ಅಪ್ಪಾಜಿಗೂ ಪಾಲಿಟಿಕ್ಸ್ ಬೇಕು, ಇಲ್ಲಾಂದ್ರೆ ನನಗೆ ಯಾಕೆ ; 'ರಾಜ'ಕೀಯದ ಬಗ್ಗೆ ಶಿವಣ್ಣ ಮಾತು..!
ಕನ್ನಡದ ವರನಟ ಡಾ. ರಾಜ್ ಕುಮಾರ್ ಅವರ ಬಗ್ಗೆ ನಿಮಗೆ ಗೊತ್ತು. ಡಾ. ರಾಜ್ ಅಂದ್ರೇ ಸರಳತೆಯ ಸಾಹುಕಾರ. ಡಾ.ರಾಜ್ ಅಂದ್ರೇ ವಿವಿಧ ಪಾತ್ರಗಳ ಹರಿಕಾರ. ಡಾ.ರಾಜ್ ಅಂದ್ರೆ ಸಂಸ್ಕಾರ. ಡಾ.ರಾಜ್ ಅಂದ್ರೆ ಸುಸಂಸ್ಕ್ರತ ವಿಚಾರ. ಅಣ್ಣಾವ್ರ ಬಗ್ಗೆ ಹೇಳಲು ಪದಗಳು ಸಾಲಲ್ಲ. ಯಾಕಂದ್ರೆ ಪದಗಳಿಗೂ ನಿಲುಕದ ವ್ಯಕ್ತಿತ್ವ ಡಾ.ರಾಜ್ ಅವ್ರದ್ದು. ಇಂಥ ಡಾ.ರಾಜ್ ಕುಮಾರ್ ಮನಸು ಮಾಡಿದ್ದರೆ ಯಾವತ್ತೋ ರಾಜಕೀಯಕ್ಕೆ ಬರಬಹುದಿತ್ತು. ಆದರೆ ಅಣ್ಣಾವ್ರು ರಾಜಕೀಯಕ್ಕೆ ಬರಲಿಲ್ಲ. ಸಿನಿಮಾದಲ್ಲಿಯೇ ನೆಮ್ಮದಿಯನ್ನ ಕಂಡು ಕೊಂಡರು.
ಅಣ್ಣಾವ್ರಂತೆ ಅವರ ಮಕ್ಕಳು ಕೂಡ ರಾಜಕೀಯದಿಂದ ಅಂತರವನ್ನ ಕಾಪಾಡಿಕೊಂಡೆ ಬಂದವರು. ಆದರೆ ಶಿವಣ್ಣ ಪತ್ನಿ ಗೀತಾ ಹಾಗಲ್ಲ. ಯಾಕೆಂದರೆ ಶಿವಣ್ಣ ರಕ್ತದಲ್ಲಿ ಕಲೆ ಇರುವಂತೆ, ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರ ರಕ್ತದಲ್ಲಿ ರಾಜಕೀಯ ಇದೆ. ಹೀಗಾಗಿಯೇ ಪತ್ನಿಯ ಪರ ಶಿವಣ್ಣ ಪ್ರಚಾರ ಮಾಡ್ತಾರೆ. ಅವರ ಕನಸಿಗೆ ಜೊತೆಯಾಗುತ್ತಾನೇ ಬಂದಿದ್ದಾರೆ. ಈ ಬಾರಿ ಕೂಡ ಚುನಾವಣೆಯ ಕಣದಲ್ಲಿ ಪತ್ನಿಯ ಜೊತೆ ಶಿವಣ್ಣ ನಿಂತಿದ್ದಾರೆ. ಮನದ ಮಾತುಗಳನ್ನ ಹಂಚಿಕೊಳ್ಳುತ್ತಿದ್ದಾರೆ.

ಹೌದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೀತಾ ಶಿವರಾಜ್ಕುಮಾರ್ ಅವರು ಕಣಕ್ಕೆ ಇಳಿಯುತ್ತಿರುವ ವಿಚಾರ ನಿಮಗೆ ಗೊತ್ತಿರಬೇಕು. ಸದ್ಯದ ವಿಚಾರ ಏನೆಂದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ಪ್ರದರ್ಶಕರು ಹಾಗು ವಿತರಕರು ಸೇರಿದಂತೆ ಚಿತ್ರರಂಗಕ್ಕೆ ಸಂಬಂಧಿಸಿದ ಹಲವಾರು ಮಂದಿ, ಡಾ.ಶಿವರಾಜ್ ಕುಮಾರ್ ಹಾಗೂ ಗೀತಾ ಅವರನ್ನ ಭೇಟಿ ಮಾಡಿದ್ದಾರೆ. ಇದೇ ಸಮಯದಲ್ಲಿ ಪ್ರದರ್ಶಕರು, ನಿರ್ಮಾಪಕರು, ವಿತರಕರು, ಎಲ್ಲವೂ ಸೇರಿ ಕುಟುಂಬ ಆಗುತ್ತೆ. ಆ ಇಡೀ ಕುಟುಂಬ ಇವತ್ತು ಗೀತಾ ಪರವಾಗಿ ನಿಂತಿದ್ದಕ್ಕೆ ನಮಗೆ ಹೆಮ್ಮೆ ಆಗುತ್ತದೆ. ಇದಕ್ಕೆ ನಾವು ಧನ್ಯ ಅಂದಿದ್ದಾರೆ
ಇನ್ನೂ ಮನಸ್ಸು ಇದ್ದಲ್ಲಿ ಮಾರ್ಗ ಎಂಬ ಮಾತನ್ನ ನಾನು ನಂಬುತ್ತೇನೆ, ಗೀತಾಗೂ ಕೂಡ ಅದನ್ನೇ ಹೇಳುತ್ತೇನೆ ಎಂದಿರುವ ಶಿವಣ್ಣ, ಅನುಭವ ಅನ್ನೋದು ಮುಖ್ಯವಲ್ಲ. ಹೊಸತನವೇ ಅನುಭವ ಅಂದಿದ್ದಾರೆ. ಇವರು ಕೆಲಸ ಮಾಡುತ್ತಾರೆ ಎಂಬ ಭರವಸೆ ಜನರಿಗೆ ಬಂದರೆ ಅನುಭವ ಎಂಬುದು ಗಣನೆಗೆ ಬರುವುದಿಲ್ಲ ಎಂದು ಹೇಳಿದ ಶಿವಣ್ಣ ಒಳ್ಳೆಯ ಹೃದಯದಿಂದ ನಾವು ಕೆಲಸ ಮಾಡುತ್ತೇವೆ ಎಂಬುದನ್ನು ಜನರಿಗೆ ಹೇಳಬೇಕು ಎಂದು ಕೂಡ ಹೇಳಿದ್ದಾರೆ.

ಇದೇ ಸಮಯದಲ್ಲಿ ಅಪ್ಪಾಜಿಗೆ ರಾಜಕೀಯ ಆಗುತ್ತಿರಲಿಲ್ಲ ಅಂತ ಕೆಲವರು ಹೇಳ್ತಾರೆ ಆದರೆ ವಾಸ್ತವದಲ್ಲಿ ಹಾಗೇನೂ ಇರಲಿಲ್ಲ ಎಂದು ಶಿವಣ್ಣ ಹೇಳಿದ್ದಾರೆ. ಯಾವುದೇ ಸಮಾರಂಭ ಆಗಲಿ, ಯಾವುದೇ ಮುಖ್ಯಮಂತ್ರಿ ಆಗಲಿ, ಮೊದಲು ದೊಡ್ಮನೆಗೆ ಬಂದು ಅಪ್ಪಾಜಿ ಜೊತೆ ಮಾತಾಡುತ್ತಿದ್ದರು. ಎಂದ ಶಿವಣ್ಣ ಅಪ್ಪಾಜಿಗೂ ಪಾಲಿಟಿಕ್ಸ್ ಬೇಕು, ರಾಜಕೀಯದ ವ್ಯಕ್ತಿಗಳು ಬೇಕು. ಇಲ್ಲಾಂದ್ರೆ ನನಗೆ ಯಾಕೆ ಬಂಗಾರಪ್ಪನ ಮಗಳು ತರಬೇಕು ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ. ಅವರು ರಾಜಕೀಯವನ್ನು ಯಾವಾಗಲೂ ತಪ್ಪು ಅಂತ ಹೇಳಿಲ್ಲ ಎಂದಿದ್ದಾರೆ ಶಿವಣ್ಣ.
ವೈಯಕ್ತಿಕವಾಗಿ ಅಪ್ಪಾಜಿಗೆ ರಾಜಕೀಯ ಇಷ್ಟ ಆಗುತ್ತಿರಲಿಲ್ಲ ಅಷ್ಟೇ ಹೊರತು ಬೇರೆನೂ ಇಲ್ಲ ಎಂದಿರುವ ಶಿವಣ್ಣ ತಮ್ಮ ಕೆಲಸ ನಟನೆ ಅಂತ ಅಪ್ಪಾಜಿ ಹೇಳಿದ್ದರು. ಅದನ್ನೇ ನಮಗೆ ಬಳುವಳಿಯಾಗಿ ಕೊಟ್ಟರು. ನನಗೂ ರಾಜಕೀಯಕ್ಕೆ ಬನ್ನಿ ಅಂತ ಕೆಲವರು ಕರೆದಿದ್ದರು ನಾನು ಬೇಡ ಅಂದೆ ಎಂದಿದ್ದಾರೆ

ಆದರೆ ಗೀತಾಗೆ ಹಾಗಲ್ಲ. ಅವರ ತಂದೆಯ ರಕ್ತನೂ ಇದೆ. ಅದೊಂದು ಜವಾಬ್ದಾರಿ ಅವರಿಗೆ ಇದೆ. ಬರೀ ಗಂಡಸರಿಗೆ ಮಾತ್ರ ಜವಾಬ್ದಾರಿ ಇರಬೇಕಾ? ಹೆಣ್ಮಕ್ಕಳಿಗೆ ಇರಬಾರದಾ? ಕರ್ನಾಟಕದ ಮಹಿಳೆಯರು ರಾಜಕೀಯದಲ್ಲಿ ಕಡಿಮೆ ಜನ ಇದ್ದಾರೆ. ಈಗ ಹೆಣ್ಮಕ್ಕಳೇ ಸ್ಟ್ರಾಂಗ್ ಗುರು ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ. ಯಾಕೆಂದರೆ, ನಾವಿರೋದೇ ಭೂಮಿತಾಯಿ ಮೇಲೆ. ಇದನ್ನು ಮದರ್ ಲ್ಯಾಂಡ್ ಅಂತಾರೆ. ಯಾರೂ ಫಾದರ್ ಲ್ಯಾಂಡ್ ಅನ್ನಲ್ಲ ಎಂದಿದ್ದಾರೆ
ಒಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೀತಾ ಅವರು ಕಣಕ್ಕಿಳಿದ ಹಿನ್ನೆಲೆ ರಾಜಕೀಯದ ಬಗ್ಗೆ ತಮ್ಮ ಅಭಿಪ್ರಾಯವನ್ನ ಡಾ.ಶಿವರಾಜ್ ಕುಮಾರ್ ತಿಳಿಸಿದ್ದಾರೆ. ಎಂದಿನಂತೆ ಶಿವಣ್ಣ ಅವರ ಈ ಅಭಿಪ್ರಾಯದ ಬಗ್ಗೆಯೂ ಚರ್ಚೆ ಈಗ ಆರಂಭವಾಗಿದೆ


Click it and Unblock the Notifications











