ಆರ್ಸಿಬಿ ವಿರುದ್ಧ ಕೆಎಲ್ ರಾಹುಲ್ ಸಂಭ್ರಮಾಚರಣೆ, ಹೇಳಿದ್ದೇನು ಶಿವಣ್ಣ ?
ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ, ಸ್ಯಾಂಡಲ್ವುಡ್ ಕಿಂಗ್, ಹೀಗೆ ಹತ್ತು ಹಲವು ಹೆಸರುಗಳಿಂದ ಕರೆಯಲ್ಪಡುವ ಸ್ಟಾರ್ ಡಾ.ಶಿವರಾಜ್ ಕುಮಾರ್ ಕಳೆದ ಮೂರುವರೆ ದಶಕಗಳಿಂದ ಕಲಾ ಸೇವೆಯನ್ನು ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಾ ಬಂದವರು. ತಂಅದೆಯಂತೆಯೇ ಅಭಿಮಾನಿಗಳಲ್ಲಿ ದೇವರನ್ನು ಕಂಡವರು .ಕ್ಲಾಸ್ - ಮಾಸ್ ಸೇರಿದಂತೆ ಯಾವ ಪಾತ್ರಕ್ಕಾದರೂ ಸೈ ಅನ್ನುವಂಥಾ ಮನಸ್ಥಿತಿಯನ್ನೊಂದಿರುವ ಅಪರೂಪದ ಸ್ಟಾರ್.
ಇನ್ನು ಡಾ.ಶಿವರಾಜ್ ಕುಮಾರ್ ಕೇವಲ ಆಕ್ಟರ್ ಮಾತ್ರವಲ್ಲ. ಒಳ್ಳೆಯ ಸ್ಪೋರ್ಟ್ಸ್ಮ್ಯಾನ್ ಕೂಡ ಹೌದು. ಅದರಲ್ಲಿಯೂ ಶಿವಣ್ಣಗೆ ಸಿನಿಮಾ ಹೊರತು ಪಡಿಸಿದರೆ ಕ್ರಿಕೆಟ್ನಲ್ಲಿ ವಿಪರೀತ ಆಸಕ್ತಿ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಸಮಯ ಸಿಕ್ಕಾಗೆಲ್ಲ ಶಿವಣ್ಣ ಮೈದಾನಕ್ಕೆ ಇಳಿದಿದ್ದು ಇದೆ. ಬ್ಯಾಟ್ ಬೀಸಿ ಆ ನಂತರ ಬೌಲಿಂಗ್ ಕೂಡ ಮಾಡಿದ್ದು ಇದೆ.

ಇಂಥಾ ಶಿವಣ್ಣ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಗ್ಗೆ ಮಾತನಾಡಿದ್ದಾರೆ.ಕೆ.ಎಲ್.ರಾಹುಲ್ ಗುಣಗಾನವನ್ನು ಮಾಡಿದ್ದಾರೆ. ಹೌದು, ಕನ್ನಡಿಗರ ಕಣ್ಮಣಿ ಡಾ.ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಮಾತನಾಡಿರುವ ಶಿವಣ್ಣ ಆರ್ಸಿಬಿ ಅಂದರೆ ಬೆಂಗಳೂರು ಹೀಗಾಗಿ ಆರ್ಸಿಬಿ ಅಂದರೆ ಪ್ರೀತಿ ಇದ್ದೇ ಇರುತ್ತೆ ಎಂದು ಹೇಳಿದ್ದಾರೆ. ಆಟದಲ್ಲಿ ಸೋಲು ಗೆಲುವು ಬರಲ್ಲ, ಆದರೆ ಏನೇ ಆಗಲಿ ಅಭಿಮಾನ ಮಾತ್ರ ಕಡಿಮೆಯಾಗಲ್ಲ ಅದು ಯಾವಾಗಲೂ ಇದ್ದೇ ಇರುತ್ತೆ ಎಂದು ಶಿವಣ್ಣ ಹೇಳಿದ್ದಾರೆ.
ಇನ್ನು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ ಅಬ್ಬರಿಸಿ ಬೊಬ್ಬಿರಿದ ನಂತರ ಕನ್ನಡಿಗ ಕೆಎಲ್ ರಾಹುಲ್ ನನ್ನ ಮಣ್ಣಿದು ಎಂದು ಸನ್ನೆ ಮಾಡಿದ್ದರು. 53 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್ ಬಾರಿಸಿ 93 ರನ್ ಬಾರಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಗೆಲ್ಲಿಸಿದ ಕೆಎಲ್ ರಾಹುಲ್ ಆ ನಂತರ ವೃತ್ತ ಬರೆದಿದ್ದರು. ಈ ಕುರಿತು ಕೂಡ ಮಾತನಾಡಿರುವ ಶಿವಣ್ಣ ಕೆ ಎಲ್ ರಾಹುಲ್ ನಮ್ಮವರು, ಕರ್ನಾಟಕದವರು, ಅವರು ಯಾವ ತಂಡಕ್ಕೆ ಆಡಿದರು ಕೂಡ ಅವರು ಕರ್ನಾಟಕದವರು ತಾನೇ ಎಂದು ಹೇಳಿದ್ದಾರೆ. ನನಗೆ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ತುಂಬಾ ಇಷ್ಟ, ಅವರು ಬ್ಯಾಟಿಂಗ್ ಮಾಡುವಾಗ ಅವರು ಔಟ್ ಆಗಲೇಬಾರದು ಎಂದುಕೊಳ್ಳುತ್ತಿರುತ್ತೇನೆ ಎಂದಿರುವ ಶಿವಣ್ಣ, ವಿರಾಟ್ ಕೊಹ್ಲಿ ಅವರಷ್ಟೇ ಚೆನ್ನಾಗಿ ಕೆ.ಎಲ್.ರಾಹುಲ್ ಬ್ಯಾಟಿಂಗ್ ಮಾಡುತ್ತಾರೆ ಎಂದು ಹೇಳಿದ್ದಾರೆ.
ಇನ್ನು ಎಲ್ಲರಿಗೆ ಗೊತ್ತಿರುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಲ್ಲಿಯವರೆಗೆ ಕಪ್ ಗೆದ್ದಿಲ್ಲ. ಪ್ರತಿ ಬಾರಿ ಈ ಸಲ್ ಕಪ್ ನಮ್ದೇ ಎಂದು ಕನ್ನಡಿಗರು ಘೋಷವಾಕ್ಯ ಕೂಗಿದ್ದೇ ಬಂತು. ಆದರೆ ಕಪ್ ಮಾತ್ರ ಬೆಂಗಳೂರಿಗೆ ಸಿಗಲೇ ಇಲ್ಲ. ಹಾಗಂಥ ಆರ್ಸಿಬಿ ಮೇಲಿನ ಅಭಿಮಾನ ಕೂಡ ಕಡಿಮೆಯಾಗಿಲ್ಲ. ಆ ಅಭಿಮಾನ ಎಲ್ಲರಲ್ಲಿ ಇನ್ನೂ ಹಾಗೇ ಇದೆ. ಕಡಿಮೆಯಾಗುವ ಬದಲು ಇನ್ನು ಹೆಚ್ಚಾಗುತ್ತಲೇ ಇದೆ. ಈ ಕುರಿತು ಕೂಡ ಮಾತನಾಡಿರುವ ಶಿವಣ್ಣ ಕಪ್ ಯಾರೇ ಗೆದ್ದರೂ ಕೂಡ ಅದು ಭಾರತದಲ್ಲಿಯೇ ಇರುತ್ತೆ, ಆದರೆ ನನಗೆ ಆರ್ಸಿಬಿ ಮಾತ್ರ ಯಾವಾಗಲೂ ನೆಚ್ಚಿನ ತಂಡ ಎಂದು ಹೇಳಿದ್ದಾರೆ. ಆರ್ಸಿಬಿ ಅಂದರೆ ಒಂದು ಪವರ್, ಆರ್ಸಿಬಿ ಕಂಡರೆ ಅದೇನೋ ಜೋಶ್ ಎಂದು ಹೇಳಿದ್ದಾರೆ.
ಅಂದ್ಹಾಗೇ ಮೊನ್ನೆ ಮೊನ್ನೆಯಷ್ಟೇ ಶಿವಣ್ಣ ಆರ್ಸಿಬಿ ಜೆರ್ಸಿ ಧರಿಸಿ ತಂಡವನ್ನು ಹುರಿದುಂಬಿಸಿದ್ದರು. ಈ 18 ವರ್ಷಗಳಲ್ಲಿ ಆರ್ಸಿಬಿ ಹೇಗೆ ಆಡಲಿ ನಾವು ಬೆಂಬಲಿಸಿದ್ದೇವೆ ಎಂದಿದ್ದ ಶಿವಣ್ಣ, 18ನೇ ಸೀಸನ್ನಲ್ಲಿ ಆರ್ಸಿಬಿಗೆ ಒಳ್ಳೆಯದಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದ್ದರು. ಮ್ಯಾಚ್ನ ಎಂಜಾಯ್ ಮಾಡಿ ಎಂದು ತಮ್ಮ ಅಭಿಮಾನಿಗಳಿಗೆ ಮತ್ತು ಕ್ರಿಕೆಟ್ ಪ್ರೇಮಿಗಳಿಗೆ ಕರೆಯನ್ನು ನೀಡಿದ್ದರು.


Click it and Unblock the Notifications











