ಬೆಳ್ಳಿತೆರೆಯಲ್ಲಿ 'ಅಪ್ಪು' ಸಿನಿಮಾ ನೋಡಲು ನನಗೆ ಧೈರ್ಯ ಇಲ್ಲ- ಶಿವಣ್ಣ..!
ರಾಮ- ಲಕ್ಷ್ಮಣ-ಭರತರಂತಿದ್ದರು ರಾಜ್ ಸೋದರರು. ಆದರೆ ಈ ಸೋದರರ ನಡುವಿನ ಬಂಧವನ್ನ ವಿಧಿ ಒಡೆದು ಹಾಕಿದೆ. ಈ ಮೂಲಕ ಕನಸೊಂದು ಅಪೂರ್ಣವಾಗಿಯೇ ಉಳಿದುಕೊಂಡಿದೆ. ಇವತ್ತು ಅಪ್ಪು ನಮ್ಮ ನಡುವೆ ಇಲ್ಲ. ಆದರೆ ಅವರ ನೆನಪುಗಳು ಸದಾ ಜೀವಂತ. ಈ ನೆನಪುಗಳಲ್ಲಿಯೇ ಬದುಕು ದೂಡುವ ಪ್ರಯತ್ನವನ್ನು ಅಭಿಮಾನಿಗಳು ಮಾಡುತ್ತಿದ್ದಾರೆ. ದೊಡ್ಮನೆಯ ಸದಸ್ಯರು ಕೂಡ ಮಾಡುತ್ತಿದ್ದಾರೆ. ಅಪ್ಪು 50ನೇ ಜಯಂತಿಯಂದು ಮನೆ ಮಗನನ್ನು ನೆನೆದು ಭಾವುಕರಾಗಿದ್ದಾರೆ. ಅಪ್ಪು ಇರಬೇಕಿತ್ತು ಎಂದು ಕಣ್ಣೀರು ಹಾಕಿದ್ದಾರೆ.
ಇಂದು ಅಪ್ಪು ಜಯಂತಿ ಹಿನ್ನೆಲೆ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಶಿವಣ್ಣ 50ನೇ ವರ್ಷದ ಹುಟ್ಟುಹಬ್ಬಕ್ಕೆ ಅಪ್ಪು ನಮ್ಮ ನಡುವೆ ಇರಬೇಕಿತ್ತು, ಆದರೆ ಅವನು ಇಲ್ಲ ಎಂಬ ಸತ್ಯದ ಅರಿವು ಆದಾಗ ತುಂಬಾ ದುಃಖ ಆಗುತ್ತೆ ಎಂದು ಹೇಳಿದ್ದಾರೆ. ಅವನ ಕೆಲಸಗಳಿಂದ, ವ್ಯಕ್ತಿತ್ವದಿಂದ, ಅಪ್ಪು ಅಜರಾರ ಆಗಿದ್ದಾನೆ, ಅಭಿಮಾನಿಗಳ ಮನಸಿನಲ್ಲಿದ್ದಾನೆ ಎಂದಿರುವ ಶಿವಣ್ಣ ಅಪ್ಪು ಇಲ್ಲೇ ನಮ್ಮ ಜೊತೆ ಎಲ್ಲೋ ಇದ್ದಾನೆ ಎಂದು ಅನ್ಸುತ್ತೆ ಎಂದು ಹೇಳಿದ್ದಾರೆ.

ಅಪ್ಪು ಹುಟ್ಟುಹಬ್ಬ ಅಂದರೆ ಹೇಳಲು ಸಾಕಷ್ಟಿದೆ, ಚಿಕ್ಕ ವಯಸ್ಸಿನಲ್ಲಿಯೇ ಸ್ಟಾರ್ಡಂ ತಗೊಂಡು ಬಂದವನು ಅವನು, ಹೀರೋ ಆಗಿ ದೊಡ್ಡ ಯಶಸ್ಸನ್ನು ಕಂಡವನು ಅವನು, ಚಿಕ್ಕವನಾಗಿದ್ದಾಗಲೇ ಜನರ ಮನಸು ಗೆದ್ದು ಸ್ಥಾನ ಪಡೆದವನು ಅವನು, ಇವತ್ತು ಅವನು ನಮ್ಮ ನಡುವೆ ಇಲ್ಲ ಎಂದು ಊಹಿಸಿಕೊಳ್ಳೋಕೆ ಭಾರೀ ಕಷ್ಟ ಆಗ್ತಿದೆ ಎಂದು ಹೇಳಿದ್ದಾರೆ ಶಿವಣ್ಣ.
ಇನ್ನು ಎಲ್ಲರಿಗೆ ಗೊತ್ತಿರುವಂತೆ ಪುನೀತ್ ರಾಜ್ ಕುಮಾರ್ ಅವರ 50ನೇ ಜಯಂತಿಯ ಪ್ರಯುಕ್ತ ಅಪ್ಪು ಚಿತ್ರ ಮರುಬಿಡುಗಡೆಯಾಗಿದೆ. ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಮ್ಯಾ, ರಕ್ಷಿತಾ, ರಾಘವೇಂದ್ರ ರಾಜ್ ಕುಮಾರ್ ಸೇರಿ ಚಿತ್ರರಂಗದ ಅನೇಕ ಹಿರಿಯರು ಮತ್ತು ಕಿರಿಯರು ಚಿತ್ರಮಂದಿರಕ್ಕೆ ತೆರಳಿ ಅಪ್ಪು ಚಿತ್ರವನ್ನು ನೋಡಿದ್ದಾರೆ. ಬೆಳ್ಳಿತೆರೆಯಲ್ಲಿ ಪುನೀತ್ ಅವರನ್ನು ಕಂಡು ಭಾವುಕರಾಗಿದ್ದಾರೆ. ಆದರೆ, ಶಿವಣ್ಣ ಮಾತ್ರ ಇಲ್ಲಿಯವರೆಗೆ ಅಪ್ಪು ಚಿತ್ರವನ್ನು ಮತ್ತೊಮ್ಮೆ ನೋಡಿಲ್ಲ.
ಈ ಕುರಿತು ಕೂಡ ಮಾತನಾಡಿರುವ ಶಿವಣ್ಣ ತಾವು ಯಾಕೆ ಇನ್ನು ಅಪ್ಪು ಚಿತ್ರ ನೋಡಿಲ್ಲ ಎನ್ನುವುದಕ್ಕೆ ಕಾರಣ ಕೊಟ್ಟಿದ್ದಾರೆ. ನನಗೆ ಅಪ್ಪು ಸಿನಿಮಾವನ್ನು ನೋಡೋಕೆ ಧೈರ್ಯ ಇಲ್ಲ ಎಂದು ಹೇಳಿದ್ದಾರೆ. ಚಿತ್ರಕ್ಕೆ ಅಪ್ಪು ಎನ್ನುವ ಟೈಟಲ್ ನೀಡಿದ್ದೇ ನಾನು, ಪುರಿ ಜಗನ್ನಾಥ್ ಜೊತೆ ಸೇರಿ ಮಾಡಿದ್ದ ಚಿತ್ರ ಅದು, ಈಗ ಆ ಹಳೆಯ ನೆನಪುಗಳೆಲ್ಲ ನನಗೆ ಕಾಡುತ್ತಿವೆ, ಸಿನಿಮಾ ನೋಡೋಕೆ ನನಗೆ ಧೈರ್ಯ ಇಲ್ಲ ಎಂದು ಹೇಳಿದ್ದಾರೆ. ಮುಂದುವರೆದು ಇವತ್ತು ಕೂಡ ಅಪ್ಪು ಚಿತ್ರವನ್ನು ಜನ ನೋಡುತ್ತಿದ್ದಾರೆ, ಹೊಗಳುತ್ತಿದ್ದಾರೆ ಎಂದಿರುವ ಶಿವಣ್ಣ 100 % ಅಪ್ಪು ಇದ್ದಾನೆ, ಎಲ್ಲಿಯೂ ಹೋಗಿಲ್ಲ ಎಂದು ಭಾವುಕರಾಗಿದ್ದಾರೆ.


Click it and Unblock the Notifications











