ಬೆಳಗ್ಗೆ 11.44ಕ್ಕೆ ಲಿಂಗೈಕರಾದ ಶಿವಕುಮಾರ ಸ್ವಾಮೀಜಿ
ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಖ್ಯಾತಿಗಳಿಸಿಕೊಂಡಿದ್ದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ (111) ಅವರು ಇಂದು ಬೆಳಗ್ಗೆ 11.44ಕ್ಕೆ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿಯನ್ನ ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳು ಕಳೆದ ತಿಂಗಳು ಚೆನ್ನೈ ಆಸ್ಪತ್ರೆಯೊಂದರಲ್ಲಿ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ನಂತರ ಸಿದ್ಧಗಂಗಾ ಮಠಕ್ಕೆ ವಾಪಸ್ ಆಗಿದ್ದ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಆದ್ರೆ, ಭಾನುವಾರ ಮತ್ತೆ ಶ್ರೀಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡ ಹಿನ್ನೆಲೆ ಚಿಕಿತ್ಸೆ ಮುಂದುವರಿಸಲಾಗಿತ್ತು.
ಅಂತಿಮವಾಗಿ ಚಿಕಿತ್ಸೆ ಫಲಕಾರಿಯಾಗದೇ ಶ್ರೀಗಳು ಇಂದು ಲಿಂಗೈಕರಾಗಿದ್ದಾರೆ. ಕೋಟ್ಯಾಂತರ ಭಕ್ತರನ್ನ ಅಗಲಿದ ದೇವರಿಗೆ ಭಕ್ತಗಣ ಸಂತಾಪ ಸೂಚಿಸಿದೆ.

ಇನ್ನು ನಾಳೆ ಮಧ್ಯಾಹ್ನ 3 ಗಂಟೆವರೆಗೂ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಸರ್ಕಾರಿ ರಜೆ ಕೂಡ ಘೋಷಣೆ ಮಾಡಲಾಗಿದೆ.
ಅಂದ್ಹಾಗೆ, ಶಿವಕುಮಾರ ಸ್ವಾಮೀಜಿ ಅವರಿಗೆ ಕನ್ನಡ ಚಿತ್ರರಂಗಕ್ಕೂ ಒಂದು ರೀತಿ ವಿಶೇಷವಾದ ಸಂಬಂಧವಿತ್ತು. ಕನ್ನಡದ ಅನೇಕ ಚಿತ್ರಗಳಲ್ಲಿ ಶಿವಕುಮಾರ ಸ್ವಾಮೀಜಿ ಅವರ ಆದರ್ಶ, ತತ್ವಗಳನ್ನ ಅಳವಡಿಸಿಕೊಂಡಿದ್ದಾರೆ. ಹಲವು ಸಿನಿಮಾಗಳ ಆಡಿಯೋ ಬಿಡುಗಡೆ, ಸಿನಿಮಾ ಮುಹೂರ್ತ ಕಾರ್ಯಕ್ರಮವನ್ನ ಸ್ವಾಮೀಜಿ ಅವರ ಸನ್ನಿಧಿಯಲ್ಲಿ ನಡೆಸಿದ್ದಾರೆ.
'ಜ್ಞಾನಜ್ಯೋತಿ ಶ್ರೀ ಸಿದ್ಧಗಂಗಾ' ಎಂಬ ಹೆಸರಿನಲ್ಲಿ ಸಿನಿಮಾ ಕೂಡ ಮೂಡಿ ಬಂದಿದೆ. ಈ ಸಿನಿಮಾದಲ್ಲಿ ಡಾ ವಿಷ್ಣುವರ್ಧನ್, ಭಾರತಿ, ಸುಚೇಂದ್ರ ಪ್ರಸಾದ್, ಮಾಸ್ಟರ್ ಕಿಶನ್, ದೊಡ್ಡಣ್ಣ, ಶ್ರೀನಿವಾಸ ಮೂರ್ತಿ ಸೇರಿದಂತೆ ಹಲವರು ನಟಿಸಿದ್ದರು.


Click it and Unblock the Notifications











