ನಾನು ಬರ್ತ್ಡೇಗೆ ಇಲ್ಲದೇ ಇದ್ರೂ ನಿಮ್ಮ ಜೊತೆ ರಣಗಲ್ ಇರ್ತಾನೆ- ಡಾ.ಶಿವರಾಜ್ ಕುಮಾರ್...!
ಸದಾ ಒಂದಿಲ್ಲೊಂದು ಸಿನಿಮಾಗಳಲ್ಲಿ ಸಕ್ರಿಯರಾಗಿರುವ ಸಾಲು ಸಿನಿಮಾಗಳ ಸರದಾರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸದ್ಯ ಸ್ಯಾಂಡಲ್ ವುಡ್ ನ ಬ್ಯುಸಿಯೆಸ್ಟ್ ನಟ.
ನವ ನಟರನ್ನು ಬೆಚ್ಚಿ ಬೆರಗಾಗಿ ನೋಡುವಂತೆ ಮಾಡಬಲ್ಲ, ಎನರ್ಜಿಯಲ್ಲಿ ನಟನೆಯ ಚಾಪು ಮೂಡಿಸುವ ಶಿವಣ್ಣ ಜೊತೆ ಈ ಶುಕ್ರವಾರ ಹುಟ್ಟುಹಬ್ಬದ ನೆಪದಲ್ಲಿ ಒಂದು ಇಡೀ ದಿನ ಕಳಿಯಬೇಕು ಎಂದು ಅವರ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಈಗ ಆ ಆಸೆ ಬತ್ತಿ ಹೋಗಿದೆ. ಯಾಕೆಂದರೆ.. ಖುದ್ದು ಸಾಕ್ಷಾತ್ ಡಾ.ಶಿವರಾಜ್ ಕುಮಾರ್ ಅವರೇ ನಾನು ಮನೆಯಲ್ಲಿರಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಹೌದು, ತಮ್ಮ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಹುಟ್ಟುಹಬ್ಬಕ್ಕೂ ಮುನ್ನ ಡಾ.ಶಿವರಾಜ್ ಕುಮಾರ್ ತಮ್ಮ ನೆಚ್ಚಿನ ಅಭಿಮಾನಿಗಳಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. 'ಅಭಿಮಾನಿ ದೇವರುಗಳಿಗೆ, ಪ್ರತಿ ವರ್ಷ ನನ್ನ ಹುಟ್ಟುಹಬ್ಬ ದೊಡ್ಡ ಹಬ್ಬ ಆಗೋದು ನಿಮ್ಮ ಜೊತೆ ಕಳೆದಾಗ. ನೀವು ಅಕ್ಕರೆಯಿಂದ ಕೊಡೋ ಹಸ್ತಲಾಘವ, ಪ್ರೀತಿಯ ಅಪ್ಪುಗೆ, ನೀಡೋ ಆಶೀರ್ವಾದ ನಿಮ್ಮ ಶಿವುಗೆ ಶ್ರೀರಕ್ಷೆ. ಈ ವರ್ಷ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರೋದಕ್ಕೆ ಆಗುವುದಿಲ್ಲ, ಆದರೆ ವರ್ಷವಿಡೀ ಒಟ್ಟಿಗೆ ಪ್ರತಿ ದಿನ ಸೆಲೆಬ್ರೇಟ್ ಮಾಡೋಣ. ನಾನು ಹುಟ್ಟುಹಬ್ಬಕ್ಕೆ ಇಲ್ಲದೆ ಇದ್ರೂ ನಿಮ್ಮ ಜೊತೆ ಭೈರತಿ ರಣಗಲ್ ಇರ್ತಾನೆ, ಜುಲೈ 12 ರಂದು ಬೆಳಿಗ್ಗೆ 10:10 ಕ್ಕೆ, ನಿಮ್ಮ ಆಶೀರ್ವಾದ ಸದಾ ಇರಲಿ' ಎಂದಿದ್ದಾರೆ ಶಿವಣ್ಣ.
ಸಹಜವಾಗಿ ಶಿವಣ್ಣ ಅವರ ಈ ಮಾತುಗಳಿಂದ ಶಿವ ಸೈನ್ಯಕ್ಕೆ ಬೇಸರವಾಗಿದೆ. ಆದರೆ ಆ ಬೇಸರವನ್ನು ಹೊಗಲಾಡಿಸಲು ಡಾ.ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ರಾಶಿ..ರಾಶಿ.. ಉಡುಗೊರೆಗಳು ಈ ಶುಕ್ರವಾರ ಸಿಗಲಿವೆ. ಆ ಪೈಕಿ ಶಿವಣ್ಣ ಖುದ್ದು ಹೇಳಿರುವಂತೆಜುಲೈ 12ಕ್ಕೆ ಟೀಸರ್ ಸಮೇತ ಚಿತ್ರದ ರಿಲೀಸ್ ಡೇಟ್ ಘೋಷಣೆ ಆಗಲಿದೆ.
ಇನ್ನೂ ಶಿವಣ್ಣ ಡಾಲಿ ಧನಂಜಯ್ ಜೊತೆ ಉತ್ತರಕಾಂಡ ಚಿತ್ರದಲ್ಲಿ ಆಕ್ಟ್ ಮಾಡ್ತಿರುವುದು ನಿಮಗೆ ಗೊತ್ತಿರುವುದೇ. ನಾಳೆ ಉತ್ತರಕಾಂಡ ಚಿತ್ರದಿಂದ ಕೂಡ ಉಡುಗೊರೆ ಸಿಗುವ ನಿರೀಕ್ಷೆ ಇದೆ. ಈ ಮಧ್ಯೆ ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಹಾಗೂ ನಿರ್ಮಾಪಕ ಎಂ.ರಮೇಶ್ ರೆಡ್ಡಿ ನಿರ್ಮಾಣದ '45' ಸಿನಿಮಾದಲ್ಲಿ ಶಿವಣ್ಣನ ಖದರ್ ಹೇಗಿರಲಿದೆ ಎಂಬುದರ ಬಗ್ಗೆ ಫಸ್ಟ್ ಲುಕ್ ರಿಲೀಸ್ ಮಾಡಲು ಸಿದ್ಧತೆಯೂ ನಡೆದಿದೆ.
ಶಿವಣ್ಣ ಇತ್ತೀಚೆಗೆ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ರಾಮ್ಚರಣ್ ಜೊತೆ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಸಿನಿಮಾ ಚಿತ್ರೀಕರಣ ಇನ್ನು ಶುರುವಾಗಿಲ್ಲ. ಆದರೆ ಚಿತ್ರತಂಡ ಶಿವಣ್ಣನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು ಕೋರಬಹುದು. ಇನ್ನೂ ಕಾರ್ತಿಕ್ ಅದ್ವೈತ್ ನಿರ್ದೇಶನದ ಡಾ.ಶಿವರಾಜ್ ಕುಮಾರ್ ಅಭಿನಯದ 131ನೇ ಸಿನಿಮಾ ಕೂಡ ನಾಳೆ ಸಂಜೆ 05 ಘಂಟೆಗೆ ಘೋಷಣೆಯಾಗಲಿದೆ.

ಅಂದ್ಹಾಗೇ ದರ್ಶನ್ ಜೈಲಿನಲ್ಲಿದ್ದಾರೆ. ಇನ್ನೂ ದರ್ಶನ್ ಕನ್ನಡ ಚಿತ್ರರಂಗದ ಪ್ರಮುಖ ನಾಯಕ ಅನ್ನುವುದರಲ್ಲಿ ದೂಸ್ರಾ ಮಾತಿಲ್ಲ. ಹೀಗಾಗಿ ತಮ್ಮ ಜೊತೆ ಇರುವ, ತಮ್ಮ ಕುಟುಂಬದ ಕಲಾವಿದ ಜೈಲಿನಲ್ಲಿರುವಾಗ ಹುಟ್ಟುಹಬ್ಬ ಆಚರಣೆ ಸೂಕ್ತವಲ್ಲ ಎಂಬ ಕಾರಣಕ್ಕೆ ಕನ್ನಡ ಚಿತ್ರರಂಗದ ಸ್ಟಾರ್ಸ್ ಹುಟ್ಟುಹಬ್ಬ ಆಚರಣೆ ಬ್ರೇಕ್ ಹಾಕುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಗೋಲ್ಡನ್ ಸ್ಟಾರ್ ಗಣೇಶ್, ಪ್ರಜ್ವಲ್ ದೇವರಾಜ್, ಲೂಸ್ ಮಾದ ಯೋಗಿ ನಂತರ ಈಗ ಶಿವಣ್ಣ ಕೂಡ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ.


Click it and Unblock the Notifications











