ತಂದೆಗೆ ಇಷ್ಟವಿರುವುದಿಲ್ಲ. ಇದೇ ಕಾರಣಕ್ಕೆ ಮಗನನ್ನು ಕೊಲ್ಲಲು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ತನ್ನ ಅಸಹಾಯಕತೆಯಿಂದ ಚಿಂತಾಕ್ರಾಂತನಾದಾಗ ಹರಿಣ್ಯ ಕಶಿಪು ಹೇಳುವ ಡೈಲಾಗ್ ಸೂಪರ್ ಹಿಟ್ ಆಗಿತ್ತು.
ರಂಗಭೂಮಿ ಹಿನ್ನೆಲೆಯ ಅಣ್ಣಾವ್ರು, ಹಿರಣ್ಯ ಕಶಿಪು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದರು. ಅಚ್ಚ, ಸ್ವಚ್ಚ ಕನ್ನಡದಲ್ಲಿ ಅಣ್ಣಾವ್ರ ಸಂಭಾಷಣೆ ಕೇಳುವುದೇ ಚೆಂದ. 'ಅಥಳ ವಿತಳ ಪಾತಾಳ' ಎಂದು ಶುರುವಾಗುವ ಈ ಡೈಲಾಗ್ ಈಗ 'ಕಾಟೇರ ಚಿತ್ರದಲ್ಲಿದೆ. ದರ್ಶನ್ ಈ ಡೈಲಾಗ್ ಹೇಳುತ್ತಿರುವ ಮೊಬೈಲ್ ವಿಡಿಯೋ ಲೀಕ್ ಆಗಿದೆ. ದರ್ಶನ್ ಡೈಲಾಗ್ ಕೇಳಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಅಣ್ಣಾವ್ರ ಬಳಿಕ ಕನ್ನಡದಲ್ಲಿ ಪೌರಾಣಿಕ, ಐತಿಹಾಸಿಕ ಪಾತ್ರಗಳಿಗೆ ದರ್ಶನ್ ಹೇಳಿಮಾಡಿಸಿದ ನಟ ಎಂದು ಸಾಕಷ್ಟು ಜನ ಹೇಳುತ್ತಾರೆ. 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಹಾಗೂ 'ಕುರುಕ್ಷೇತ್ರ' ಅದಕ್ಕೆ ಉತ್ತಮ ಉದಾಹರಣೆ. ಇನ್ನು 'ರಾಬರ್ಟ್' ಚಿತ್ರದಲ್ಲಿ ದರ್ಶನ್ 'ಪ್ರಪಂಚ ರಾವಣ' ಡೈಲಾಗ್ ಹೇಳಿ ಗೆದ್ದಿದ್ದರು. 'ಕಾಟೇರ' ಚಿತ್ರದಲ್ಲಿ ಹಳ್ಳಿಯಲ್ಲಿ ನಾಟಕಗಳನ್ನು ಮಾಡುವ ಸನ್ನಿವೇಶಗಳಿವೆ. ಅಂತಹ ಸನ್ನಿವೇಶದಲ್ಲಿ ದರ್ಶನ್ ಹೀಗೆ ಹಿರಣ್ಯ ಕಶಿಪು ಡೈಲಾಗ್ ಹೇಳಿದ್ದಾರೆ ಎನ್ನಲಾಗ್ತಿದೆ. ಯಾವುದಕ್ಕೂ ಸಿನಿಮಾ ರಿಲೀಸ್ ಆಗುವರೆಗೂ ಕಾದು ನೋಡಬೇಕು.


Click it and Unblock the Notifications











